ಪಶ್ಚಿಮಘಟ್ಟ ನಾಶಮಾಡುವಂತಹ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೂಡಲೇ ಕೈಬಿಡಬೇಕು, ರಾಜ್ಯದಲ್ಲಿ ಕಬ್ಬಿನ ಬೆಲೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ರಾಜ್ಯ ಬೆಲೆ ನಿಗದಿ ನೀತಿಯನ್ನು ರೂಪಿಸಬೇಕು ಎಂಬುದು ಸೇರಿದಂತೆ ರೈತರ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನ.26ರಂದು ‘ಬೆಂಗಳೂರು ಚಲೋ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪಶ್ಚಿಮಘಟ್ಟ ನಾಶಮಾಡುವಂತಹ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೂಡಲೇ ಕೈಬಿಡಬೇಕು, ರಾಜ್ಯದಲ್ಲಿ ಕಬ್ಬಿನ ಬೆಲೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ರಾಜ್ಯ ಬೆಲೆ ನಿಗದಿ ನೀತಿಯನ್ನು ರೂಪಿಸಬೇಕು ಎಂಬುದು ಸೇರಿದಂತೆ ರೈತರ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನ.26ರಂದು ‘ಬೆಂಗಳೂರು ಚಲೋ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಬಲವಂತದ ಭೂಸ್ವಾಧೀನಗಳನ್ನು ಕೈಬಿಡಬೇಕು. ಬಗರ್ಹುಕುಂ ಭೂಮಿಗಳನ್ನು ಒನ್ಟೈಮ್ ಸೆಟಲ್ಮೆಂಟ್ ಆಧಾರದಲ್ಲಿ ಹಂಚುವ ಗಟ್ಟಿತೀರ್ಮಾ ನವನ್ನು ಸರ್ಕಾರ ಕೈಗೊಳ್ಳಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಾಮಾಜಿ ಅವಮಾನ ಕ್ರಿಯೆಗಳ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು. ಎಲ್ಲಾ ಕಿರು ಹಣಕಾಸು ಸಂಸ್ಥೆಗಳನ್ನು ಆರ್ಬಿಐ ನಿಯಂತ್ರಣದಡಿ ತರಬೇಕು. ಸಣ್ಣ ರೈತರು ಮಾಡಿರುವ ಸಾಲ ಮನ್ನಾಕ್ಕೆ ರಾಜ್ಯಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಸಂಪರ್ಕವೆಚ್ಚವನ್ನು ರೈತರ ಮೇಲೆಯೇ ಹೇರುವ ರೀತಿ ರದ್ದಾಗಬೇಕು. ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್ಗೇಟ್ಗಳನ್ನು ಬದಲಾಯಿಸಲು ಒಂದು ಬೆಳೆಗೆ ನೀರು ಕೊಡುವುದಿಲ್ಲವೆಂಬ ತೀರ್ಮಾನವನ್ನು ಬದಲಾಯಿಸಬೇಕು. ಮೆಕ್ಕೆಜೋಳ ಸೇರಿದಂತೆ ಎಲ್ಲಾ ಬೆಳೆಗಳ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು. ಶ್ರಮಜೀವಿಗಳನ್ನು ಗುಲಾಮರಂತೆ ನಡೆಸಿಕೊಳ್ಳುವ ಅಮಾನವೀಯ ಪದ್ಧತಿಗಳು ಕೂಡಲೇ ಕೊನೆಗೊಳ್ಳಬೇಕು ಎಂದ ಅವರು, ರಾಜ್ಯ ಸರ್ಕಾರವು ಹೊಸ ಕನಿಷ್ಠ ವೇತನ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಸಮಗ್ರ ಕ್ರಿಯಾಯೋಜನೆ ರೂಪಿಸಬೇಕು. ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ತಂದಿದ್ದ ಹಾಗೂ ಈಗ ಕೇಂದ್ರ ಸರ್ಕಾರ ತರುತ್ತಿರುವ ಭೂ ತಿದ್ದುಪಡಿ ನೀತಿ, ಎಪಿಎಂಸಿ ತಿದ್ದುಪಡಿ ನೀತಿ ಮುಂತಾದವುಗಳನ್ನು ಸರ್ಕಾರ ರದ್ದುಗೊಳಿಸಬೇಕು. ಕೇಂದ್ರ ಸರ್ಕಾರ ತರಲು ಹೊರಟಿರುವ ರಾಷ್ಟ್ರೀಯ ಕೃಷಿನೀತಿಯನ್ನು ತಿರಸ್ಕರಿಸಬೇಕು ಎಂದರು.
ಪ್ರಜಾತಂತ್ರವನ್ನು ಮುಗಿಸಲು ಹೊರಟಿರುವ ಎಸ್ಐಆರ್ ಪ್ರಕ್ರಿಯೆ ಯನ್ನು ಬಲವಾಗಿ ಪ್ರತಿರೋದಿಸಲು ಕ್ರಮವಹಿಸಬೇಕು. ಅಲ್ಲದೆ ಬಾಗಲಕೋಟೆಯ ಸೈದಾಪುರದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳನ್ನು ಸುಟ್ಟುಹಾಕಿರುವುದನ್ನು ರೈತಸಂಘ ತೀವ್ರವಾಗಿ ಖಂಡಿಸುತ್ತದೆ. ಅವೈಜ್ಞಾನಿಕ ಎಫ್ಆರ್ಪಿಯನ್ನು ನಿಗಧಿಮಾಡುವ ಮೂಲಕ ಕೇಂದ್ರ ಸರ್ಕಾರ ಸಮಸ್ಯೆಯ ಮೂಲವಾಗಿ ಪರಿಣಮಿಸಿದೆ. ಸರ್ಕಾರ ತನ್ನಿಂದಾದ ಅಚಾತುರ್ಯವನ್ನು ಸರಿಪ ಡಿಸಿಕೊಂಡು ನಷ್ಟಕ್ಕೊಳಗಾಗಿರುವ ರೈತರಿಗೆ ಕೂಡಲೇ ನಷ್ಟಪರಿಹಾರವನ್ನು ಕೊಡಬೇಕು ಎಂದು ಆಗ್ರಹಿಸಿದರು.ಪ್ರಮುಖರಾದ ಹಿಟ್ಟೂರು ರಾಜು, ಕೆ. ರಾಘವೇಂದ್ರ, ಸಿ.ಬಿ. ಹನುಮಂತಪ್ಪ, ಸಿ.ಚಂದ್ರಪ್ಪ, ಪಿ.ಶೇಖರಪ್ಪ, ಮಂಜಪ್ಪ ಮೊದಲಾದವರು ಹಾಜರಿದ್ದರು.