ತುಮಕೂರು ಜಿಲ್ಲಾಸ್ಪತ್ರೆಯ ನರರೋಗ ವಿಭಾಗದ ನುರಿತ ಶಸ್ತ್ರಚಿಕಿತ್ಸಾ ತಂಡ ಕಳೆದ 8 ತಿಂಗಳಲ್ಲಿ 60 ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಜಿಲ್ಲಾಸ್ಪತ್ರೆಯ ನರರೋಗ ವಿಭಾಗದ ನುರಿತ ಶಸ್ತ್ರಚಿಕಿತ್ಸಾ ತಂಡ ಕಳೆದ 8 ತಿಂಗಳಲ್ಲಿ 60 ಕ್ಕೂ ಹೆಚ್ಚು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ಎಂಟು ತಿಂಗಳ ಹಿಂದೆ ಡಾ.ದರ್ಶನ್ ಅವರು ನಗರದ ಶ್ರೀದೇವಿ ಆಸ್ಪತ್ರೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ತಜ್ಞ ವೈದ್ಯರಾಗಿ ಬಂದಿದ್ದು, ಅವರೊಂದಿಗೆ ಅನಸ್ತೇಶಿಯಾ,ಶ್ರುಶೂಷಕರ ತಂಡ ಸೇರಿ ಇದುವರೆಗೂ 60 ಶಸ್ತ್ರಚಿಕಿತ್ಸೆ ನಡೆಸಿದೆ.ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಶಸ್ತ್ರಚಿಕಿತ್ಸೆಗೆ ಕನಿಷ್ಠವೆಂದರೆ 2.50 ಲಕ್ಷ ದಿಂದ 5 ಲಕ್ಷದವರೆಗೂ ಖರ್ಚಾಗುತ್ತದೆ. ಒಂದು ಶಸ್ತ್ರಚಿಕಿತ್ಸೆ ನಡೆಸಲು ಕನಿಷ್ಠ 2-30 ಗಂಟೆಯಿಂದ 4 ಗಂಟೆಗಳ ಕಾಲಾವಕಾಶ ಬೇಕು.ಕ್ಲಿಷ್ಟಕರ ಅಪರೇಷನ್‌ಗಳನ್ನು ನಮ್ಮ ವೈದ್ಯರು ಬಹಳ ಪರಿಶ್ರಮದಿಂದ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆಗೆ ಘನತೆ ತಂದಿದ್ದಾರೆ.ಇಡೀ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳ ಸಹಯೋಗವಿಲ್ಲದೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿರುವ ಆಸ್ಪತ್ರೆ ಎಂದರೆ ಅದು ತುಮಕೂರು ಮಾತ್ರ. ಇದಕ್ಕಾಗಿ ಡಾ.ದರ್ಶನ್‌ ಮತ್ತು ತಂಡಕ್ಕೆ ಜಿಲ್ಲಾಸ್ಪತ್ರೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.ಜಿಲ್ಲಾಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಬಡ ಹೃದ್ರೋಗಿಗಳಿಗೆ ಅನುಕೂಲವಾಗುವಂತೆ ಕ್ಯಾತಲ್ಯಾಬ್ ತೆರೆಯಲು ಮುಂದಾಗಿದ್ದೇವೆ. ಅಲ್ಲದೆ ಸದ್ಯದಲ್ಲಿಯೇ ಮೆಡಿಕಲ್ ಕಾಲೇಜು ಸಹ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ತಿಂಗಳಿಗೆ 400 ಹೆರಿಗೆಗಳು ನಡೆಯುತ್ತಿವೆ. ಒಂದು ಬ್ಲಡ್ ಬ್ಯಾಂಕ್ ಇದ್ದು, ತಿಂಗಳಲ್ಲಿ 25 ಕ್ಯಾಂಪ್‌ಗಳ ಮೂಲಕ 2 ಸಾವಿರ ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿದೆ. ನಮ್ಮ ಬ್ಲಡ್ ಬ್ಯಾಂಕ್‌ನಿಂದ ರಕ್ತ ಬೇಕು ಎಂದವರು, ಒಬ್ಬರ ರಕ್ತ ದಾನ ಮಾಡಿ, ತೆಗೆದುಕೊಂಡು ಹೋಗಬಹುದಾಗಿದೆ. ಹಾಗಾಗಿ ಜನರು ರಕ್ತದಾನಕ್ಕೆ ಮುಂದಾಗಬೇಕು ಎಂದು ಡಾ.ಅಸ್ಗರ್ ಬೇಗ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ.ನಾಗನಾಥ್ ಉಪಸ್ಥಿತರಿದ್ದರು