ಸಾರಾಂಶ
ಚಿಕ್ಕಮಗಳೂರು : ಆಂಗ್ಲ ಭಾಷೆ ಜೊತೆಗೆ ಮಾತೃ ಸ್ವರೂಪಿ ಕನ್ನಡಕ್ಕೂ ಹೆಚ್ಚಿನ ಮಹತ್ವ ನೀಡುವುದು ಅವಶ್ಯಕವಾಗಿದ್ದು ಮಕ್ಕಳಿಗೆ ಬಾಲ್ಯದಲ್ಲೇ ಭಾಷಾಭಿಮಾನ ಮೂಡಿಸುವ ದಂತಕಥೆಗಳನ್ನು ಪಾಲಕರು ಪರಿಚಯಿಸಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ನಗರದ ನರ್ಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ಧ ಕನ್ನ ಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲೇ ಮಕ್ಕಳಿಗೆ ಕನ್ನಡಪ್ರೇಮ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಚುಟುಕು ಸಾಹಿತ್ಯ, ನೀತಿಕಥೆ, ಗಾದೆ, ಒಗಟು, ಹನಿಗವನ ಸೇರಿದಂತೆ ಕನ್ನಡಾಭಿಮಾನದ ಆಸಕ್ತಿಯನ್ನು ಪ್ರೇರೇಪಿಸಬೇಕು.
ಆಗ ಮಾತ್ರ ಬಾಲ್ಯದಿಂದಲೇ ಕನ್ನಡ ಪ್ರೀತಿ ಚುಗುರೊಡೆಯಲು ಸಾಧ್ಯವಾಗಲಿದೆ ಎಂದರು. ನಾಡಿನ ಖ್ಯಾತ ಕವಿಗಳು, ಶ್ರೇಷ್ಠ ಸಂತರು, ದಾರ್ಶನಿಕರು ವಿಭಿನ್ನ ಶೈಲಿಯಿಂದಲೇ ಕೃತಿಗಳ ರಚನೆ, ವಚನಗಳ ಮುಖಾಂತರ ಭಾಷಾಭಿಮಾನ ಮೆರೆದಿರುವ ಕಾರಣ ಕನ್ನಡ ಎಲ್ಲೆಡೆ ವಿಶಾಲವಾಗಿ ಪಸರಿಸಿದೆ. ಹೀಗಾಗಿ ಇಂದಿನ ಯುವ ಸಮೂಹ ಕನ್ನಡದ ಬೆಳಕನ್ನು ಬತ್ತದಂತೆ ನಿಗಾವಹಿಸಬೇಕು ಎಂದು ಕರೆ ನೀಡಿದರು.
ಶಾಲೆಯ ಬೋಧಕ ವರ್ಗ ಅನೇಕ ವಿಷಯಗಳ ಅಭ್ಯಾಸಿಸುವ ವೇಳೆ ಭಾಷಾಭಿಮಾನದ ಸೊಗಡನ್ನು ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಅಲ್ಲದೇ ನಾಡಿಗಾಗಿ ದುಡಿದ ಕವಿ ಸಂತರ ಜೀವನ ಚರಿತ್ರೆಯನ್ನು ಪರಿಚಯಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಕನ್ನಡ ಉಳಿಸಿ, ಬೆಳೆಸಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆ ಪ್ರಾಂಶುಪಾಲರಾದ ಸುಪ್ರೀಯಾ , ನರ್ಚರ್ ಶಾಲೆ ಆಂಗ್ಲ ಮಾಧ್ಯಮದ ಜೊತೆಗೆ ಕನ್ನಡವನ್ನು ಮಕ್ಕಳಿಗೆ ಕಲಿಸುತ್ತಿದೆ. ಆ ನಿಟ್ಟಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಜ್ಯದ ಸೇನಾನಿಗಳು, ಸಾಧಕರ ತ್ಯಾಗ, ಬಲಿದಾನದ ಪಾಠವನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಪೂಜಾರಿ ಕಣ್ಣನ್ ಅವರಿಗೆ ಕನ್ನಡ ರಥದ ಮೂಲಕ ವೇದಿಕೆವರೆಗೆ ಕರೆ ತರಲಾಯಿತು. ವಿಶೇಷವಾಗಿ ವಿಜಯನಗರ ಸಾಮ್ರಾಜ್ಯ ಪ್ರತಿಬಿಂಬಿಸುವ ಸ್ತಬ್ದಚಿತ್ರಗಳು ಶಾಲಾ ಆವರಣದಲ್ಲಿ ಪ್ರದರ್ಶನಗೊಂಡವು. ಸಾಂಸ್ಕೃತಿಕ ಕಾರ್ಯಕ್ರಮ ನಂತರ ಉತ್ತಮ ಸ್ತಬ್ದಚಿತ್ರ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆ ವ್ಯವಸ್ಥಾಪಕ ರಾಕೇಶ್, ಪ್ರೀತೇಶ್, ಶಿಕ್ಷಕರಾದ ಪುಷ್ಪರಾಜ್, ಕಾವ್ಯ, ಸವಿತಾ ಉಪಸ್ಥಿತರಿದ್ದರು. 8 ಕೆಸಿಕೆಎಂ 1ಚಿಕ್ಕಮಗಳೂರಿನ ನರ್ಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದ ಕನ್ನ ಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಿರೇಮಗಳೂರು ಕಣ್ಣನ್ ಉದ್ಘಾಟಿಸಿದರು. ಸುಪ್ರೀಯಾ, ರಾಕೇಶ್, ಪ್ರಿತೇಶ್ ಇದ್ದರು.