ಸಾರಾಂಶ
- ಅಧಿಕಾರಿಗಳಿಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ-
ಕನ್ನಡಪ್ರಭ ವಾರ್ತೆ ಮೈಸೂರುಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನಗೊಳಿಸಿರುವ ಆದಿವಾಸಿ ಜನಜಾತಿ ನ್ಯಾಯ ಅಭಿಯಾನ (ಪಿಎಂ ಜನಮನ್ ಯೋಜನೆ)ವನ್ನು ಮೈಸೂರು-ಕೊಡಗು ಜಿಲ್ಲೆಗಳಲ್ಲಿ ಯಶಸ್ವಿಗೊಳಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಡುಕಟ್ಟು ಸಮುದಾಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕ್ರಮ ವಹಿಸಲಾಗಿದೆ. ಇದಕ್ಕಾಗಿ ಪ್ರಧಾನಿಗಳು ಆದಿವಾಸಿ ಜನಜಾತಿ ನ್ಯಾಯ ಅಭಿಯಾನ ಜಾರಿಗೊಳಿಸಿದ್ದಾರೆ.ಪಿ.ಆರ್.ಡಿ.ಐ ಮೂಲಕ ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಪೌಷ್ಠಿಕಾಂಶ ಹೆಚ್ಚಿಸುವ ಜೊತೆಗೆ, ರಸ್ತೆ, ದೂರ ಸಂಪರ್ಕ ಸುಸ್ಥಿರ ಜೀವನಾವಕಾಶಗಳನ್ನು ಕಲ್ಪಿಸುವ ಉದ್ದೇಶದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆದಿವಾಸಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಮೂಲ ಸೌಲಭ್ಯ ಕಲ್ಪಿಸುವ 9 ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆದಿವಾಸಿಗಳ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ 60 ಲಕ್ಷ ವೆಚ್ಚ ಭರಿಸಿ ತರಬೇತಿ ನೀಡಲಾಗುತ್ತಿದೆ ಎಂದರು.ಮೈಸೂರು- ಕೊಡಗು ಜಿಲ್ಲೆಯಲ್ಲಿರುವ ಆದಿವಾಸಿ ಹಾಡಿಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸಮೀಕ್ಷೆ ನಡೆಸಲಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ 353 ಹಾಡಿಗಳಿಗೆ ವಸತಿ ಅವಶ್ಯವಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ 1,215, ನಂಜನಗೂಡು 76, ಎಚ್.ಡಿ. ಕೋಟೆ ತಾಲೂಕಿನಲ್ಲಿ 1, 141, ಪಿರಿಯಾಪಟ್ಟಣ 625, ಹುಣಸೂರಿನಲ್ಲಿ 935 ವಸತಿಗಳ ಬೇಡಿಕೆ ಇದೆ ಎಂದರು.
ಕೇಂದ್ರ ಸರ್ಕಾರದಿಂದ 2.30 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದಲೇ ಅನುದಾನ ದೊರೆಯಲಿದ್ದು, ಈ ಮೂಲಕ ವಸತಿ ನಿರ್ಮಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಈಗಾಗಲೇ ಹೊಸದಾಗಿ 5 ಫ್ಲಾಟ್ಫಾರಂ ನಿರ್ಮಿಸಲಾಗಿದೆ. ಜೊತೆಗೆ 6ನೇ ಪ್ಲಾಟ್ ಫಾರಂ ನಿರ್ಮಿಸಿ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ. ಮಾರ್ಚ್ ತಿಂಗಳ ವೇಳೆಗೆ ಉದ್ಘಾಟಿಸಲು ತೀರ್ಮಾನಿಸಲಾಗಿದೆ ಎಂದರು.
ನೀವು 3 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಮಾತನಾಡುತ್ತೀರಿ. ನಂತರ ಏನಾಗುತ್ತದೆ ಎಂಬುದು ಗೊತ್ತಿದೆ. ಇದನ್ನು ಬಿಟ್ಟು ಮಾರ್ಚ್ ವೇಳೆಗೆ ಉದ್ಘಾಟನೆ ಸಜ್ಜುಗೊಳಿಸಿ ಎಂದು ಅವರು ಸೂಚಿಸಿದರು.ಕೆ.ಜಿ. ಕೊಪ್ಪಲಿನಲ್ಲಿ ರೈಲ್ವೆ ಕೆಳ ಸೇತುವೆಯನ್ನು ನೂರು ಅಡಿಗೆ ವಿಸ್ತರಿಸುವುದು ಹಾಗೂ ಕುಕ್ಕರಹಳ್ಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಕೆಳ ಸೇತುವೆ ಹಾಗೂ ಕೆಆರ್ಎಸ್ ರಸ್ತೆಯ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ದವಾಗಿದೆ.
ಸದ್ಯ ಕೆ.ಜಿ. ಕೊಪ್ಪಲಿನ ಬ್ರಿಡ್ಜ್ ನಲ್ಲಿ ಏಕ ಕಾಲಕ್ಕೆ ಎರಡೂ ಕಡೆ ವಾಹನಗಳ ಸಂಚಾರ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸೇತುವೆಯನ್ನು 100 ಮೀ.ಗೆ ವಿಸ್ತರಿಸಲು 15.15 ಕೋಟಿ ವೆಚ್ಚ ಕಾಮಗಾರಿ ಆರಂಭಿಸಲಾಗುವುದು ಎಂದರು.ಕುಕ್ಕರಹಳ್ಳಿ ಕೆರೆ ಬಳಿಯ ಲೆವೆಲ್ ಕ್ರಾಸಿಂಗ್ ನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಲು ಎಂಡಿಎ ವತಿಯಿಂದಲೂ ಸಹಕರಿಸಬೇಕಿದೆ. ಕೆಳಸೇತುವೆ ನಿರ್ಮಾಣದಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಮೈಸೂರು- ಚಾಮರಾಜನಗರ ನಡುವೆ ಸಂಚರಿಸುವ ರೈಲುಗಾಡಿಗಳು ಹಾಲಿ ಇರುವ ಲೆವಲ್ ಕ್ರಾಸಿಂಗ್ ಬಳಿ ಆಗಾಗ ನಿಲ್ಲುವುದರಿಂದ ಪ್ರಯಾಣಿಕರು ಹೆಚ್ಚು ಸಮಯ ಕಾಯುವುದು ತಪ್ಪುತ್ತದೆ. ಇದೆ ಮಾದರಿಯಲ್ಲಿ ಕೆ.ಆರ್.ಎಸ್.ರಸ್ತೆಯ ಕೇಳ ಸೇತುವೆಯನ್ನೂ ವಿಸ್ತರಿಸುವುದಾಗಿ ಅವರು ಹೇಳಿದರು.