ಮಂಗಳೂರು: ಕಾದಂಬರಿಕಾರ ಪಿ.ವಿ.ಪ್ರದೀಪ್‌ ಕುಮಾರ್‌ ಅವರ ಕಲ್ಪನೆ ಹಾಗೂ ಸಾರಥ್ಯದಲ್ಲಿ ಮೂಡಿಬಂದಿರುವ ‘ಅದಿತಿ’ ಚಲನಚಿತ್ರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಬಿಡುಗಡೆ ಹಾಗೂ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಚಲನಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಕಾದಂಬರಿಕಾರರಾದ ಪಿ.ವಿ. ಪ್ರದೀಪ್‌ ಕುಮಾರ್‌ ಎಐ ಮೂಲಕ ಮೊದಲ ಟೆಲಿಚಿತ್ರ ನಿರ್ಮಿಸಿರುವುದು ಶ್ಲಾಘನೀಯ. ಆ ಮೂಲಕ ಅವರು ಹೊಸ ಸಾಹಸ ಮಾಡಿದ್ದಾರೆ. ಎಐ ಮೂಲಕ ನಿರ್ಮಾಣಗೊಂಡಿರುವ ಅದಿತಿ ಚಿತ್ರ ಯಶಸ್ವಿಯಾಗಲಿ. ಕನ್ನಡ ಚಿತ್ರರಂಗದಲ್ಲಿ ಪ್ರದೀಪ್‌ ಕುಮಾರ್‌ ಯಶಸ್ಸು ಪಡೆಯಲಿ ಎಂದರು.

ಪಿ.ವಿ. ಪ್ರದೀಪ್‌ ಕುಮಾರ್‌ ಮಾತನಾಡಿ, ಅದಿತಿ ಕಾದಂಬರಿ ಆಧಾರಿತವಾಗಿ ‘ನಾರಿ ಮುನಿದರೆ ಸಾಮ್ರಾಜ್ಯವೇ ಧೂಳಿಪಟ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ನನ್ನದೇ ಆಗಿದೆ. ಚಿತ್ರದಲ್ಲಿನ ಎಲ್ಲ ಪಾತ್ರಧಾರಿಗಳು ಎಐ ಸೃಷ್ಟಿಯಾಗಿದೆ. 45 ನಿಮಿಷ ಅವಧಿಯ ಈ ಚಿತ್ರವನ್ನು ಮುಂದಕ್ಕೆ ವಿವಿಧೆಡೆ ಪ್ರದರ್ಶಿಸುವ ಯೋಚನೆಯಿದೆ ಎಂದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಪೂಜಾರಿ, ಚಿತ್ರದ ನಿರ್ಮಾಪಕಿ ಸುನೀತಾ ಪ್ರದೀಪ್‌ ಕುಮಾರ್‌ನಿದ್ದರು. ರೇಮಂಡ್‌ ಡಿಕುನ್ಹ ತಾಕೋಡೆ ನಿರೂಪಿಸಿದರು.