ಉಜಿರೆಯ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 36ನೇ ವರ್ಷದ ಮೊಸರು ಕುಡಿಕೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಆರಂಭ

ಬೆಳ್ತಂಗಡಿ: ಉಜಿರೆಯ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 36ನೇ ವರ್ಷದ ಮೊಸರು ಕುಡಿಕೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಆರಂಭವಾಯಿತು.

ದೇವಳದ ಅರ್ಚಕ ಶ್ರೀನಿವಾಸ ಹೊಳ್ಳ ಲೋಕದಲ್ಲಿ ಸುಖ ಶಾಂತಿ ಸಮೃದ್ಧಿಯಾಗಿ ನೆಲೆಸುವಂತೆ ಶ್ರೀ ದೇವರಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ನೆರವೇರಿಸಿದರು.ರಥಬೀದಿಯಲ್ಲಿ ಮೊಸರು ಕುಡಿಕೆ ಉತ್ಸವವನ್ನು ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಶ್ವಕ್ಕೆ ಜ್ಞಾನದ ಬೆಳಕು ನೀಡುವವನು ಶ್ರೀ ಕೃಷ್ಣ . ಶ್ರಾವಣ ಮಾಸಾರಂಭದೊಂದಿಗೆ ಹಬ್ಬಗಳ ಸಾಲು ಸಾಲು ಆರಂಭಗೊಂಡು ಹೊಸ ಹುರುಪಿನೊಂದಿಗೆ ಧಾರ್ಮಿಕ ಆಚರಣೆಗಳು ನಡೆದುಕೊಂಡು ಬರುತ್ತಿವೆ. ಸಾಮಾನ್ಯ ಮನುಷ್ಯನಂತೆ ಬದುಕಿ ಜೀವನದುದ್ದಕ್ಕೂ ಸಮಾಜದ ಅಭ್ಯುದಯಕ್ಕೆ ನೀಡಿದ ಸಂದೇಶ ಅನುಕರಣೀಯ, ಅನುಸರಣೀಯವಾಗಿದೆ. ಜಗತ್ತಿನಲ್ಲಿ ಯುದ್ಧ, ದೊಂಬಿ ನಡೆಯುತ್ತಿರುವ ಕಾಲಘಟ್ಟದಲ್ಲಿ ಶ್ರೀ ಕೃಷ್ಣನ ಸಂದೇಶವನ್ನು ಮನನ ಮಾಡಿಕೊಂಡು ಉತ್ಸವದ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ. ಎಸ್ ಮಾತನಾಡಿ ಧರ್ಮ ಸಂಸ್ಥಾಪನೆಗಾಗಿ ಮತ್ತೆ ಮತ್ತೆ ಹುಟ್ಟಿಬರುತ್ತೇನೆಂಬ ಶ್ರೀ ಕೃಷ್ಣನ ಸಂದೇಶದಂತೆ ನಾಡಿನಲ್ಲಿ ಸುಖ ಶಾಂತಿ, ಧರ್ಮ ನೆಲೆಯಾಗಲೆಂದು ಆಶಿಸಿದರು. ಮುಖ್ಯ ಅತಿಥಿ ಎಸ್ ಡಿ ಎಂ ತಾಂತ್ರಿಕ ಕಾಲೇಜಿನ ಉಪನ್ಯಾಸಕ ಡಾ|ರವೀಶ್ ಪಡುಮಲೆ ಮಾತನಾಡಿ ಧರ್ಮ ಪರಿಚಾಲನೆಗಾಗಿ ಅವತರಿಸಿ ದ ಶ್ರೀ ಕೃಷ್ಣನನ್ನು ಎಲ್ಲರೂ ನೆನಪಿಸಿ,ಎಲ್ಲರೂ ಜತೆಸೇರಿ ಹಬ್ಬವನ್ನು ಆಚರಿಸಿ ಸಂಸ್ಕೃತಿಯನ್ನು ಮುಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕೃತಿ ಸಂಸ್ಕಾರದ ಮೂಲಕ ಸಮಾಜ ಕಟ್ಟುವ ಕಾರ್ಯದಲ್ಲಿ ಮಕ್ಕಳಿಗೆ ಹಿರಿಯರ ಮೇಲಿನ ಗೌರವ, ಮನೆಗೊಂದು ಭಗವದ್ಗೀತೆ,ರಾಮಾಯಣ ಕೃತಿಯೊಂದಿಗೆ ಧರ್ಮದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕು ಎಂದರು. ಉಜಿರೆ ಗ್ರಾ,ಪಂ.ಆಡಳಿತಾಧಿಕಾರಿ ಮಹಾವೀರ ಶೇಬಣ್ಣವರ ಶುಭಾಶಂಸನೆಗೈದರು.

ಕೆ.ಮೋಹನ ಶೆಟ್ಟಿಗಾರ್,ಪದ್ಮನಾಭ ಶೆಟ್ಟಿಗಾರ್, ಶ್ರೀಧರ ಪೂಜಾರಿ, ಗುರುರಾಜ್,ರವಿಕುಮಾರ್ ಬರಮೇಲು , ಬಾಲಕೃಷ್ಣ ಕೇರಿಮಾರು ಸೀತಾರಾಮ ಶೆಟ್ಟಿ ಕೆಂಬರ್ಜೆ , ಪ್ರಧಾನ ಕಾರ್ಯದರ್ಶಿ ಅರುಣಕುಮಾರ್ ಬನಸಿರಿ, ಜತೆ ಕಾರ್ಯದರ್ಶಿ ನಾಗರಾಜ ಎಚ್ ಎನ್ ,ಕೋಶಾಧಿಕಾರಿ ರಜತ್ ಗೌಡಮಲೆಬೆಟ್ಟು ,ಶ್ರೀನಿವಾಸ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು. ಮೋಹನ ಶೆಟ್ಟಿಗಾರ್ ಸ್ವಾಗತಿಸಿ,ಮೋಹನ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕೇರಿಮಾರು ವಂದಿಸಿದರು.