ಮೂಲ್ಕಿಯಿಂದ ಕಿನ್ನಿಗೋಳಿ ಮೂಲಕ ಕಟೀಲು, ಬಜಪೆ, ಮೂಡುಬಿದಿರೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯು ಸಂಪೂರ್ಣ ಹೊಂಡಗಳಿಂದ ತುಂಬಿದ್ದು ರಸ್ತೆಯಲ್ಲಿ ವಾಹನ ಸಂಚರಿಸಲು ಅಸಾಧ್ಯವಾಗಿದೆ. ರಾಜ್ಯ ಹೆದ್ದಾರಿಯ ಕಾರ್ನಾಡ್-ಚರಂತಿಪೇಟೆ ಹೆದ್ದಾರಿಯಲ್ಲಿ ಬೃಹದಾಕಾರದ ಅಪಾಯಕಾರಿ ಹೊಂಡ
ಮೂಲ್ಕಿ: ಮೂಲ್ಕಿಯಿಂದ ಕಿನ್ನಿಗೋಳಿ ಮೂಲಕ ಕಟೀಲು, ಬಜಪೆ, ಮೂಡುಬಿದಿರೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯು ಸಂಪೂರ್ಣ ಹೊಂಡಗಳಿಂದ ತುಂಬಿದ್ದು ರಸ್ತೆಯಲ್ಲಿ ವಾಹನ ಸಂಚರಿಸಲು ಅಸಾಧ್ಯವಾಗಿದೆ. ರಾಜ್ಯ ಹೆದ್ದಾರಿಯ ಕಾರ್ನಾಡ್-ಚರಂತಿಪೇಟೆ ಹೆದ್ದಾರಿಯಲ್ಲಿ ಬೃಹದಾಕಾರದ ಅಪಾಯಕಾರಿ ಹೊಂಡವೊಂದು ವಾಹನ ಸವಾರರಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಚರಂತಿಪೇಟೆ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ನಿಂತು, ಹೆದ್ದಾರಿಯಲ್ಲಿ ಉಂಟಾಗಿರುವ ಬೃಹದಾಕಾರದ ಹೊಂಡದಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ವಾಹನ ಸವಾರರಿಗೆ ಹೊಂಡ ಗೋಚರಿಸದೆ, ಬಿದ್ದು, ಎದ್ದು ಬಿದ್ದು ಸಂಚರಿಸುವಂತಾಗಿದೆ. ಈ ಭಾಗದಲ್ಲಿ ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಅವ್ಯವಸ್ಥೆಗಳ ಆಗರವಾಗುತ್ತಿದ್ದು, ಮಳೆಗಾಲ ಮುಗಿದ ಕೂಡಲೇ ರಸ್ತೆ ಡಾಂಬರೀಕರಣದ ತೇಪೆ ಕಾಮಗಾರಿ ನಡೆಯುತ್ತಿದೆ. ಮೂಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಮೂಲ್ಕಿ ಬಿಲ್ಲವ ಸಂಘ, ಕಾರ್ನಾಡ್ ಸರ್ಕಾರಿ ಆಸ್ಪತ್ರೆ, ಗಾಂಧಿ ಮೈದಾನ, ಗೇರುಕಟ್ಟೆ, ಕುಬೆವೂರು, ಕೆಂಚನಕೆರೆ, ಅಂಗರಗುಡ್ಡೆ, ಕೆರೆಕಾಡು, ಪುನರೂರು, ಎಸ್ಕೋಡಿ, ಹೊಸ ಕಾವೇರಿ, ಪದ್ಮನೂರು, ಕಿನ್ನಿಗೋಳಿ ಹಾಗೂ ಮೂರು ಕಾವೇರಿ ಬಳಿ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇತ್ತೀಚೆಗೆ ಅಮೃತ್ ಕುಡಿಯುವ ನೀರಿನ ಯೋಜನೆಯ ಅವ್ಯೆಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆ ಬದಿಯಲ್ಲಿ ಹಾಗೂ ಕೆಲವು ಕಡೆ ರಸ್ತೆಗಳಲ್ಲಿ ಅಡ್ಡವಾಗಿ ಕತ್ತರಿಸಿ, ಪೈಪ್ ಲ್ಯೆನ್ ಅಳವಡಿಸಿ, ಬಳಿಕ ಸರಿ ಪಡಿಸದಿರುವುದರಿಂದ ಹೆಚ್ಚಿನ ಕಡೆಯಲ್ಲಿ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಹಾಗೂ ಶಾಸಕರಿಗೆ ದೂರು ನೀಡಿದರೂ ಗುತ್ತಿಗೆದಾರರು ಕ್ಯಾರೇ ಎನ್ನುತ್ತಿಲ್ಲ. ರಸ್ತೆಗಳನ್ನು ತಾತ್ಕಾಲಿಕ ನೆಲೆಯಲ್ಲಾದರೂ ಕೂಡಲೇ ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟವರು ರಸ್ತೆ ದುರಸ್ತಿ ಮಾಡುವಂತೆ ಸ್ತಳೀಯರು ಒತ್ತಾಯಿಸಿದ್ದಾರೆ.