ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು: ಶ್ರೀನಿವಾಸ್

| Published : Nov 27 2024, 01:05 AM IST

ಸಾರಾಂಶ

ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌ ಅವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್‌, ಎಸ್‌.ಎಸ್‌. ವೆಂಕಟೇಶ್‌, ವೀರೇಂದ್ರ ಇದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಮ್ಮ ನೆಲ, ಭಾಷೆ, ಸಂಸ್ಕೃತಿ ನಾಡಿನ ಮತ್ತು ಪರಂಪರೆಯ ಅಸ್ಮಿತೆಯಾಗಿದೆ. ದೇಶದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಪುಣ್ಯ ಭೂಮಿಯಲ್ಲಿ ಜನಿಸಿರುವುದಕ್ಕೆ ನಾವು ಹೆಮ್ಮೆಪಡಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ನಗರದ ಎಐಟಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ಧ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದಲ್ಲಿ ಹಲವಾರು ಭಾಷೆಗಳಲ್ಲಿ ಅತ್ಯಂತ ಸುಂದರ ಭಾಷೆ ಕನ್ನಡ. ಆಯಾ ಪ್ರದೇಶದ ನಿವಾಸಿಗಳು ಭಾಷೆಯ ಸಂಸ್ಕೃತಿ ಉಳಿಸಿದಂತೆ, ಪುರಾತನ ಇತಿಹಾಸವುಳ್ಳ ಕನ್ನಡತನವನ್ನು ಉಳಿಸಿ ಎಲ್ಲೆಡೆ ಹಬ್ಬಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಇತಿಹಾಸ ಕೊಂಡೊಯ್ಯಲು ಸಾಧ್ಯ ಎಂದರು.

ಸಾಮಾನ್ಯವಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಹುದ್ದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಆಂಗ್ಲ ಭಾಷೆ ಅನಿವಾರ್ಯ. ಇದರ ಜತೆಗೆ ಮಾತೃ ಭಾಷೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ದೇಶ, ವಿದೇಶಗಳಲ್ಲಿ ಉದ್ಯೋಗ ಅರಸಿದರೂ ಕನ್ನಡತನ, ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ, ಕದಂಬರು, ಹೊಯ್ಸಳರು, ಚಾಲುಕ್ಯರು ನಾಡಿನ ಸಂಸ್ಕೃತಿ ಎತ್ತಿ ಹಿಡಿದ್ದರು. ವಿಜಯನಗರ ಹಾಗೂ ಮೈಸೂರು ಪ್ರಾಂತ್ಯವನ್ನು ಆಳ್ವಿಕೆ ನಡೆಸಿದ ಅರಸರು, ಕವಿ ಸಂತರ ಗೀತೆಗಳು, ವಚನಗಳ ಮುಖಾಂತರ ಕನ್ನಡ ಭಾಷೆ ನಾಡಿನಾದ್ಯಂತ ತುಂಬಿ ಹರಿಯುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್‌ ಅವರು, ಕನ್ನಡದ ಇತಿಹಾಸ ಪುರಾತನವಾದುದು, ಜಗತ್ತಿನ ಲಿಪಿಗಳಲ್ಲೇ ಕನ್ನಡದ ಲಿಪಿ ರಾಣಿಯಂತೆ. ವಿದ್ಯಾರ್ಥಿಗಳು ಭಾಷೆಯ ಇತಿಹಾಸ ತಿಳಿಯಲು ಸಮಗ್ರ ಅಧ್ಯಯನ ನಡೆಸುವುದು ಬಹಳ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಮೆಕ್ಯಾನಿಕ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಜಿ.ಎಂ.ಸತ್ಯನಾರಾಯಣ್, ಎಲೆಕ್ಟ್ರೀಕ್ ಇಂಜಿನಿಯರ್ ವಿಭಾಗದ ವೀರೇಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೋನಿಶಾ ಸಂಗಡಿಗರು ಪ್ರಾರ್ಥಿಸಿದರು. ಮೌಲ್ಯ ಸ್ವಾಗತಿಸಿದರು.