ಮತ್ತೆ ದೇಶದ ಗಮನ ಸೆಳೆದ ಮುಧೋಳ ಶ್ವಾನ

| Published : Oct 27 2025, 12:45 AM IST

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ ತಿಂಗಳ ಮನ್ ಕೀ ಬಾತ್‌ ನಲ್ಲಿ ಇತಿಹಾಸ ಪ್ರಸಿದ್ಧ ಕರ್ನಾಟಕದ ಮುಧೋಳ ಹೌಂಡ್ ಬಗ್ಗೆ ಪ್ರಸ್ತಾಪಿಸಿದ್ದು, ದೇಶಿಯ ಶ್ವಾನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ ತಿಂಗಳ ಮನ್ ಕೀ ಬಾತ್‌ ನಲ್ಲಿ ಇತಿಹಾಸ ಪ್ರಸಿದ್ಧ ಕರ್ನಾಟಕದ ಮುಧೋಳ ಹೌಂಡ್ ಬಗ್ಗೆ ಪ್ರಸ್ತಾಪಿಸಿದ್ದು, ದೇಶಿಯ ಶ್ವಾನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಹಿಂದೆ ರಾಜ ಮಹಾರಾಜರ ಕಾಲದಲ್ಲೂ ಸೇನೆಯಲ್ಲಿದ್ದ ಮುಧೋಳ ನಾಯಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸೇನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಪ್ರಧಾನಮಂತ್ರಿಗಳು ತಮ್ಮ ಜನಪ್ರಿಯ ಮನ್ ಕೀ ಬಾತ್‌ ನಲ್ಲಿ ಎರಡನೇ ಸಲ ಮುಧೋಳ ಹೌಂಡ್ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಮತ್ತೊಮ್ಮೆ ಮುಧೋಳ ಶ್ವಾನದ ಕಡೆಗೆ ಇಡೀ ದೇಶದ ಜನರ ಚಿತ್ತ ಹರಿಯುವಂತೆ ಮಾಡಿದ್ದಾರೆ.

ಮುಧೋಳ ಶ್ವಾನಗಳ ಬಗ್ಗೆ ಪ್ರಧಾನಿ ಹೇಳಿದ್ದೇನು..?

ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷಗಳ ಹಿಂದೆ ಇದೇ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ್ದ ಮುಧೋಳ ಹೌಂಡ್ ಬಗ್ಗೆ ಮರು ಪ್ರಸ್ತಾಪ ಮಾಡಿದ್ದಾರೆ. ಅಂದು ದೇಶಿಯ ಶ್ವಾನಗಳನ್ನು ಸಾಕಿ ಬೆಳೆಸಿ, ಅವು(ಮುಧೋಳ ಹೌಂಡ್ ಸೇರಿ ದೇಶಿ ತಳಿ) ನಮ್ಮ ವಾತಾವರಣ ಹಾಗೂ ಪರಿಸ್ಥಿತಿಗೆ ಹೆಚ್ಚು ಸರಳವಾಗಿ ಹೊಂದಿಕೊಳ್ಳುತ್ತವೆ ಎಂದು ಹೇಳಿದ್ದರು.

ಬಿಎಸ್ಎಫ್ ಹಾಗೂ ಸಿಆರ್‌ಪಿಎಫ್‌ ಗಳಲ್ಲಿ ದೇಶಿಯ ಶ್ವಾನಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಗ್ವಾಲಿಯರ್ ಟೆಕನ್ಪುರದಲ್ಲಿರುವ ಬಿಎಸ್ಎಫ್ ನ್ಯಾಷನಲ್ ಟ್ರೈನಿಂಗ್ ಸೆಂಟರ್‌ ಗೆ ಉತ್ತರ ಪ್ರದೇಶದ ರಾಮಪುರ ಹೌಂಡ್, ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಧೋಳ ಹೌಂಡ್ ಮೇಲೆ ವಿಶೇಷ ಬೆಳಕು ಚೆಲ್ಲುತ್ತಿದ್ದಾರೆ. ಇಲ್ಲಿ ತರಬೇತುದಾರರು ತಂತ್ರಜ್ಞಾನ ಹಾಗೂ ಅವಿಷ್ಕಾರಗಳ ಮೂಲಕ ಶ್ವಾನಗಳಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಬೆಂಗಳೂರನಲ್ಲಿ ಸಿಆರ್‌ಪಿಎಫ್‌ ಡಾಗ್ ಬ್ರಿಡಿಂಗ್ ಆ್ಯಂಡ್ ಟ್ರೇನಿಂಗ್ ಸೆಂಟರ್‌ ನಲ್ಲಿ ಮುಧೋಳ ಹೌಂಡ್, ಕ್ಯಾಂಬ್ರೆಲ್, ಪಂಡಿಕೋನ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಿಂದಿನ ವರ್ಷ ಲಕ್ನೋದಲ್ಲಿ ಆಲ್ ಇಂಡಿಯಾ ಪೊಲೀಸ್ ಮೀಟ್ ಕಾರ್ಯಕ್ರಮದಲ್ಲಿ ರಿಯಾ ಹೆಸರಿನ ಮುಧೋಳ ಹೌಂಡ್ ವಿಶೇಷವಾಗಿ ಜನರ ಗಮನವನ್ನು ತನ್ನತ್ತ ಸೆಳೆದಿತ್ತು ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, ರಿಯಾ ಪ್ರದರ್ಶನದಲ್ಲಿ ಎಷ್ಟೋ ವಿದೇಶಿ ತಳಿಯ ಶ್ವಾನಗಳನ್ನು ಸೋಲಿಸಿ ಬಹುಮಾನ ಗೆದ್ದಿದ್ದನ್ನು ಮೆಲುಕು ಹಾಕಿದರು.

