ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರಸಭೆ ಅಧ್ಯಕ್ಷರ ವಿರುದ್ಧ 26 ಸದಸ್ಯರ ಸಹಿಯ ಅವಿಶ್ವಾಸ ಮಂಡನೆಯ ಪತ್ರವನ್ನು ಅಧ್ಯಕ್ಷರಿಗೆ ನೀಡಿದ ನಂತರ ನಗರಸಭೆಯ ರಾಜಕಾರಣದಲ್ಲಿ ವಿಚಿತ್ರ ತಿರುವುಗಳು ಶುರುವಾಗಿವೆ. ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಬೇಕು ಎಂಬ ಸಚಿವ ಡಿ.ಸುಧಾಕರ್ ಅವರ ನಿರ್ಣಯದ ವಿರುದ್ಧ ತಿರುಗಿ ಬಿದ್ದಿರುವ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಅವರು ಯಾವುದೇ ಕಾರಣಕ್ಕೂ ರಸ್ತೆ ವಿಸ್ತರಣೆ ಮಾಡದೆ ರಾಜೀನಾಮೆ ನೀಡುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.ಯಾರೋ ಪಕ್ಷ ವಿರೋಧಿಗಳನ್ನು ಅಧ್ಯಕ್ಷರನ್ನಾಗಿ ಮಾಡಲು ಮಸಲತ್ತು ನಡೆಸಿದ್ದು ಹಾಗೇನಾದರೂ ಆದರೆ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ ಎನ್ನುತ್ತಿರುವ ಅಧ್ಯಕ್ಷ ಅಜಯ್ ಕುಮಾರ್ ಅವರು ಪತ್ರಿಕೆಯೊಂದಿಗೆ ಸವಿಸ್ತಾರವಾಗಿ ಮಾತನಾಡಿ, ಹುಳಿಯಾರು ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಕಟ್ಟಡ ತೆರವುಗೊಳಿಸುವ ಸಂಬಂಧ ಕಟ್ಟಡ ಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದಾರೆ. ನಾನು ಈಗಾಗಲೇ ಶೇ.90 ರಷ್ಟು ಕೆಲಸ ಮಾಡಿದ್ದೇನೆ. ಉಳಿದ ಕೆಲಸ ಮಾಡಲು ಕೋರ್ಟ್ ತೀರ್ಪನ್ನು ಕಾಯಲಾಗುತ್ತಿದೆ. ಇಂತಹ ಸಮಯದಲ್ಲಿ ರಾಜೀನಾಮೆ ನೀಡಿದರೆ ರಸ್ತೆ ವಿಸ್ತರಣೆ ಮಾಡದೆ ಹೋದರು ಎಂದು ಜನತೆ ತಪ್ಪು ತಿಳಿಯುವ ಸಂಭವವಿದೆ. ನಗರಸಭೆ ಅಧ್ಯಕ್ಷರು ಕಟ್ಟಡ ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡುತ್ತಾರೆ ಎಂಬ ಸಾರ್ವಜನಿಕರ ನಂಬಿಕೆಗೆ ದ್ರೋಹ ಮಾಡಿದಂತಾಗುತ್ತದೆ. ಹಾಗಾಗಿ ಕಟ್ಟಡಗಳನ್ನು ತೆರವುಗೊಳಿಸಿಯೇ ನಾನು ರಾಜೀನಾಮೆ ನೀಡುವುದು ಎಂದಿದ್ದೆ. ಅದಕ್ಕೆ ಸಚಿವರು ಅವೆಲ್ಲ ಗೊತ್ತಿಲ್ಲ. ನೀನು ರಾಜೀನಾಮೆ ಕೊಡು. ನಾನು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ಯಾವ ಕಟ್ಟಡ ಒಡೆಯುವುದು ಬೇಡ. ನಾನು ಹೇಳಿದ ಮೇಲೆ ನೀನು ರಾಜೀನಾಮೆ ಕೊಡಬೇಕು ಎನ್ನುತ್ತಿದ್ದಾರೆ. ಆದರೆ ನನ್ನ ರಾಜೀನಾಮೆ ಪಡೆದು ಬಿಜೆಪಿ ಚಿಹ್ನೆಯಿಂದ ಗೆದ್ದು ಒಂದು ವರ್ಷದ ಹಿಂದೆ ಕಾಂಗ್ರೆಸ್ಗೆ ಬಂದಿರುವವರನ್ನು ಅಧ್ಯಕ್ಷರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಲೋಕಸಭೆ ಚುನಾವಣೆಯಲ್ಲೂ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದರು. ಅಂತವರಿಗೆ ಅಧ್ಯಕ್ಷ ಹುದ್ದೆ ನೀಡಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದಂತೆ.
