ಸಾರಾಂಶ
ಗುಂಡ್ಲುಪೇಟೆ ಪಟ್ಟಣದ ರಸ್ತೆಯಲ್ಲಿ ಕಸ ತುಂಬಿದ ಟ್ರ್ಯಾಕ್ಟರ್ ಘನ ತ್ಯಾಜ್ಯ ಘಟಕಕ್ಕೆ ತೆರಳುತ್ತಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪುರಸಭೆ ನೌಕರರು ಹಾಗೂ ಪೌರ ಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಮುಷ್ಕರದ ಹಿನ್ನೆಲೆ ಪಟ್ಟಣದಲ್ಲಿ ಸ್ವಚ್ಛತೆ ಇಲ್ಲದೆ ಕಸದ ಪೇಟೆಯಂತಾಗಿದೆ ಎಂದು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಪುರಸಭೆ ಸಿಬ್ಬಂದಿ ಶನಿವಾರ ಬೆಳ್ಳಂ ಬೆಳಗ್ಗೆಯೇ ಸ್ವಚ್ಛತೆಗೆ ಮುಂದಾಗಿದ್ದಾರೆ.ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕಸ ತುಂಬಿ ತುಳುಕಾಡುತ್ತಿದೆ. ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿರುವ ಪರಿಣಾಮ ಮಳೆ ಸತತವಾಗಿ ಐದಾರು ದಿನಗಳಿಂದ ಬೀಳುತ್ತಿರುವ ಕಾರಣ ಕಸ ಬಿದ್ದ ಕಡೆಗಳಲ್ಲಿ ವಾಸನೆ ಬರುತ್ತಿದೆ ಎಂದು ವರದಿ ಪ್ರಕಟಿಸಿ ಪುರಸಭೆ ಗಮನ ಸೆಳೆದಿತ್ತು.ಕನ್ನಡಪ್ರಭ ವರದಿ ಶನಿವಾರ ಬೆಳಗ್ಗೆ ಗಮನಿಸಿದ ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣ ಸಿಬ್ಬಂದಿಗೆ ಸೂಚನೆ ನೀಡಿ ಕಸ ಬಿದ್ದಿರುವ ಕಡೆ ಕೂಡಲೇ ಸ್ವಚ್ಛ ಮಾಡಿ ಫೋಟೋ ಕಳುಹಿಸಬೇಕು ಎಂದು ತಾಕೀತು ಮಾಡಿದ ಬೆನ್ನಲ್ಲೆ ಪುರಸಭೆ ಸಿಬ್ಬಂದಿ ಕಸ ಬಿದ್ದ ಸ್ಥಳಗಳನ್ನು ಹುಡುಕಿಕೊಂಡು ಟ್ರ್ಯಾಕ್ಟರ್ಗೆ ಕಸ ತುಂಬಿಸಿ ಸ್ವಚ್ಛ ಮಾಡಿದ್ದಾರೆ. ಅಧಿಕಾರಿಗಳ ಕಣ್ಣು ತೆರೆಸಿ ಕಸ ಸ್ವಚ್ಛ ಮಾಡಿದ್ದಕ್ಕೆ ಪಟ್ಟಣದ ನಿವಾಸಿ ವೆಂಕಟೇಶ್ ಕನ್ನಡಪ್ರಭಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವರದಿ ಬಂದ ಬಳಿಕ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣದ ಸ್ವಚ್ಛತೆಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದು, ಪತ್ರಿಕೆಗಳಲ್ಲಿ ವರದಿ ಬರುವ ತನಕ ಅಧಿಕಾರಿಗಳು ಏಕೆ ನಿರ್ಲಕ್ಷ್ಯ ವಹಿಸಿದ್ದರು ಎಂಬುದು ಜನರ ಪ್ರಶ್ನೆಯಾಗಿದೆ.ಪಟ್ಟಣದ ಕೆಲ ಪಾರ್ಕ್ಗಳನ್ನು ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣ ವೀಕ್ಷಿಸಿ ಪಾರ್ಕ್ ಅನ್ನು ಮೊದಲು ಸ್ವಚ್ಛ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಶನಿವಾರ ಬೆಳಗ್ಗೆ ಪಟ್ಟಣದ ಕೆಲ ವಾರ್ಡ್ನ ಪಾರ್ಕ್ಗೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಪಾರ್ಕ್ ಸ್ವಚ್ಛತೆ ಬಳಿಕ ಪಾರ್ಕ್ಗೆ ಬರುವ ಸಾರ್ವಜನಿಕರಿಗೆ ಕೂರಲು ಆಸನದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.