ಹಾಗೆಯೇ ಚತ್ತೀಸ್‌ ಗಡದಲ್ಲಿ ಮಾವೋವಾದಿಗಳ ಪ್ರಭಾವವಿರುವ ಕ್ಷೇತ್ರದಲ್ಲಿ ಸಿಆರ್‌ಪಿಎಫ್‌ ಒಂದು ದೇಶಿಯ ಶ್ವಾನ 8 ಕಿ.ಲೋ ಗ್ರಾಮ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡಿದ್ದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಅವರು, ಇದೇ ಅಕ್ಟೋಬರ್ 31 ರಂದು ಗುಜರಾತ್‌ ನಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜಯಂತಿ ನಿಮಿತ್ತ ಏಕತಾ ನಗರದಲ್ಲಿ ನಡೆಯುವ ಸ್ಟ್ಯಾಚು ಆಫ್‌ ಯುನಿಟಿ ಸಮೀಪದ ಕಾರ್ಯಕ್ರಮದ ಏಕತಾ ಪರೇಡ್‌ ನಲ್ಲಿ ಭಾರತೀಯ ದೇಶಿಯ ಶ್ವಾನಗಳ ಸಾಹಸ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸದ್ಯ ಮುಧೋಳ ಶ್ವಾನ ಸಂವರ್ಧನ ಕೇಂದ್ರಗಳಲ್ಲಿ 30 ಗಂಡು ಮತ್ತು 8 ಹೆಣ್ಣು ಶ್ವಾನಗಳಿವೆ. ಪ್ರಸಿದ್ಧ ಮುಧೋಳ ಶ್ವಾನಗಳನ್ನು ಇತ್ತೀಚೆಗೆ ಓಡಿಸ್ಸಾದ ಸಿಐಡಿಗೆ ಐದು ಮರಿ ನೀಡಲಾಗಿದೆ. ಅದರಲ್ಲಿ ನಾಲ್ಕು ಗಂಡು ಹಾಗೂ ಒಂದು ಹೆಣ್ಣು ಮರಿ ಇದೆ. ಸದ್ಯ ಬಿಎಸ್ಎಫ್ ತರಬೇತಿಗೂ ಮುಧೋಳ ಹೌಂಡ್ ಹೋಗಿದ್ದು, ಹೆಮ್ಮೆಯ ವಿಚಾರವಾಗಿದೆ. ಬೀದರ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿ ಕುಲಪತಿ ಕೆ.ಸಿ.ವೀರಣ್ಣ ಹಾಗೂ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ ಅವರ ಮಾರ್ಗದರ್ಶನ ಹಾಗೂ ವಿಶೇಷ ಆಸಕ್ತಿಯಿಂದ ತಿಮ್ಮಾಪುರ ಊರಿನಲ್ಲಿರುವ ಮುಧೋಳ ಶ್ವಾನ ಸಂವರ್ಧನ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

-ಡಾ.ಶಿವಲಿಂಗಪ್ಪ ಮುಕರ್ತನಾಳ

ಪ್ರಭಾರ ಮುಖ್ಯಸ್ಥರು, ಮುಧೋಳ ಶ್ವಾನ ಸಂವರ್ಧನ ಕೇಂದ್ರ ಮುಧೋಳ