ಬರದ ನಾಡಿಗೆ ಭರವಸೆ ತುಂಬಿದ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠ

| Published : Feb 22 2024, 01:51 AM IST

ಬರದ ನಾಡಿಗೆ ಭರವಸೆ ತುಂಬಿದ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠ
Share this Article
  • FB
  • TW
  • Linkdin
  • Email

ಸಾರಾಂಶ

ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ನಿರಂತರ ಅಧ್ಯಯನ ನಡೆಸುವ ಮೂಲಕ 155ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನ್ನದಾನೀಶ್ವರ ಗ್ರಂಥಮಾಲೆ ಪ್ರಾರಂಭಿಸಿ ಅದರಿಂದ ಸುಮಾರು 275ಕ್ಕೂ ಹೆಚ್ಚು ಕೖತಿಗಳನ್ನು ಪ್ರಕಟಿಸಿದ್ದಾರೆ.

ಶರಣು ಸೊಲಗಿಮುಂಡರಗಿ: ಮುಂಡರಗಿಯ ಈ ನಾಡಿನಲ್ಲಿ ಕೆಜಿಯಿಂದ ಪಿಜಿವರೆಗೆ ಶಾಲಾ-ಕಾಲೇಜುಗಳನ್ನು ತೆರೆಯುವ ಮೂಲಕ ಇಲ್ಲಿನ ಅನ್ನದಾನೀಶ್ವರ ಮಠ ಶಿಕ್ಷಣಕ್ರಾಂತಿ ಮಾಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ 150ಕ್ಕೂ ಹೆಚ್ಚು ಮೌಲ್ಯಯುತವಾದ ಗ್ರಂಥಗಳನ್ನು ರಚಿಸಿ ಎರಡನೇ ಜಚನಿ ಎಂದೇ ಹೆಸರಾಗುವ ಮೂಲಕ ಅನ್ನದಾನೀಶ್ವರ ಸಂಸ್ಥಾನ ಮಠ ಈ ನಾಡಿನಲ್ಲಿ ಅಚ್ಚಳಿಯದಂತಹ ಬಹುದೊಡ್ಡ ಕಾರ್ಯ ಮಾಡಿದೆ.

ಮುಂಡರಗಿ ಅನ್ನದಾನೀಶ್ವರ ಮಠದ ಏಳ್ಗೆಗಾಗಿ 1969 ಜ. 31ರಲ್ಲಿ ಇಂದಿನ ಡಾ. ಅನ್ನದಾನೀಶ್ವರ ಸ್ವಾಮೀಜಿ ಶ್ರೀಮಠದ ಹತ್ತನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಬಂದ ಆನಂತರ ಮಠದ ಹಿಂದಿನ ಸಾಧನೆಗಳಿಗೆ ಜೀವಂತಿಕೆ ತಂದಿದ್ದಾರೆ. ಎಲ್ಲ ವರ್ಗದ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಾದ ನಿಲಯ ಪ್ರಾರಂಭಿಸಿ ಅವರ ಬದುಕಿಗೆ ಆಶ್ರಯ ನೀಡುವ ಜತೆಗೆ, ಶೈಕ್ಷಣಿಕ ಪ್ರಗತಿಗೂ ಕಾರಣರಾಗಿದ್ದಾರೆ.

