ಜಾತ್ರೆಯ ಅಂಗವಾಗಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತರಿಗೆ ಹೊಟ್ಟೆಯ ಜತೆಗೆ ನೆತ್ತಿಯ ಹಸಿವನ್ನೂ ನೀಗಿಸುವ ಕಾರ್ಯಗಳನ್ನು ನಮ್ಮ ಈ ಜಾತ್ರೆಗಳು ಮಾಡುತ್ತಿವೆ

ಮುಂಡರಗಿ: ರಾಜ್ಯದ ಅನೇಕ ಕಡೆಗಳಲ್ಲಿ ಜರುಗುವ ಜಾತ್ರೆಗಳನ್ನು ನಾವು ನೋಡಿದ್ದೇವೆ. ಆದರೆ, ಉತ್ತರ ಕರ್ನಾಟಕದಲ್ಲಿ ಜರುಗುವ ಜಾತ್ರೆಗಳ ಸೊಗಡೇ ಬೇರೆ.ಇಲ್ಲಿ ಸರ್ವ ಜನಾಂಗದವರು ಪಾಲ್ಗೊಳ್ಳುವ ಮೂಲಕ ಜಾತ್ಯತೀತವಾಗಿ ಜಾತ್ರೆಗಳು ನೆರವೇರುತ್ತವೆ ಎಂದು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ವೀರೇಶ ಹಂಚಿನಾಳ ಹೇಳಿದರು.

ಬುಧವಾರ ಸಂಜೆ ಮುಂಡರಗಿಯಲ್ಲಿ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳ 155ನೇ ಯಾತ್ರಾ ಮಹೋತ್ಸವದ ಅಂಗವಾಗಿ 3ನೇ ದಿನದ ಶಿವಾನುಭಗೋಷ್ಠಿಯಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಂಡರಗಿ ಅನ್ನದಾನೀಶ್ವರ ಜಾತ್ರೆ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಾತ್ರೆಗಳಲ್ಲಿ ಕೇವಲ ತೇರಿಗೆ ಉತ್ತತ್ತಿ ಎಸೆದು, ಬೆಂಡು ಬೆತ್ತಾಸ, ಆಟಿಗೆ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಈ ಜಾತ್ರೆಯ ಅಂಗವಾಗಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತರಿಗೆ ಹೊಟ್ಟೆಯ ಜತೆಗೆ ನೆತ್ತಿಯ ಹಸಿವನ್ನೂ ನೀಗಿಸುವ ಕಾರ್ಯಗಳನ್ನು ನಮ್ಮ ಈ ಜಾತ್ರೆಗಳು ಮಾಡುತ್ತಿವೆ. ಬರದ ನಾಡಿನಲ್ಲಿ ಭರವಸೆಯಾಗಿ ಶ್ರೀಗಳು ಶಾಲಾ-ಕಾಲೇಜುಗಳನ್ನು ತೆರೆದು ಅತ್ಯಂತ ಕಡಿಮೆ ಹಣ ಪಡೆದು ಎಲ್ಲ ಮಕ್ಕಳಿಗೂ ಶಿಕ್ಷಣ ಕಲಿಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಂತಹ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಎಲ್ಲರೂ ಟೊಂಕಕಟ್ಟಿ ನಿಲ್ಲೋಣ ಎಂದರು.

ಕುಕನೂರು ಶಾಖಾ ಮಠದ ಜ. ಡಾ. ಮಹಾದೇವ ಸ್ವಾಮೀಜಿ, ಹಿರೇಮಲ್ಲನಕೇರಿ‌‌ ಚನ್ನಬಸವೇಶ್ವರ ಮಹಾಸ್ವಾಮೀಜಿ ಮಾತನಾಡಿ, ಮುಂಡರಗಿ ಅನ್ನದಾನೀಶ್ವರ ಮಠ ಕೇವಲ ಒಂದು ಜಾತಿ-ಮತಕ್ಕೆ ಸೀಮಿತವಾಗಿರದೆ ಎಲ್ಲರನ್ನೂ ಒಳಗೊಡಿದೆ. ಬಾಚನಕಿ, ರಾಜವಾಳ‌ ಸೇರಿ 27 ಶಾಖಾ ಮಠಗಳಿವೆ. ರಾಜವಾಳದಲ್ಲಿ ₹50 ಲಕ್ಷ ವೆಚ್ಚದಲ್ಲಿ ಮಠದ ಜೀಣೋದ್ಧಾರ ಮಾಡುತ್ತಿದ್ದಾರೆ. ಬರದ ನಾಡನ್ನು ಭಕ್ತಿಯ ಶ್ರೀಮಂತ ನಾಡನ್ನಾಗಿ ಮಾಡಿದ ಕೀರ್ತಿ ಮುಂಡರಗಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿ‌.ಜೆ. ಹಿರೇಮಠ, ಉಪಾಧ್ಯಕ್ಷ ದೇವು ಹಡಪದ, ಸಹ ಕಾರ್ಯದರ್ಶಿ ಶಿವು ವಾಲಿಕಾರ, ದೇವಪ್ಪ ಇಟಗಿ ಮಾತನಾಡಿ, ನಮ್ಮಜ್ಜನ ಯಾತ್ರಾ ಮಹೋತ್ಸವ ಕೇವಲ ಜಾತ್ರೆಯಲ್ಲ. ಇದೊಂದು ಸಾಹಿತ್ಯ, ಸಂಸ್ಕೃತಿಯ ಪ್ರತಿಬಿಂಬವಾಗಿ ಹೊರಹೊಮ್ಮಿದೆ. ಯಾತ್ರಾ ಮಹೋತ್ಸವಕ್ಕೆ ಎಲ್ಲ ಪದಾಧಿಕಾರಿಗಳ ಜತೆಗೆ ಮುಂಡರಗಿ ಪಟ್ಟಣವೂ ಸೇರಿ ತಾಲೂಕು, ಜಿಲ್ಲೆ ಹಾಗೂ ಬೇರ ಬೇರೆ ಜಿಲ್ಲೆಗಳ ಭಕ್ತರು, ಶ್ರೀಮಠದ ಗುರು-ಹಿರಿಯರು, ಯುವಕರ ಬಳಗ ಎಲ್ಲರೂ ತನು, ಮನ, ಧನದಿಂದ ಸಹಾಯ, ಸಹಕಾರ ನೀಡಿದ್ದರಿಂದಾಗಿ ಅತ್ಯಂತ ಯಶಸ್ವಿಯಾಗಿದೆ ಎಂದರು.

