ಎಂಡೋಸಲ್ಫಾನ್‌ ಬಾಧಿತರಾಗಿ ಹಾಸಿಗೆ ಹಿಡಿದಿರುವ 210 ಕುಟುಂಬಗಳಿಗೆ ಎಂಆರ್‌ಪಿಎಲ್‌ ಸಂಸ್ಥೆ ವತಿಯಿಂದ ಸ್ವಚ್ಛತಾ ಕಿಟ್ ಮತ್ತು ಪೌಷ್ಠಿಕ ಆಹಾರ ಕಿಟ್ ಹಸ್ತಾಂತರಿಸಲಾಯಿತು.

ಮಂಗಳೂರು: ಎಂಡೋಸಲ್ಫಾನ್‌ ಬಾಧಿತರಾಗಿ ಹಾಸಿಗೆ ಹಿಡಿದಿರುವ 210 ಕುಟುಂಬಗಳಿಗೆ ಎಂಆರ್‌ಪಿಎಲ್‌ ಸಂಸ್ಥೆ ವತಿಯಿಂದ ಸ್ವಚ್ಛತಾ ಕಿಟ್ ಮತ್ತು ಪೌಷ್ಠಿಕ ಆಹಾರ ಕಿಟ್ ಹಸ್ತಾಂತರಿಸಲಾಯಿತು. ಜುಲೈ 1 ರಿಂದ 15 ವರೆಗೆ ನಡೆಯುವ ‘ಸ್ವಚ್ಛತಾ ಪಕ್ವಾಡ’ ಅಂಗವಾಗಿ ಎಂಡೋ ಸಲ್ಫಾನ್‌ ಬಾಧಿತರಿಗೆ ಕಿಟ್ ವಿತರಿಸಿ ಮಾತನಾಡಿದ ಎಂಆರ್‌ಪಿಎಲ್‌ ಸಿಎಸ್‌ಆರ್‌ ವಿಭಾಗದ ಜನರಲ್ ಮ್ಯಾನೇಜರ್ ಮಂದಾರ ವಿ. ಕಾಳೆ, ನಿರಂತರ 15 ದಿನಗಳ ಕಾಲ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಸ್ವಚ್ಛತೆಗೆ ಮಹತ್ವ ನೀಡುವ ಕೆಲಸಗಳನ್ನು ಮಾಡುತ್ತಿದ್ದೇವೆ. ಸ್ವಚ್ಛತೆಯ ಬಗ್ಗೆ ಜಾಥಾ, ಬೀದಿ ನಾಟಕ, ಶ್ರಮಾದಾನ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೊಕ್ಕಡ, ಬೆಳ್ತಂಗಡಿ, ಅರಸಿನಮಕ್ಕಿ ಮತ್ತಿತರ ಕಡೆಗಳಿಗೆ ಸ್ವಚ್ಛತಾ ಕಿಟ್ ವಿತರಿಸಲಾಯಿತು. ಎಂಆರ್‌ಪಿಎಲ್‌ ಸಿಎಸ್‌ಆರ್‌ ವಿಭಾಗದ ಅಧಿಕಾರಿ ಕೇಶವ ಪಾಟಾಳಿ, ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ ಸಂಜಾತ್, ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಕಾಶ್, ಎಂಡೋಸಲ್ಫಾನ್ ದ.ಕ ಜಿಲ್ಲಾ ಸಂಯೋಜಕ ಸಜಿವುದ್ದೀನ್ ಮತ್ತಿತರರು ಇದ್ದರು.