ಸಚಿವರಿಗೆ ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಬೇಕಾಗಿಲ್ಲ. ಪಕ್ಷದಿಂದ ಪಕ್ಷಕ್ಕೆ ಬಂದಿರುವ ಕಾರ್ಯಕರ್ತರು ಸಚಿವರಿಗೆ ಹತ್ತಿರವಾಗುತ್ತಿದ್ದಾರೆ. ಈಗಾಗಲೇ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದವರು. ಮನೆ ಬಾಗಿಲಿಗೆ ಪಕ್ಷದ ಬಿ.ಫಾರಂ ಕೊಡಲು ಹೋದಾಗ ಬೇಡ ಎಂದಿದ್ದನ್ನು ಯಾರೂ ಮರೆತಿಲ್ಲ. ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗುತ್ತಿದೆ. ಈ ಮುಂಚೆ ಸಚಿವರು ಹೀಗಿರಲಿಲ್ಲ. ಸದಾ ಅಭಿವೃದ್ಧಿಯ ಕಡೆ ಚಿಂತಿಸುತ್ತಿದ್ದರು. ಆದರೀಗ ಅಭಿವೃದ್ಧಿ ಇಲ್ಲ. ಬರೀ ವ್ಯವಹಾರ ಆಗಿದೆ. ಸಚಿವರು ಈಗ ಮೂರ್ನಾಲ್ಕು ಜನರ ಕೈಗೊಂಬೆ ಆಗಿದ್ದಾರೆ. ಸಚಿವರು ಆಡಳಿತ ನಡೆಸುತ್ತಿಲ್ಲ. ಬೇರೆಯವರು ಆಡಳಿತ ನಡೆಸುತ್ತಿದ್ದಾರೆ. ಇಬ್ಬರು ಮೂವರ ಹಿತಾಸಕ್ತಿಗಾಗಿ ಆಡಳಿತ ನಡೆಯುತ್ತಿದೆ. ಇದು ಸಚಿವರಿಗೂ, ಕಾರ್ಯಕರ್ತರಿಗೂ ಹಾಗೂ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ನಗರಸಭೆ ಅಧ್ಯಕ್ಷ ಆದಾಗಿನಿಂದ ಇಲ್ಲಿಯವರೆಗೆ ಏಳೆಂಟು ಸಭೆಗಳನ್ನು ಮಾಡಿದ್ದೇನೆ. ಇತ್ತೀಚೆಗಷ್ಟೇ ನಡೆದ ಸಾಮಾನ್ಯ ಸಭೆ ಸೇರಿದಂತೆ ಎಲ್ಲಾ ಸಭೆಗಳಲ್ಲೂ ಸಂಪೂರ್ಣವಾಗಿ 31 ಜನ ಸದಸ್ಯರು ನನ್ನ ಬೆಂಬಲಕ್ಕಿದ್ದರು. ಈಗಿರುವಾಗ ನನ್ನ ಮೇಲೆ ಯಾಕೆ ಅವಿಶ್ವಾಸ ನಿರ್ಣಯ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ನಾನು ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಅಥವಾ ಸರ್ಕಾರದ ಆದೇಶಗಳನ್ನು ಉಲ್ಲoಘಿಸಿದಂತಹ ಯಾವ ತಪ್ಪುಗಳನ್ನು ಮಾಡಿಲ್ಲ.
