ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗೃಹದಲ್ಲಿ 31ರಂದು ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಲಿದೆ.ಬಪ್ಪನಾಡು ದುರ್ಗಾಪಾರಾಯಣ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿ, ಮೂಲ್ಕಿಯ ವಿವಿಧ ಸಂಘಟನೆಗಳಾದ ವಿವೇಕ ಜಾಗೃತ ಬಳಗ, ಬಿಲ್ಲವ ಸಮಾಜ ಸೇವಾ ಸಂಘ, ಬಂಟರ ಸಂಘ, ದೇವಾಡಿಗ ಸಮಾಜ ಸೇವಾ ಸಂಘ , ನಾಲ್ಕು ಪಟ್ಣ ಮೊಗವೀರ ಸಭಾ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ, ಬಪ್ಪನಾಡು ದುರ್ಗಾಪರಮೇಶ್ವರೀ ಸೇವಾ ಯುವಕ ವೃಂದ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪತಂಜಲಿ ಯೋಗ ಸೇವಾ ಸಮಿತಿ, ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಸತ್ಯಸಾಯಿ ಬಾಬಾ 1929ರ ಜ.29ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಿದ ಸವಿ ನೆನಪಿಗೋಸ್ಕರ ಶಿಬಿರ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 9ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಬಳಿಕ ಬಪ್ಪನಾಡು ಅಮ್ಮನವರ ಮತ್ತು ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಬಗ್ಗೆ ವಿವರ ಇರುವ ಜಾಲತಾಣ ಲೋಕಾರ್ಪಣೆ , ನಳಿನಾಕ್ಷಿ ಉದಯರಾಜ್ ವಿರಚಿತ ‘ಶ್ರೀ ಬಪ್ಪನಾಡು ಕ್ಷೇತ್ರದ ಐತಿಹ್ಯದ ಕಥನಕಾವ್ಯ’ ಯೂಟ್ಯೂಬ್ ಚಾನಲ್ ಬಿಡುಗಡೆ, ಜೇಷ್ಠ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಳಿನಾಕ್ಷಿ ಉದಯ ರಾಜ್, ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರಾಜೀವಿ, ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವಸಂತಿ, ಶಿಕ್ಷಣ ಕ್ಷೇತ್ರದಲ್ಲಿ 39 ವರ್ಷ ಸೇವೆ ಸಲ್ಲಿಸಿದ ಜಯಂತಿ, ಸಾಮಾಜಿಕ ಕಾರ್ಯಕರ್ತೆ ಸರೋಜಿನಿ ಸುವರ್ಣ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ತಬಲಾ ವಾದಕ ಮಂಜಪ್ಪ ಸುವರ್ಣ ಅಂಬಲಪಾಡಿ ಅವರನ್ನು ಸನ್ಮಾನಿಸಲಾಗುವುದು.ಬೆಳಗ್ಗೆ 10.45 ರಿಂದ ಲೋಕ ಕಲ್ಯಾಣಾರ್ಥವಾಗಿ ಅದಮಾರು ರಾಮಕೃಷ್ಣ ಭಟ್ ಬೆಂಗಳೂರು ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆಯೆಂದು ಪ್ರಕಟಣೆ ತಿಳಿಸಿದೆ.