ಮುಳಗುಂದ: ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಿಪಿಐ ಬಿ.ಜಿ. ಸುಬ್ರಹ್ಮಪುರಮಠ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶಾಂತಿ ಸಭೆ ಜರುಗಿತು.
ಸಿಪಿಐ ಬಿ.ಜಿ. ಸುಬ್ರಹ್ಮಪುರಮಠ ಮಾತನಾಡಿ, ಪಟ್ಟಣದಲ್ಲಿ ಸೌಹಾರ್ದಯುತ ವಾತಾವರಣ ಇದೆ. ಯಾವೂದೇ ಧರ್ಮದ ಭಾವನೆಗೆ ಧಕ್ಕೆ ಆಗದಂತೆ ಹಬ್ಬ ಆಚರಿಸಬೇಕು. ನಮ್ಮ ಧರ್ಮವನ್ನು ಪಾಲಿಸುವುದರ ಜತೆಗೆ ಅನ್ಯ ಧರ್ಮವನ್ನು ಗೌರವಿಸಬೇಕು. ಗೋವು ವಧೆ ನಿಷೇಧ ಕಾನೂನು ಜಾರಿಯಲಿದೆ. ಅಂತಹ ಘಟನೆಗಳು ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಕ್ ಸವಾರರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಬೇಕು. ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯವಾಗಿದ್ದು, ಚಾಲನೆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಬೇಕು. ಮೊಬೈಲ್ನಲ್ಲಿ ಮಾತನಾಡುತ್ತ ಸಾಗುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಪ್ರತಿಯೊಂದು ವಾಹನಕ್ಕೂ ವಿಮೆ ಮಾಡಿಸುವುದರಿಂದ ಅಪಘಾತ ಸಂಭವಿಸಿದಾಗ ಆರ್ಥಿಕ ಸುರಕ್ಷತೆ ಒದಗಿಸುತ್ತದೆ. ಕಳ್ಳತನದಂಥ ಅಪರಾಧಗಳ ತಡೆಗೆ ಅಂಗಡಿ, ಮನೆಗಳ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಪಿಎಸ್ಐ ಡಿ.ಎಂ. ಮುಲ್ಲಾ, ಎಎಸ್ಐ ಸುಧಾ, ಮುಖಂಡರಾದ ಲಾಲಷಾಪೀರ ಮಕಾಂದಾರ, ಎಚ್.ಎಂ. ನದ್ದಿಮುಲ್ಲಾ, ದಾವುದ ಜಮಾಲಸಾಬನವರ, ಎ.ಡಿ. ಮುಜಾವರ, ಇಸಾಕ್ ಹೊಸಮನಿ ಮೊದಲಾದವರು ಇದ್ದರು.
ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದದಿಂದ ಆಚರಿಸಿ
ಡಂಬಳ: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಭಾವನೆಯೊಂದಿಗೆ ಆಚರಿಸುವುದರ ಜತೆಗೆ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮುಂಡರಗಿ ಸಿಪಿಐ ಅಯ್ಯನಗೌಡ ಪಾಟೀಲ ತಿಳಿಸಿದರು.ಗ್ರಾಮದ ಪೊಲೀಸ್ ಹೊರ ಠಾಣೆಯಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಪ್ರತಿಯೊಬ್ಬರ ವ್ಯಕ್ತಿತ್ವ ಪ್ರಗತಿಯಾದಾಗ ಮಾತ್ರ ಕುಟುಂಬ ಮತ್ತು ಗ್ರಾಮ ಸುಧಾರಣೆಯಾಗುತ್ತದೆ. ಪ್ರತಿ ಧರ್ಮಗಳು ಶಾಂತಿಯನ್ನು ಬಯಸುತ್ತವೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಶಾಂತಿಯನ್ನು ಪಾಲನೆ ಮಾಡುವುದು ಬಹಳ ಮುಖ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಿದ್ಧಪ್ಪ ಮಠದ, ಅಂಜುಮನ್ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಬಸಪ್ಪ ಕೋತಂಬ್ರಿ, ಶಶಿಕಾಂತ ಬಂಡಿಹಾಳ, ರಾಜೇಸಾಬ ಹಿರೇಮನಿ, ಜಿ.ಎಂ. ಯಲಿಗಾರ, ರಾಜಪ್ಪ ಮೇವುಂಡಿ, ಮಹಬೂಬಲಿ ಆಲೂರ, ಸಿದ್ದಯ್ಯ ಕಾಡಸಿದ್ದೇಶ್ವರಮಠ, ಸುರೇಶ ಕೋತಂಬ್ರಿ, ಮಹಬೂಬಲಿ ಮೂಲಿಮನಿ, ಶ್ರೀಕಾಂತ ಹಂಚನಾಳ, ಪೊಲೀಸ್ ಸಿಬ್ಬಂದಿಗಳಾದ ಎಸ್.ಎಸ್. ಕೆಂಚಗಾರ, ಬಾಬುಜಾನ ಕಮ್ಮಾರ, ಎನ್.ಬಿ. ಪೂಜಾರ, ಯುವಕರು, ಗ್ರಾಮದ ಹಿರಿಯರು ಇದ್ದರು.