ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಜನಾಂದೋಲನ ರೂಪಿಸಲು ಕಾಂಗ್ರೆಸ್‌ ಸಜ್ಜಾಗಿದ್ದು, ಬೆಲೆ ಏರಿಕೆ ನೀತಿಗಳು, ನಿರುದ್ಯೋಗ, ನೀಟ್‌ ಪ್ರಶ್ನೆ ಪತ್ರಿಕೆ ಅಕ್ರಮ, ರೈತ ವಿರೋಧಿ ನೀತಿಗಳ ವಿರುದ್ದ ಜಾಗೃತಿ ಮೂಡಿಸಲಾಗುವುದು ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಜನಾಂದೋಲನ ರೂಪಿಸಲು ಕಾಂಗ್ರೆಸ್‌ ಸಜ್ಜಾಗಿದ್ದು, ಬೆಲೆ ಏರಿಕೆ ನೀತಿಗಳು, ನಿರುದ್ಯೋಗ, ನೀಟ್‌ ಪ್ರಶ್ನೆ ಪತ್ರಿಕೆ ಅಕ್ರಮ, ರೈತ ವಿರೋಧಿ ನೀತಿಗಳ ವಿರುದ್ದ ಜಾಗೃತಿ ಮೂಡಿಸಲಾಗುವುದು ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಯುದ್ದ ಸಂಕಷ್ಟದ ಹಿನ್ನಲೆ ಕಚ್ಛಾ ತೈಲದ ಬೆಲೆ ಏರಿಕೆಯಾದಾಗ ಸಹಜವಾಗಿಯೇ ಪೆಟ್ರೋಲ್‌, ಅಡುಗೆ ಅನಿಲ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕನಿಷ್ಠ ಹಂತಕ್ಕೆ ಕುಸಿದಿದೆ. ಆದರೆ ಕೇಂದ್ರ ಸರ್ಕಾರ ಏರಿಸಿರುವ ಬೆಲೆಗಳನ್ನು ಇಳಿಸುವ ಗೋಜಿಗೆ ಹೋಗುತ್ತಿಲ್ಲ. ರೈತರಿಗೆ ರಸಗೊಬ್ಬರಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ, ಬೆಲೆ ಏರಿಕೆಯ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.

ಬಾಲ ಭವನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ನಾಯ್ಡು ಮಾತನಾಡಿ, ಒಬ್ಬ ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ಗಾಂಧಿ ಸಂತ್ರಸ್ಥ ವಿದ್ಯಾರ್ಥಿಗಳ ಬಳಿ ಹೋಗಿ ಸಮಸ್ಯೆಗಳ ಬಗ್ಗೆ ಸಂವಾದ ಮಾಡುತ್ತಾರೆ. ಆದರೆ ಅಧಿಕಾರದಲ್ಲಿರುವ ಪ್ರಧಾನಿ, ಸಚಿವರು ಈ ಕಾಳಜಿಯನ್ನು ತೋರುವುದಿಲ್ಲ. ಈಗಾಗಲೇ ನೆರೆ ದೇಶಗಳಲ್ಲಿ ಯುವಜನರ ಕ್ರಾಂತಿಗಳು ಅಲ್ಲಿನ ರಾಜಕೀಯ ಅಸ್ತಿತ್ವವನ್ನೇ ಬುಡಮೇಲು ಮಾಡಿರುವ ಉದಾಹರಣೆಗಳನ್ನು ಮರೆಯುವಂತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಯುವಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿಭೆ ಆಧಾರಿತವಾಗಿ ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ನೀಡುವಲ್ಲಿ ಕರ್ನಾಟಕದ ಸಿಇಟಿ ಮಾದರಿಯಾಗಿತ್ತು. ಇಂತಹ ವ್ಯವಸ್ಥೆಯನ್ನು ಹಾಳು ಮಾಡಿದ ಕೀರ್ತಿ ಕೇಂದ್ರಕ್ಕೆ ಸಲ್ಲುತ್ತದೆ ಎಂದರು.

ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ನೀಟ್‌ ಪರೀಕ್ಷೆ ಅಕ್ರಮಗಳನ್ನು ವಿರೋಧಿಸಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಧ್ವನಿ ಹೆಸರಿನಲ್ಲಿ ಬೃಹತ್‌ ಆಂದೋಲನವನ್ನು ರೂಪಿಸಲಾಗಿದೆ. 4 ದಿನಗಳ ಹಿಂದೆ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮುಂದುವರೆದು, ಜುಲೈ ಅಂತ್ಯದ ವರೆಗೆ ವಿವಿಧ ಹಂತಗಳಲ್ಲಿ ಜಾಗೃತಿ ಸಭೆಗಳು, ಅರಿವು ಮೂಡಿಸುವ ಕಾರ್ಯಕ್ರಮ, ಕ್ಯಾಂಪಸ್‌ಗಳ ಸಂಪರ್ಕ ಕಾರ್ಯಕ್ರಮಗಳು ನಡೆಯಲಿವೆ. ಆ.9ರಂದು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ತಿಪ್ಪೂರು ಬೈರೇಗೌಡ, ವೆಂಕಟೇಶ್‌ ಅಪ್ಪಿ, ಬಿ.ಜಿ.ಹೇಮಂತರಾಜು, ಎಚ್.ಎಸ್.ರೇವತಿ, ರುಕ್ಮಿಣಿ, ಸಂದೀಪ್‌, ಮುನಿರಾಜ್‌, ಅಂಜನಮೂರ್ತಿ, ರಾಜೇಶ್ ಮತ್ತಿತರರು ಹಾಜರಿದ್ದರು.

29ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು.