ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಧುನಿಕ ಯುಗದಲ್ಲಿ ಗಾಂಧಿ ಮಾರ್ಗದಲ್ಲಿ ಮುನ್ನಡೆಯುವುದು ಕಷ್ಟವೆನಿಸಿದರೂ ಅವರ ಜೀವನ ಮಾರ್ಗ ಪ್ರತಿಯೊಬ್ಬರಿಗೂ ಆದರ್ಶವಾಗಿದೆ. ಯುವಜನರು ಗಾಂಧಿ ಅನುಸರಿಸಿದ ತತ್ವಾದರ್ಶಗಳಲ್ಲಿ ಕೆಲವನ್ನಾದರೂ ಮೈಗೂಡಿಸಿಕೊಳ್ಳುವುದು ಅಗತ್ಯವಿದೆ ಎಂದು ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡ ಹೇಳಿದರು.ನಗರದಲ್ಲಿರುವ ಗಾಂಧಿ ಭವನದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ, ಗಾಂಧಿ ಸ್ಮಾರಕ ಟ್ರಸ್ಟ್ನಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಮತ್ತು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಾಂಧೀಜಿ ಅವರು ಸ್ವಾತಂತ್ರ್ಯಕ್ಕಾಗಿ ದೇಶದ ಜನರನ್ನೆಲ್ಲಾ ಒಗ್ಗೂಡಿಸಿದರು. ಅಹಿಂಸಾ ಮಾರ್ಗದ ಮೂಲಕವೇ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ಮಾನವೀಯ ಗುಣಗಳ ಮೂರ್ತಿರೂಪದಂತೆ ಬದುಕಿದರು. ಅದಕ್ಕಾಗಿಯೇ ಅವರು ದೇಶದ ಮಹಾತ್ಮ ಎಂದೆನಿಸಿಕೊಂಡರು ಎಂದರು.ಗಾಂಧಿ ತತ್ವ-ಆದರ್ಶ, ಜೀವನ ಮೌಲ್ಯಗಳನ್ನು ತಿಳಿಸುವ ಸಲುವಾಗಿಯೇ ಜಿ.ಮಲ್ಲೀಗೆರೆ ಬಳಿ ಗಾಂಧಿ ಗ್ರಾಮವನ್ನು ತೆರೆಯಲಾಗಿದೆ. ಯುವಕರು, ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ವೀಕ್ಷಿಸಬೇಕು ಎಂದ ಅವರು, ಅ.೧೧ರಂದು ಗಾಂಧಿಗ್ರಾಮದಲ್ಲಿ ಶ್ರಮದಾನ ಅಭಿಯಾನ ನಡೆಯಲಿದೆ. ಸುಮಾರು ೨ಸಾವಿರ ಜನರೊಂದಿಗೆ ಶ್ರಮದಾನ ಅಭಿಯಾನ ನಡೆಸಲಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಅಲೆಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಮಹಾತ್ಮ ಗಾಂಧೀಜಿ ಜಯಂತಿಯನ್ನು ವಿಶ್ವಸಂಸ್ಥೆ ವಿಶ್ವ ಅಹಿಂಸ ದಿನವಾಗಿ ಘೋಷಿಸಿದ್ದು, ೧೮೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಗಾಂಧಿ ಅವರನ್ನು ಸ್ಮರಿಸಲಾಗುತ್ತಿದೆ ಎಂದರು.ಗಾಂಧಿ ಜನ್ಮದಿನದಂದೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ಜನಿಸಿರುವುದು ಮತ್ತೊಂದು ವಿಶೇಷ.ಇಬ್ಬರ ಮಹನೀಯರ ತ್ಯಾಗ ಮತ್ತು ಕೊಡುಗೆ ಅಪಾರ. ಯುವಜನತೆ ಇಂತಹವರ ತತ್ವ ಮತ್ತು ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಗಾಂಧೀಜಿ ಅವರ ಸಾವು ಮಾನವೀಯತೆಯ ಸಾವು ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಪ್ರದೀಪ್ಕುಮಾರ್ ಹೆಬ್ರಿ ಮಾತನಾಡಿ, ಗಾಂಧಿ ಗ್ರಾಮಕ್ಕೆ ಪ್ರತಿ ವಾರ ಒಂದೊಂದು ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ದು, ಸೇವಾ ಚಟುವಟಿಕೆ, ಗಾಂಧೀಜಿ ಅವರ ಸಂದೇಶಗಳ ಬಗ್ಗೆ ಅರಿವು ಹೆಚ್ಚಿಸುವ ಕಾರ್ಯ ನಡೆಸಬೇಕು ಎಂದರು.ಸತ್ಯ ಮತ್ತು ಅಹಿಂಸಾ ತತ್ವದ ಮೂಲಕವೇ ಜನಮನ ಗೆದ್ದು, ಅಹಿಂಸಾ ತತ್ವದ ಮೂಲಕವೇ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದವರು ಗಾಂಧೀಜಿ. ಶಾಸ್ತ್ರಿ ಅವರು ತಮ್ಮ ಐತಿಹಾಸಿಕ ಘೋಷಣೆ ‘ಜೈ ಜವಾನ್, ಜೈ ಕಿಸಾನ್’ಗಾಗಿ ಸ್ಮರಿಸಲ್ಪಡುತ್ತಾರೆ. ಇದು ಸೈನಿಕರು ಮತ್ತು ರೈತರ ಅಮೂಲ್ಯ ಕೊಡುಗೆಗಳನ್ನು ಗೌರವಿಸುತ್ತದೆ. ಇದು ಯುವಪೀಳಿಗೆಗೆ ಸ್ಫೂರ್ತಿ ನೀಡುವ ಸಂದೇಶವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಮನೋವೈದ್ಯರ ಸಂಘದ ಅಧ್ಯಕ್ಷ ಡಾ.ಸತ್ಯನಾರಾಯಣ ರಾವ್ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾಯಕರು ದೇಶಭಕ್ತಿ ಗೀತೆ ಮತ್ತು ಸುಗಮಸಂಗೀತ ಗೀತೆಗಳನ್ನು ಹಾಡಿದರು.ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಪ್ರೊ.ಡೇವಿಡ್, ಚಂದ್ರಶೇಖರ್, ಚಿಂತಕ ಲಿಂಗಣ್ಣ ಬಂಧೂಕಾರ್, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಧನಂಜಯ ಧರಸಗುಪ್ಪೆ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮರಿಗೌಡ, ಜಿ.ವಿ ನಾಗರಾಜು, ಪ್ರೊ.ಶಿವಕುಮಾರ್ ಮತ್ತಿತರರಿದ್ದರು.