ಮೂಲ್ಕಿ: ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಸಂಚಾಲಕತ್ವದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಕ್ಷೇತ್ರದ ಧರ್ಮರಸು ಉಳ್ಳಾಯ, ಪರಿವಾರ ದೈವಗಳ, ಕಾಂತಬಾರೆ ಬೂದಬಾರೆ ಮತ್ತು ಮಾಯಂದಾಲ್ ಶಕ್ತಿಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಉಳ್ಳಾಯ ದೈವಗಳ ನೇಮೋತ್ಸವ ನಡೆಯಿತು.

ಸೋಮವಾರ ಬೆಳಗ್ಗೆ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಇಷ್ಟ ದೇವತೆ, ಮೂಲ ಮಹಿಷಂದಾಯ, ಬಬ್ಬರ್ಯ ಹಾಗೂ ಪರಿವಾರ ದೈವಗಳ ನೇಮ ಮತ್ತು ಕಾಂತಾಬಾರೆ ಬೂದಾಬಾರೆಯರಿಗೆ, ಮಾಯಾಂದಾಲ್‌ಗೆ ಪಂಚ ಕಜ್ಜಾಯ ಸೇವೆ , ಪ್ರಸಾದ ವಿತರಣೆ ನೆರವೇರಿತು.ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಗೀತಾಗಾನಾಮೃತ ಸಂಗೀತ ಕಾರ್ಯಕ್ರಮ, ಸಂಜೆ ಓಡ್ಯಂತಾಯ ದೈವದ ನೇಮೋತ್ಸವ, ರಾತ್ರಿ ಜಾರಂದಾಯ ಬಂಟ, ಧೂಮಾವತಿ ಬಂಟ, ಕೊಡಮಣಿತ್ತಾಯ, ಖಂಡಿಗೆ ಬೀಡಿನ ಕಾಂತೇರಿ ಧೂಮಾವತಿ, ಪಿಲಿ ಚಾಮುಂಡಿ ದೈವಗಳ ನೇಮೋತ್ಸವ ನಡೆಯಿತು.ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿಬಿ ಕರ್ಕೇರ, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್ ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಕಾಂತು ಲಕಣ ಪಟೇಲ್ ಮನೆತನದ ನಿರಂಜನ್ ಬಂಗೇರ ಮತ್ತಿತರರಿದ್ದರು.

ಮಂಗಳವಾರ ಬೆಳಗ್ಗೆ ಧ್ವಜಾವರೋಹಣ, ಕಾಂತು ಲಕ್ಕಣ ಗುರಿಕಾರರ ಮನೆಗೆ ಹಾಗೂ ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನ ನಡೆಯಲಿದೆ.

ಧಾರ್ಮಿಕ ಸಭೆ ಸಮಾರೋಪ: ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು ವಹಿಸಿದ್ದರು. ಅಂತಾರಾಷ್ಟ್ರೀಯ ಜ್ಯೋತಿಷಿ ಡಾ.ಎಂ.ಜಿ ಭಟ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ನ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಕಾಂತು ಲಕ್ಕಣ ಗಡಿ ಪ್ರಧಾನ ಪಠೇಲರ ಮನೆತನದ ಪ್ರತಿನಿಧಿ ಲೀಲಾಧರ ಬಂಗೇರ, ಭಾರತ್‌ ಬ್ಯಾಂಕಿನ ನಿರ್ದೇಶಕ ಭಾಸ್ಕರ ಸಾಲ್ಯಾನ್‌, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸ್ಯೆಟಿಯ ಅಧ್ಯಕ್ಷ ಎಚ್‌ ವಸಂತ ಬೆರ್ನಾಡ್‌, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೋಹನ್‌ ಕೋಟ್ಯಾನ್‌, ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿಯ ಪದಾಧಿಕಾರಿಗಳು ಇದ್ದರು.