ನಾನೇನಾದರೂ ರಾಜೀನಾಮೆ ನೀಡಿದರೆ ರಸ್ತೆ ಅಗಲೀಕರಣ ಕಾಮಗಾರಿ ಇಲ್ಲಿಗೇ ನಿಲ್ಲಲಿದೆ. ಕಳೆದ 50 ವರ್ಷಗಳಿಂದ ಯಾರೂ ಮಾಡದ ಕೆಲಸ ನಾನು ಮಾಡಿದ್ದೇನೆ. ಖಡಾಖಂಡಿತವಾಗಿ ರಾಜೀನಾಮೆ ಕೊಡುವುದಿಲ್ಲ ಎಂದಾಗ ನಿನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿಸ್ತೀನಿ ಎಂದು ಸಚಿವರು ತಿಳಿಸಿದಾಗ ನಿಮ್ಮ ಇಷ್ಟ ಎಂದಿದ್ದೇನೆ. ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ತಂದರೆ ನಾನು ಜನರ ಮುಂದೆ ಹೋಗುತ್ತೇನೆ. ಏನೇನಾಗಿದೆ ಇಷ್ಟು ದಿನ ಎಂಬುದರ ಸಂಪೂರ್ಣ ವಿವರ ತಿಳಿಸುತ್ತೇನೆ. ನನ್ನರಾಜೀನಾಮೆ ಮುಖ್ಯವೋ, ರಸ್ತೆ ಅಗಲೀಕರಣ ಮುಖ್ಯವೋ ಎಂಬುದನ್ನು ಜನರೇ ನಿರ್ಧರಿಸಲಿ. ಸಚಿವರಿಗೆ ಅಭಿವೃದ್ಧಿಯಾಗಲಿ ಪ್ರಾಮಾಣಿಕ ಕಾರ್ಯಕರ್ತರ ಅವಶ್ಯಕತೆಯಾಗಲಿ ಬೇಕಾಗಿಲ್ಲ. ಈಗಾಗಲೇ ಹಳೆಯ ಕಟ್ಟಡಗಳಿಗೆ ನೋಟಿಸ್ ಕೊಡಲಾಗಿದೆ. ಅದರ ಬಗ್ಗೆ ಇಂದು ಕೋರ್ಟ್ ತೀರ್ಪು ಇದೆ. ಏನು ಆಗುತ್ತೋ ಗೊತ್ತಿಲ್ಲ. ಕೋರ್ಟ್ ಒಂದು ವೇಳೆ ಹೊಡೆದು ಹಾಕಿ ಎಂದರೆ ನಾಳೆಯಿಂದಲೇ ರಸ್ತೆ ವಿಸ್ತರಣೆಗೇ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ರಸ್ತೆ ಅಗಲೀಕರಣ ಕಾಮಗಾರಿ ಮುಗಿಯುವವರೆಗೂ ಅಧ್ಯಕ್ಷ ಸ್ಥಾನದಿಂದ ಯಾವುದೇ ಕಾರಣಕ್ಕೂ ಇಳಿಯುವುದಿಲ್ಲ. ಒಂದು ವೇಳೆ ಸಚಿವರು, ಮುಖಂಡರು ನನ್ನ ವಿರುದ್ಧ ಪಿತೂರಿ ನಡೆಸಿ ಅಧ್ಯಕ್ಷ ಹುದ್ದೆಯಿಂದ ಇಳಿಸಿದರೆ ಜನರ ಮುಂದೆ ಬರುತ್ತೇನೆ. ತಾಲೂಕಿನಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಸಂಪೂರ್ಣವಾಗಿ ದಾಖಲೆ ಸಮೇತ ಜನರಿಗೆ ತಿಳಿಸುತ್ತೇನೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದಲ್ಲಿ ನಾನು ನ್ಯಾಯಾಲಯದ ಮೆಟ್ಟಿಲೇರಲಿದ್ದೇನೆ ಅಜಯ್ ಕುಮಾರ್ ಕಿಡಿಕಾರಿದರು.