ಸಾರಾಂಶ
ಬಹದ್ದೂರುಬಂಡಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಕೇವಲ 24 ಗಂಟೆಯಲ್ಲಿ ಭೇದಿಸಿ, ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
- ಬಹದ್ದೂರುಬಂಡಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ
- ಜೊತೆಗಿದ್ದ ಪ್ರೇಯಿಸಿಯಿಂದಲೇ ಕೊಲೆ- ಶ್ರೀನಾಥ ಎನ್ನುವ ವ್ಯಕ್ತಿಯೇ ಕೊಲೆಯಾಗಿರುವುದುಕನ್ನಡಪ್ರಭ ವಾರ್ತೆ ಕೊಪ್ಪಳ
ಬಹದ್ದೂರುಬಂಡಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಕೇವಲ 24 ಗಂಟೆಯಲ್ಲಿ ಭೇದಿಸಿ, ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.ಏ. 16ರಂದು ಕೊಪ್ಪಳ ತಾಲೂಕಿನ ಬಹದ್ದೂರು ಬಂಡಿ ಗ್ರಾಮದಲ್ಲಿ ಕೊಲೆ ನಡೆದಿತ್ತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಳಂಬಾರ ಗ್ರಾಮ ಮೂಲದ ಹಾಗೂ ಸದ್ಯ ಬಹದ್ದೂರುಬಂಡಿ ಗ್ರಾಮದ ನಿವಾಸಿ ಶ್ರೀನಾಥ ಖಾರ್ವಿ (45) ಕೊಲೆಯಾದವರು.
ಶ್ರೀನಾಥ ನಾಲ್ಕಾರು ವರ್ಷಗಳಿಂದ ಬಹದ್ದೂರುಬಂಡಿಯಯೇ ವಾಸಿಸುತ್ತಿದ್ದರು. ಸ್ಥಳೀಯ ವಿವಾಹಿತ ಮಹಿಳೆಯೊಂದಿಗೆ ಲಿವಿಂಗ್ ಟುಗೇದರ್ ರೀತಿಯಲ್ಲಿ ಜೀವನ ನಡೆಸುತ್ತಿದ್ದರು. ವಿಪರೀತ ಕುಡಿಯುತ್ತಿದ್ದ ಮತ್ತು ಬೇರೆ ಸಂಬಂಧ ಹೊಂದಿದ್ದ ಎಂಬ ಅನುಮಾನದೊಂದಿಗೆ ಕುಡಿದ ಮತ್ತಿನಲ್ಲಿದ್ದಾಗ ಪ್ರೇಯಸಿ ಖಾಜಾಬೀ ಹಾಲಳ್ಳಿ ಕಲ್ಲು ಎತ್ತಿಹಾಕಿ ಆತನನ್ನು ಕೊಲೆ ಮಾಡಿದ್ದಳು. ವಿಚಾರಣೆ ಸಂದರ್ಭದಲ್ಲಿ ಅವಳು ಒಪ್ಪಿಕೊಂಡಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ಎಸ್ಪಿ ಯಶೋದಾ ವಂಟಿಗೋಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತಕುಮಾರ, ಡಿವೈಎಸ್ಪಿ ಮುತ್ತಣ್ಣ ಸವರಗೋಳ ಮಾರ್ಗದರ್ಶನದಲ್ಲಿ ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ ಡಿ. ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ.ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು:
ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, 10.5 ತೊಲೆ ಬಂಗಾರದ ಒಡವೆ ವಶಪಡಿಸಿಕೊಂಡಿದ್ದಾರೆ.ಶರಣಮ್ಮ ಯರೇಂಗಳ್ಳಿ ಎನ್ನುವ ಮಹಿಳೆ ತಮ್ಮ ಅಂಗಡಿ ಮತ್ತು ಮನೆಯಲ್ಲಿ ಬೀಗ ಮುರಿದು ಕಳ್ಳತನವಾಗಿದ್ದ ಬಗ್ಗೆ ದೂರು ನೀಡಿದ್ದರು. ಇದನ್ನು ಪತ್ತೆ ಮಾಡಿ, ಆರೋಪಿಗಳಾದ ನಾಗರಾಜ ದಿವಟರ, ಬಸನಗೌಡ ತೋಟಗಂಟಿ ಎನ್ನುವವರನ್ನು ಬಂಧಿಸಲಾಗಿದೆ.
ನಿತ್ಯವೂ ಅಂಗಡಿಗೆ ಬರುತ್ತಿದ್ದ ಇವರು, ಬಂಗಾರ ಮತ್ತು ಹಣವನ್ನು ಇಡುವ ಮಾಹಿತಿ ತಿಳಿದುಕೊಂಡು ಕಳ್ಳತನ ಮಾಡಿದ್ದರು. ಎಸ್ಪಿ ಯಶೋದಾ ವಂಟಿಗೋಡಿ ಮಾರ್ಗದರ್ಶನದಲ್ಲಿ ಯಲಬುರ್ಗಾ ಸಿಪಿಐ ಮೌನೇಶ್ವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.