ಮುನಿರಾಬಾದ: ಹುಲಿಗೆಮ್ಮದೇವಿ ಜಾತ್ರೆಯ ಎರಡನೇ ದಿನವಾದ ಮಂಗಳವಾರ ಉರಿ ಬಿಸಿಲು ಹಾಗೂ ಸಾರಿಗೆ ಸಮಸ್ಯೆ ಲೆಕ್ಕಿಸದೇ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ಭಕ್ತರು ದೇವಿಯ ದರ್ಶನ ಭಾಗ್ಯ ಪಡೆದರು.

ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ದೇವಸ್ಥಾನದಿಂದ ಸುಮಾರು ಎರಡು ಕಿಮೀ ದೂರದಲ್ಲಿ ನಿಲ್ಲಿಸಲಾಗುತ್ತಿದೆ. ಹೊಸಪೇಟೆ ಕಡೆಯಿಂದ ಬರುವ ವಾಹನಗಳನ್ನು ಕೋರಾ ಮಂಡಲ ಕಾರ್ಖಾನೆ ಮುಂಭಾಗದಲ್ಲಿರುವ ತಾತ್ಕಾಲಿಕ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತಿದೆ. ಕಲ್ಯಾಣ್ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಕಡೆಯಿಂದ ಬರುವ ಭಕ್ತರ ವಾಹನಗಳನ್ನು ತುಂಗಭದ್ರಾ ಶಾಲಾ ಆವರಣದಲ್ಲಿ ನಿಲ್ಲಿಸಲಾಗುತ್ತದೆ. ಅಮ್ಮನವರ ದರ್ಶನಕ್ಕೆ ಬರುವ ಭಕ್ತರು ಉರಿ ಬಿಸಿಲಿನಲ್ಲಿ ಸುಮಾರು ಎರಡು ಕಿಮೀ ನಡೆದುಕೊಂಡು ದೇವಸ್ಥಾನಕ್ಕೆ ಬಂದು ಅಮ್ಮನವರ ದರ್ಶನ ಪಡೆದಿದ್ದಾರೆ. ಹಿರಿಯ ನಾಗರಿಕರು ಹಾಗೂ ಮಹಿಳೆಯರು ಸಹ ಇದಕ್ಕೆ ಹೊರತಾಗಿಲ್ಲ.

ಹುಲಿಗೆಮ್ಮ ದೇವಸ್ಥಾನದ ರಸ್ತೆಗಳನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿ ಪಡೆಸಬೇಕು ಎಂದು ಗ್ರಾಮಸ್ಥ ಹಾಗೂ ಮಾಜಿ ಸೈನಿಕ ಸಂಜೀವ ತೋಟಗಂಟಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಹುಲಿಗಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರವು ಅಮ್ಮನವರ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು 4 ಚಕ್ರದ ವಾಹನ ಸವಾರರಿಗೆ ಪ್ರತ್ಯೇಕ ರಸ್ತೆ ಕಲ್ಪಿಸಬೇಕು. ಇದರಿಂದ ಅವರು ನೇರವಾಗಿ ಅಮ್ಮ ನಿಲಯದ ಹಿಂಭಾಗ ಹಾಗೂ ಹೊಳೆದಂಡೆಯಲ್ಲಿ ನಿರ್ಮಿಸಲಾದ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಅನುಕೂಲವಾಗುತ್ತದೆ. ಸರ್ಕಾರಿ ಬಸ್‌ ಸಹ ಈ ರಸ್ತೆ ಮೂಲಕ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟರೆ ಬಸ್ಸಿನಲ್ಲಿ ಪ್ರಯಾಣಿಸುವ ಲಕ್ಷಾಂತರ ಮಹಿಳೆಯರಿಗೆ ಹಾಗೂ ಭಕ್ತಾದಿಗಳು ಉರಿ ಬಿಸಿಲು, ಮಳೆ ಹಾಗೂ ಚಳಿಗಾಲದಲ್ಲಿ 2 ಕಿಮೀ ನಡೆದು ದೇವಸ್ಥಾನಕ್ಕೆ ಬರುವ ತೊಂದರೆ ತಪ್ಪುತ್ತದೆ ಎಂದರು ನಿವೃತ್ತ ಯೋಧರು ಸಲಹೆ ನೀಡಿದ್ದಾರೆ.

ತುಂಗಭದ್ರ ಶಾಲೆಯಿಂದ ನೇರವಾಗಿ ಹೊಳೆದಂಡೆಗೆ ಹಾಗೂ ಹಳೆ ಲಿಂಗಾಪೂರ್ ಕಡೆಯಿಂದ ನೇರವಾಗಿ ಹೊಳೆದಂಡೆಗೆ ನೂತನವಾದ ರಿಂಗ್ ರಸ್ತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ 100 ಎಕರೆ ಭೂಮಿ ಭೂಸ್ವಾಧೀನ ಮಾಡುವ ಪ್ರಸ್ತಾಪ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಪ್ರಸ್ತಾವನೆ ಮಂಜೂರಾತಿ ದೊರೆತ ತಕ್ಷಣ ರಿಂಗ್ ರೋಡ್ ನಿರ್ಮಾಣ ಕಾಮಗಾರಿ ಕೈಗೆತ್ತಿ ಕೊಳ್ಳಲಾಗುವುದು ಎಂದು ಸಂಸದ ರಾಜಶೇಖರ್ ಹಿಟ್ನಾಳ್ ತಿಳಿಸಿದ್ದಾರೆ.