ಸಾರಾಂಶ
ಬಿಜೆಪಿ ಸಂಸದರು, ರಾಜ್ಯದ ಕೇಂದ್ರ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿಸಲಿ ಎಂದ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್, ಜನರು ಮತ ಕೊಟ್ಟಿದ್ದು ನಮಗೆ ಮಾತ್ರನಾ ? ನಿಮಗೂ ಜನ ಓಟು ಕೊಟ್ಟಿಲ್ವಾ ? ಎಂದು ಪ್ರಶ್ನಿಸಿದ್ದಾರೆ. ಬಹುಶಃ ನಮ್ಮ ರಾಜ್ಯದ ಸಂಸದರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತಾಡಲು ಧೈರ್ಯ ಕಡಿಮೆ ಇದ್ದಾಗೆ ಕಾಣ್ತದೆ ಎಂದು ಸೋಮವಾರ ಉಡುಪಿಯಲ್ಲಿ ಲೇವಡಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿ ಮಾತ್ರವಲ್ಲ, ಬರ ಪರಿಹಾರದ ವಿಷಯದಲ್ಲಿಯೂ ಅನ್ಯಾಯ ಆಗಿದೆ. ಆದ್ದರಿಂದ ನಾವು ಕೇಂದ್ರ ಸರ್ಕಾರದ ವಿರುದ್ಧ ಫೆ. 7ರಂದು ಪ್ರತಿಭಟನೆ ಮಾಡುತ್ತೇವೆ. ಇದನ್ನು ಟೀಕಿಸುತ್ತಿರುವ ಬಿಜೆಪಿ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಮಾಹಿತಿ ಇದ್ದಂತಿಲ್ಲ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ವರದಿ ಸಿದ್ಧಮಾಡಿ ಸಲ್ಲಿಕೆ ಮಾಡಿದರೂ ಕೇಂದ್ರ ಸರ್ಕಾರ ಒಂದು ಸಭೆ ಕರೆದಿಲ್ಲ. ಈ ರೀತಿ ಯಾಕೆ ಅನ್ಯಾಯ ಮಾಡ್ತಿದ್ದೀರಿಎಂದು ಬಿಜೆಪಿ ನಾಯಕರನ್ನು ಕೇಳಬೇಕು ಎಂದರು.
ಕೇಂದ್ರ ಕೊಡದಿದ್ದರೂ ರಾಜ್ಯ ಸರಕಾರ ಈಗಾಗಲೇ ಕೈಲಾದಷ್ಟು ಹಣ ಬಿಡುಗಡೆ ಮಾಡಿ ಹಂಚಿದ್ದೇವೆ. ನಾವು ಕೇಂದ್ರಕ್ಕೆ ಕೊಟ್ಟ ತೆರಿಗೆಯಲ್ಲಿ ಸಹಾಯ ಕೇಳುತ್ತಿದ್ದೇವೆ, ನಿಯಮ ಪ್ರಕಾರ ಅನುದಾನ ಬಿಡುಗಡೆ ಮಾಡಲಿ ಎಂದರು.ಬಿಜೆಪಿ ಸಂಸದರು, ರಾಜ್ಯದ ಕೇಂದ್ರ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿಸಲಿ ಎಂದ ಜಾರ್ಜ್, ಜನರು ಮತ ಕೊಟ್ಟಿದ್ದು ನಮಗೆ ಮಾತ್ರನಾ ? ನಿಮಗೂ ಜನ ಓಟು ಕೊಟ್ಟಿಲ್ವಾ ? ಎಂದು ಪ್ರಶ್ನಿಸಿದರು. ಬಹುಶಃ ನಮ್ಮ ರಾಜ್ಯದ ಸಂಸದರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತಾಡಲು ಧೈರ್ಯ ಕಡಿಮೆ ಇದ್ದಾಗೆ ಕಾಣ್ತದೆ ಎಂದು ಲೇವಡಿ ಮಾಡಿದರು.
ಚುನಾವಣಾ ಸಿದ್ದತಾ ಸಭೆ:ಇದಕ್ಕೆ ಮೊದಲು ಸಚಿವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಸಭೆ ನಡೆಸಿ ಚುನಾವಣಾ ತಯಾರಿಯ ಬಗ್ಗೆ ಮಾತನಾಡಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ. ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್, ಪಕ್ಷದ ಪ್ರಮುಖರಾದ ವೆರೋನಿಕಾ ಕರ್ನೆಲಿಯೋ ಪ್ರಸಾದ್ ರಾಜ್ ಕಾಂಚನ್ ಉಪಸ್ಥಿತರಿದ್ದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.ಕರಾವಳಿಯಲ್ಲಿ ಮತ್ತೆ ಜನ ಕೈಹಿಡಿತಾರೆ: ಜಾರ್ಜ್
ಕಾಂಗ್ರೆಸ್ ಚುನಾವಣೆ ತಯಾರು ಆಗುವ ಪಕ್ಷ ಅಲ್ಲ, ಸತತ ಜನರ ನಡುವೆ ನಾವಿದ್ದು ಚುನಾವಣೆ ಎದುರಿಸುತ್ತೇವೆ, ಕಾಂಗ್ರೆಸ್ ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕರಾವಳಿ ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು, ಜನರೂ ನಮ್ಮ ಜೊತೆ ಇದ್ದರು. ಈಗ ಕೆಲವೊಂದು ಕಾರಣದಿಂದ ಬಿಜೆಪಿ ಜೊತೆ ಹೋಗಿರಬಹುದು. ಮತ್ತೆ ಜನ ನಮ್ಮ ಕೈಹಿಡಿಯುತ್ತಾರೆಂಬ ಆತ್ಮವಿಶ್ವಾಸ ಇದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.