ಭಾವೈಕ್ಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ

| Published : Jul 18 2024, 01:32 AM IST

ಸಾರಾಂಶ

ಹಿಂದೂ-ಮುಸ್ಲಿಂಮರ ಭಾವೈಕ್ಯೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಹಾವೇರಿ: ಹಿಂದೂ-ಮುಸ್ಲಿಂಮರ ಭಾವೈಕ್ಯೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ತಾಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಭೇದ ಭಾವವಿಲ್ಲದೇ ಸಹಬಾಳ್ವೆಯಿಂದ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಿಸಿ ಭಾವೈಕ್ಯತೆಗೆ ಸಾಕ್ಷಿಯಾದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ ಪಂಜಾಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಗ್ರಾಮದ ಹಿರಿಯರು ಹಾಗೂ ಯುವಕರು ಮೆರವಣಿಗೆ ಸಂದರ್ಭದಲ್ಲಿ ಅಲಾಬಿ ಪದಗಳನ್ನು ಹಾಡುತ್ತ ಹೆಜ್ಜೆ ಹಾಕಿ ಸಂಭ್ರ‍್ರಮಿಸಿದರು. ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಮನೆಯ ಎದುರು ಡೋಲಿ ಬಂದ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದರು. ಇನ್ನೂ ಕೆಲವರು ಪಂಜಾಗಳನ್ನು ಹಿಡಿದು ಬಂದ ಮಕ್ಕಳಿಗೆ ನಮಸ್ಕರಿಸುವ ದೃಶ್ಯ ಕಂಡು ಬಂದಿತು. ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ನೆರದಿದ್ದ ಸಾರ್ವಜನಿಕರಿಗೆ ಪಾನಕ ವಿತರಿಸಿದರು. ಮೊಹರಂ ಹಬ್ಬದ ನಿಮಿತ್ತ ಕೆಲವರು ಹುಲಿ ವೇಷಧರಿಸಿ ಹೆಜ್ಜೆ ಹಾಕಿ ಭಕ್ತಿ ಪ್ರದರ್ಶಿಸಿ ಗಮನ ಸೆಳೆದರು. ಪಂಜಾಗಳನ್ನು ಹಿಡಿದ ಕೆಲವರು ಬೆಂಕಿ ಹಾಯ್ದು ಗಮನ ಸೆಳೆದರು. ಈ ಸಂದರ್ಭದಲ್ಲಿ ಪಕ್ಕೀರಪ್ಪ ಕಮತರ, ಹೊನ್ನಪ್ಪ ತಳವಾರ, ಅಲ್ಲಾಭಕ್ಷಿ ಅಗಸರ, ಮೆಹಬೂಬ್‌ಸಾಬ್ ಅಗಸರ, ಈರಪ್ಪ ಹೊಸಮನಿ, ರಮೇಶ ಮಡ್ಲೂರ, ಜ್ಯೋತೆಪ್ಪ ಹೊಸಮನಿ, ಚಂದ್ರಯ್ಯ ಹಿರೇಮಠ, ಶೇಖಪ್ಪ ಕಮತರ, ಹುಸೇನಸಾಬ್ ಪಿಂಜಾರ, ಶಿವಾನಂದ ಮಡ್ಲೂರ, ಶಿವಪ್ಪ ಬಳ್ಳಾರಿ, ಗಂಗಪ್ಪ ಯರೇಶಿಮಿ, ಮಾಂತಪ್ಪ ಹರಿಜನ, ದ್ಯಾಮಣ್ಣ ಬಡಿಗೇರ, ಚೇತನ್ ತೊರಗಲ್ಲ, ಖಾದರಸಾಬ್ ಅಗಸರ, ಮಹೇಶ ಹನ್ನೀರ, ಪ್ರಕಾಶ ಹನ್ನಿರ, ಈರಣ್ಣ ಭರಡಿ ಸೇರಿದಂತೆ ಗ್ರಾಮಸ್ಥರು ಇದ್ದರು.