ಸಾರಾಂಶ
ತುಮಕೂರು: ಮೌಲ್ಯಾಧಾರಿತ ರಾಜಕಾರಣ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ, ಅದನ್ನು ನಾಡಿನೆಲ್ಲೆಡೆ ಪಸರಿಸುವಂತೆ ಮಾಡುವ ಉದ್ದೇಶದಿಂದ ಜೆಡಿಯು ಪಕ್ಷ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಚೇರಿಗಳನ್ನು ತೆರೆದು, ಪಕ್ಷದ ಸಂಘಟನೆಯ ಜೊತೆಗೆ, ಮೌಲ್ಯಾಧಾರಿತ ರಾಜಕಾರಣವನ್ನು ಪರಿಚಯಿಸಲಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಮಹಿಮ ಜ ಪಟೇಲ್ ತಿಳಿಸಿದ್ದಾರೆ.ನಗರದಲ್ಲಿ ಜೆಡಿಯು ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದರು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ರಂತಹ ಕಾಲದಲ್ಲಿ ಸಣ್ಣ ತಪ್ಪುಗಳು ಕಂಡು ಬಂದರೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿ, ತನಿಖೆಯನ್ನು ಎದುರಿಸುತ್ತಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಇಂದಿನ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ರೀತಿಯ ಮೌಲ್ಯಾಧಾರಿತ ರಾಜಕಾರಣದ ಹಾದಿಯಲ್ಲಿ ನಡೆಯಬೇಕು. ಮುಡಾ ಹಗರಣದಲ್ಲಿ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳು, ಕಟ್ಟಡಗಳ ನಿರ್ಮಾಣವಷ್ಟೇ ಅಲ್ಲ. ಉತ್ತಮ ಮಾನವ ಸಂಬಂಧಗಳನ್ನು ನಿರ್ಮಾಣ ಮಾಡುವುದು ಸಹ ಅಭಿವೃದ್ಧಿಯ ಭಾಗವಾಗಿದೆ. ಈ ಮೂಲಕ ಮನುಷ್ಯರ ನಡುವೆ ಸಹಕಾರ, ಸಹಬಾಳ್ವೆಯನ್ನು ರೂಢಿಸುವುದು ಸಹ ಒಳ್ಳೆಯ ಅಭಿವೃದ್ದಿಯಾಗಿದೆ. ಇದನ್ನು ಸ್ಥಾಪಿಸಬೇಕೆಂಬ ಉದ್ದೇಶದಿಂದ ಜೆಡಿಯು ರಾಜ್ಯದಾದ್ಯಂತ ಪರಿವರ್ತನೆಯ ಹಾದಿಯನ್ನು ತುಳಿಯಲು ಮುಂದಾಗಿದೆ. ಈಗಾಗಲೇ ದಾವಣಗೆರೆ, ಹುಬ್ಬಳಿಯಲ್ಲಿ ಕಚೇರಿಗಳಿದ್ದು, ತುಮಕೂರಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಚೇರಿ ತೆರೆಯುವ ಕೆಲಸ ಆರಂಭವಾಗಿದೆ. ಇದಕ್ಕೆ ಕರ್ನಾಟಕದ ಜನತೆ ಬೆಂಬಲ ನೀಡಬೇಕೆಂದು ಎಂದು ತಿಳಿಸಿದರು.ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಸುರೇಶ್ ಮಾತನಾಡಿ, ಸಿದ್ದಗಂಗಾ ಮಠಕ್ಕೂ ರಾಮಕೃಷ್ಣ ಹೆಗಡೆ ಅವರಿಗೂ ಅವಿನಾಭಾವ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಿಂದಲೇ ಜೆಡಿಯು ಕಚೇರಿ ತೆರೆಯಲಾಗಿದೆ. ೨೦೨೮ರ ಕರ್ನಾಟಕದ ಸರ್ಕಾರದ ಒಂದು ಭಾಗವಾಗಿ ಜೆಡಿಯು ಇರಬೇಕೆಂಬ ಉದ್ದೇಶದಿಂದಲೇ ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿರುವುದಾಗಿ ತಿಳಿಸಿದರು. ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜಕೀಯ ನಿಂತ ನೀರಲ್ಲ. ಕರ್ನಾಟಕದಲ್ಲಿ ಕಾಲಚಕ್ರ ತಿರುಗುವ ಕಾಲ ಬಂದಿದೆ. ರಾಜ್ಯದಲ್ಲಿಯೂ ಜೆಡಿಯು ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಂಡಬರುತ್ತಿವೆ. ಪಕ್ಷದ ಕಾರ್ಯಕರ್ತರು ದೃತಿಗೆಡೆದೆ ಪಕ್ಷದ ಸಂಘಟನೆಯಲ್ಲಿ ತೊಡಗಿದರೆ ಮುಂದಿನ ದಿನಗಳಲ್ಲಿ ಅಧಿಕಾರ ಖಚಿತ ಎಂದರು.ತುಮಕೂರು ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ಎಲ್.ರವಿ, ಯಶೋಧ ಆರ್.ಪಿ, ಕಲ್ಪನಾಗೌಡ, ವಕ್ತಾರ ರಮೇಶಗೌಡ, ರಾಜ್ಯ ಕಾರ್ಯದರ್ಶಿ ಕ್ರಾಂತಿಕಿಡಿಗೌಡ, ಮಹಿಳಾ ಘಟಕ ಉಪಾಧ್ಯಕ್ಷೆ ಶಕುಂತಲ ಶೆಟ್ಟಿ, ಶಾಂತಕುಮಾರಿ, ಮುಖಂಡರಾದ ಪರಮೇಶ್ವರಯ್ಯ, ಬಸವರಾಜು ಬ್ಯಾಂಕ್, ರಂಗನಾಥ ಕೆ.ಆರ್., ಪ್ರಮೋದ್ ಉಪಸ್ಥಿತರಿದ್ದರು.