ಜ.ನಾಡೋಜ‌ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, 1966ರಿಂದ ಇಲ್ಲಿ ವರೆಗೂ ಯಾತ್ರಾ ಮಹೋತ್ಸವ ನಿರಂತರವಾಗಿ ಜರುಗುತ್ತ ಬಂದಿದೆ. ಈ ಯಾತ್ರಾ ಮಹೋತ್ಸವದಲ್ಲಿ ಸಂಗೀತ, ಸಾಹಿತ್ಯ, ಸಾಮೂಹಿಕ ವಿವಾಹಗಳು, ಧಾರ್ಮಿಕವಾಗಿ ಅಯ್ಯಾಚಾರ, ಇನ್ನೊಬ್ಬರ ಜೀವ ಉಳಿಸುವ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಎಲ್ಲವೂ ಉತ್ತಮವಾಗಿ ಜರುಗಿವೆ. ಇಂತಹ ಕಾರ್ಯದಲ್ಲಿ ಭಕ್ತಿ ಭಾವದಿಂದ ಸೇವೆ ಮಾಡುವವರಿಗೆ ಸದಾ ಒಳ್ಳೆಯದಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ಡಾ. ಬಿ.ಜಿ. ಜವಳಿ, ಆರ್.ಎಲ್. ಪೊಲೀಸ್ ಪಾಟೀಲ, ಗಂಗಾವತಿಯ ವಿರೂಪಾಕ್ಷಪ್ಪ‌ ಮುಷ್ಠಿ, ಶರಣಪ್ಪ, ಎಂ.ಎಸ್. ಶಿವಶೆಟ್ಟರ, ಕುಮಾರ ಬನ್ನಿಕೊಪ್ಪ, ಶಿವು ನಾಡಗೌಡ್ರ, ಮಂಜುನಾಥ ಶಿವಶೆಟ್ಟರ, ಅನುಪಕುಮಾರ ಹಂಚಿನಾಳ, ಕೈಲಾಸ ಹಿರೇಮಠ, ವೀರೇಶ ಸಜ್ಜನ, ರವೀಂದ್ರಗೌಡ ಪಾಟೀಲ, ಮಂಜುನಾಥ ಕಾಲವಾಡ, ರಾಘವೇಂದ್ರ ಪಟಗೆ, ಡಾ. ಬಿ.ಎಸ್. ಮೇಟಿ, ಆಕಾಶ ಹಂಚಿನಾಳ, ಪ್ರಶಾಂತಗೌಡ ಗುಡದಪ್ಪನವರ, ವೀರೇಶ ಗೋಡಿ, ನಾಗರಾಜ ಗುಡಿಮನಿ, ವಿಶ್ವನಾಥ ಗಡ್ಡದ, ಗುಡದಪ್ಪ ಲಿಂಬಿಕಾಯಿ, ಆನಂದ ನಾಡಗೌಡ್ರ, ಮಂಜುನಾಥ ಮುಧೋಳ, ವೆಂಕಟೇಶ ದೇಸಾಯಿ, ರಂಗಪ್ಪ ಕೋಳಿ, ಸಿದ್ದು ದೇಸಾಯಿ, ನಾಗಭೂಷನ ಹಿರೇಮಠ, ಗಿರೀಶ ಅಂಗಡಿ, ಹಾಲಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಲೀಲಾವತಿ ಉಮಚಗಿ, ಯು.ಸಿ. ಹಂಪಿಮಠ ನಿರೂಪಿಸಿದರು.