ಮೂಲ್ಕಿ: ಪುರೋಹಿತರು ವಿದ್ಯಾ ಸಂಪನ್ನತೆ ಮೂಲಕ ಕಲ್ಪವೃಕ್ಷದಂತೆ ಜನರಿಗೆ ಹಿತ ವ್ಯಕ್ತಿಗಳಾಗಿ ಬೆಳೆದು ವಿದ್ಯಾದಾನದ ಮೂಲಕ ಸಮಾಜದಲ್ಲಿ ಆದರ್ಶಪ್ರಾಯರಾಗಬೇಕು ಎಂದು ಕಿನ್ನಿಗೋಳಿ ಶ್ರೀ ರಾಮ ಮಂದಿರದ ಮುಖ್ಯ ಅರ್ಚಕ ವೇದಮೂರ್ತಿ ಗಿರೀಶ್ ಭಟ್ ಹೇಳಿದರು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸ ಮಹರ್ಷಿ ವೇದಪಾಠ ಶಾಲೆಯಲ್ಲಿ ನಡೆದ ಶಾಲೆಯ 20ನೇ ವಾರ್ಷಿಕೋತ್ಸವ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಈ ಸಂದರ್ಭ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪ್ರಥಮ್ ಭಟ್, ಗಣೇಶ್ ಆಚಾರ್ಯ, ಶ್ರೀನಿವಾಸ್ ಭಟ್, ಅಮರನಾಥ ಭಟ್, ಪುರುಷೋತ್ತಮ ಭಟ್ ಅವರಿಗೆ ಶಿಕ್ಷಣ ಪ್ರಮಾಣಪತ್ರ ವಿತರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗುರುವಂದನೆ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಂಭವಿ ನರಸಿಂಹ ಕುಡ್ವಾ ಹಾಗೂ ಕಿನ್ನಿಗೋಳಿ ಗಣೇಶ್ ಮಲ್ಯ ಸ್ಮಾರಕ ದತ್ತಿ ಪ್ರಶಸ್ತಿಗಳನ್ನು ನೀಡಲಾಯಿತು.ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಅಧ್ಯಕ್ಷತೆ ವಹಿಸಿದ್ದು, ಪಾಠ ಶಾಲೆಯ ಮಹಾ ಪೋಷಕರಾದ ವಿಶ್ವನಾಥ ಎನ್. ಶೆಣೈ ಮುಂಬೈ ಮತ್ತು ಸುನಿತಾ ವಿಶ್ವನಾಥ ಶೆಣೈ, ಶಿಕ್ಷಕರಾದ ನವೀನ್ ಜನಾರ್ದನ ಭಟ್, ನಾರಾಯಣ ಶರ್ಮ ಕಾರ್ಕಳ, ಆಡಳಿತ ಮಂಡಳಿ ಸದಸ್ಯರಾದ ಯು. ಜಯರಾಮ ಶೆಣೈ, ಎಂ. ಪಾಂಡುರಂಗ ಭಟ್, ವಿ. ಹರಿ ಕಾಮತ್ ಉಪಸ್ಥಿತರಿದ್ದರು.
ಅನಂತ ಪ್ರಸಾದ್ ಭಟ್ ಸ್ವಾಗತಿಸಿದರು, ಪ್ರಥಮ ಭಟ್ ನಿರೂಪಿಸಿದರು. ಅನಂತ ಪ್ರಸಾದ್ ಭಟ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣನ ಬಾಲಲೀಲೆಗಳನ್ನು ನಿರೂಪಿಸುವ ಬಾಲಚರಿತಂ ಸಂಸ್ಕೃತ ನಾಟಕ ನಡೆಯಿತು.