ಒಂದು ಕಾಲದಲ್ಲಿ ಇಲ್ಲಿನ ಯುವಕ-ಯುವತಿಯರಿಗೆ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಮರಿಚೀಕೆಯಾಗಿತ್ತು. ಇದನ್ನರಿತ ಶ್ರೀಗಳು ಅನ್ನದಾನೀಶ್ವರ ವಿದ್ಯಾ ಸಮಿತಿಯನ್ನು ಪ್ರಾರಂಭಿಸುವ ಮೂಲಕ ಮುಂಡರಗಿ ಪಟ್ಟಣವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 33ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿದೆ. ಶ್ರೀಗಳು ನಿರಂತರ ಅಧ್ಯಯನ ನಡೆಸುವ ಮೂಲಕ 155ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನ್ನದಾನೀಶ್ವರ ಗ್ರಂಥಮಾಲೆ ಪ್ರಾರಂಭಿಸಿ ಅದರಿಂದ ಸುಮಾರು 275ಕ್ಕೂ ಹೆಚ್ಚು ಕೖತಿಗಳನ್ನು ಪ್ರಕಟಿಸಿದ್ದಾರೆ. ಚನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ರಾಜ್ಯ ಮಟ್ಟದ ಶರಣ ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ. ಶ್ರೀಮಠದ ಯಾತ್ರಾ ಮಹೋತ್ಸವದಲ್ಲಿ ಬಡವರ, ಹಿಂದುಳಿದವರ ಸಹಾಯಕ್ಕಾಗಿ ಉಚಿತ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣೆ, ನೇತ್ರ ಚಿಕಿತ್ಸಾ ಶಿಬಿರ, ರೇಷ್ಮೆ-ಕೖಷಿ ಅಭಿವೖದ್ಧಿಯ ಪ್ರಾತ್ಯಕ್ಷತೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಬ್ಬ ಸಾಧಕರಿಗೆ ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು, ಪ್ರಸ್ತುತ ವರ್ಷ ಪಟ್ಟಣದ ಉದ್ಯಮಿದಾರರಾದ ಕರಬಸಪ್ಪ ಹಂಚಿನಾಳ‍ರನ್ನು ಗುರುತಿಸಿ ಪ್ರತಿಷ್ಠಾನ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಶ್ರೀಮಠದಿಂದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅನ್ನದಾನೀಶ್ವರ ಶರಣ ಸಾಹಿತ್ಯ ಮತ್ತು ಸಂಸ್ಕೖತಿ ಅಧ್ಯಯನ ಪೀಠ ಪ್ರಾರಂಭಿಸಿ ₹27.50 ಲಕ್ಷ ಠೇವಣಿ ಸಂಗ್ರಹಿಸಿದ್ದಾರೆ.

ಜ. ನಾಡೋಜ ಅನ್ನದಾನೀಶ್ವರ ಮಹಾ ಸ್ವಾಮೀಜಿಯವರ ಸೇವೆಯನ್ನು ಮೆಚ್ಚಿ ಇವರಿಗೆ ಅಲಹಾಬಾದ್ ವಿಶ್ವವಿದ್ಯಾಲಯ ಹಿಂದಿ ಸಾಹಿತ್ಯ ವಿಶಾರದ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಸೇವೆ ಗುರುತಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ 2005ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 2013ರಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯ ನಾಡೋಜ ಪದವಿ ನೀಡಿ ಗೌರವಿಸಿದೆ. ಅಲ್ಲದೇ ವಿವಿಧ ಸಂಘ-ಸಂಸ್ಥೆಗಳಿಂದ ಅನೇಕ ಪ್ರಶಸ್ತಿ, ಪುರಸ್ಕಾರಗಳು ಶ್ರೀಗಳ ಮುಡಿಗೇರಿವೆ.

ಶ್ರೀಗಳ ಹಾಗೂ ಉತ್ತರಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಅನ್ನದಾನೀಶ್ವರ ಯಾತ್ರಾ ಮಹೋತ್ಸವವು ವರ್ಷದಿಂದ ವರ್ಷಕ್ಕೆ ಹೆಚ್ಚು ಜನಮನ್ನಣೆ ಪಡೆಯುತ್ತಿದೆ. ಪ್ರತಿವರ್ಷವೂ ಯಾತ್ರಾ ಮಹೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ, ವಿವಿಧ ಕಲಾವಿದರಿಂದ ಅವರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ವಿವಿಧ ಸಾಹಿತ್ಯ ಕೖತಿಗಳ ಲೋಕಾರ್ಪಣೆ, ಜನತೆಯ ಅನುಕೂಲಕ್ಕಾಗಿ ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ಸಹ ಏರ್ಪಡಿಸಲಾಗುತ್ತಿದೆ ಎಂದು ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಹೇಳುತ್ತಾರೆ.