ಪುರಸಭೆ ಜಾಗ ಅಕ್ರಮ ಖಾತೆ: ರದ್ಧತಿಗೆ ಕ್ರಮ

| Published : Oct 06 2024, 01:16 AM IST

ಸಾರಾಂಶ

೨೦೦೩ ರಲ್ಲಿ ಅಂದಿನ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ನಂಜುಂಡಪ್ಪ ಎಂ. ಭರತ್ ಕುಮಾರ್ ಎಂಬುವರಿಗೆ ೫ ಕೋಟಿ ಬೆಲೆ ಬಾಳುವ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬುದು ಶಾಸಕ ನಾರಾಯಣಸ್ವಾಮಿ ಆರೋಪ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದ ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ೫ ಕೋಟಿಗೂ ಅಧಿಕ ಮೌಲ್ಯದ ಜಾಗವನ್ನು ಹಿಂದಿನ ಪುರಸಭೆಯ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿದ್ದು, ಅದನ್ನು ತೆರವುಗೊಳಿಸಿ ಪುರಸಭೆಯ ಸ್ವಾಧೀನಕ್ಕೆ ಪಡೆಯಲಾಗುತ್ತದೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ನಂತರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ, ೨೦೦೩ ರಲ್ಲಿ ಅಂದಿನ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ನಂಜುಂಡಪ್ಪ ಎಂ. ಭರತ್ ಕುಮಾರ್ ಎಂಬುವರಿಗೆ ೫ ಕೋಟಿ ಬೆಲೆ ಬಾಳುವ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಖಾತೆ ರದ್ದು ಮಾಡಲು ಶಿಫಾರಸು

ಆದರೆ ಅಲ್ಲಿಯ ಸ್ಥಳೀಯ ನಿವಾಸಿಗಳು ಮತ್ತು ಜನಪ್ರತಿನಿಧಿಗಳು ಉದ್ಯಾನವನಕ್ಕೆ ಮೀಸಲಿಟ್ಟ ಸ್ಥಳವನ್ನು ತೆರವುಗೊಳಿಸಿ ಪಾರ್ಕ್ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ಪುರಸಭೆ ತನಿಖೆ ನಡೆಸಿ ಪರಿಶೀಲಿಸಿದಾಗ ಅಕ್ರಮ ಖಾತೆ ಎಂದು ಕಂಡು ಬಂದಿದೆ. ಈಗ ಪುರಸಭೆಯ ಆಸ್ತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅಕ್ರಮ ಖಾತೆಯನ್ನು ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಮಾಡಲಾಗುತ್ತದೆ ಎಂದರು. ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ಬಂಗಾರಪೇಟೆ ಪಟ್ಟಣಕ್ಕೆ ನೀರು ಸರಬರಾಜು ವ್ಯವಸ್ಥೆಯನ್ನು ಉತ್ತಮಪಡಿಸುವ ಯೋಜನೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ೨೨ ಕೋಟಿ ಅಂದಾಜು ಪಟ್ಟಿಗೆ ತಾಂತ್ರಿಕ ಅನುಮೋದನೆ ನೀಡಲಾಗಿದ್ದು, ಇದರ ಮೂಲಕ ಯರಗೋಳ್ ಜಲಾಶಯದ ನೀರನ್ನು ನಗರ ಪ್ರದೇಶಕ್ಕೆ ಸರಬರಾಜು ಮಾಡಲಾಗುವುದು ಎಂದರು.

ಕನ್ನಡಭವನ ನಿರ್ಮಾಣ

ಪುರಸಭೆ ಸೌಮೀಪದಲ್ಲಿರುವ ನಿವೇಶನದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ೪೦ ವರ್ಷಗಳ ಹಿಂದೆ ಅನುಮೋದನೆ ನೀಡಲಾಗಿತ್ತು. ವಿಪರ್ಯಾಸವೆಂದರೆ ಇದುವರೆಗೂ ಕನ್ನಡ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗಮನ ಹರಿಸಿಲ್ಲ. ಒಂದು ವೇಳೆ ಸಂಘದ ಪದಾಧಿಕಾರಿಗಳು ಕಟ್ಟಡ ನಿರ್ಮಾಣ ಮಾಡದೆ ಹೋದರೆ ಪುರಸಭೆ ವಶಕ್ಕೆ ಪಡೆದು ಕನ್ನಡ ಭವನ ನಿರ್ಮಾಣ ಪುರಸಭೆ ಮುಂದಾದರೆ ಅದಕ್ಕೆ ಹಣಕಾಸಿನ ನೆರವು ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂಧ, ಸದಸ್ಯರಾದ ಕೆ.ಚಂದ್ರಾರೆಡ್ಡಿ, ವೆಂಕಟೇಶ್, ?ಫಿ, ಸಾಧಿಕ್, ಪ್ರವೀಣ್, ಅರುಣಾಚಲಂ ಮಣಿ, ರಾಕೇಶ್, ಪೋನ್ನಿ ಮುಂತಾದವರು ಹಾಜರಿದ್ದರು.