ಕನ್ನಡಪ್ರಭ ವಾರ್ತೆ ಬೆಳಗಾವಿ/ಚ.ಕಿತ್ತೂರು ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಶಂಕರಪ್ಪ ಕೋಟೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಕಲ್ಮೇಶ ಪತ್ನಿ, ಮಗ ಸೇರಿದಂತೆ ನಾಲ್ವರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಫೆ.20ರ ಸಂಜೆ ಹಿರೇನಂದಿಹಳ್ಳಿ ಗ್ರಾಮದ ಚಂದ್ರಶೇಖರ ಬಸಪ್ಪ ಹನವಮಾಳ ಅವರು, ತಮ್ಮ ಜಮೀನಿನ ಆರ್.ಎಸ್ ನಂ.125ರಲ್ಲಿ ಇರುವ ಜೋಳದ ಬೆಳೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಬಗ್ಗೆ ದೂರು ನೀಡಿದ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ/ಚ.ಕಿತ್ತೂರು

ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಶಂಕರಪ್ಪ ಕೋಟೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಕಲ್ಮೇಶ ಪತ್ನಿ, ಮಗ ಸೇರಿದಂತೆ ನಾಲ್ವರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಫೆ.20ರ ಸಂಜೆ ಹಿರೇನಂದಿಹಳ್ಳಿ ಗ್ರಾಮದ ಚಂದ್ರಶೇಖರ ಬಸಪ್ಪ ಹನವಮಾಳ ಅವರು, ತಮ್ಮ ಜಮೀನಿನ ಆರ್.ಎಸ್ ನಂ.125ರಲ್ಲಿ ಇರುವ ಜೋಳದ ಬೆಳೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಫೆ.15ರ ಸಂಜೆ 6 ಗಂಟೆಯಿಂದ ಫೆಬ್ರವರಿ 17ರ ಮಧ್ಯಾಹ್ನ 12 ಗಂಟೆಯ ಅವಧಿಯಲ್ಲಿ 30ರಿಂದ 35 ವರ್ಷದೊಳಗಿನ ವ್ಯಕ್ತಿಯನ್ನು ಹತ್ಯೆ ಮಾಡಿ ಶವವನ್ನು ಜಮೀನಿನಲ್ಲಿ ತಂದು ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣ ದಾಖಲಸಿಕೊಂಡಿದ್ದ ಕಿತ್ತೂರು ಪೊಲೀಸರು ತನಿಖೆ ನಡೆಸಿ ಮೃತ ವ್ಯಕ್ತಿ ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಶಂಕರಪ್ಪ ಕೋಟೆ(50) ಎಂದು ಪತ್ತೆ ಮಾಡಿದ್ದರು. ಹೆಚ್ಚಿನ ತನಿಖೆಯಲ್ಲಿ ಮಹೇಶ ಮಡಿವಾಳಪ್ಪ ಅಂಬಣ್ಣವರ ಹಾಗೂ ಮುದಕಪ್ಪ ಪದ್ಮರಾಜ ಕೊಳೆಕರ ಎಂಬುವರು ಪ್ರಮುಖ ಆರೋಪಿಗಳು ಕೊಲೆ ನಡೆಸಿರುವುದು ಬಹಿರಂಗವಾಗಿದೆ. ಅಲ್ಲದೇ, ಮೃತನ ಹೆಂಡತಿ ಕಸ್ತೂರಿ ಕಲ್ಮೇಶ ಕೋಟೆ ಹಾಗೂ ಮಗ ಕಿರಣ ಕಲ್ಮೇಶ ಕೋಟೆ ಸಹ ಆರೋಪಿಗಳೊಂದಿಗೆ ಸೇರಿ ಆಸ್ತಿ ಕಬಳಿಸುವ ಉದ್ದೇಶದಿಂದ ಸಂಚು ರೂಪಿಸಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಫೆ.24ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೈಲಹೊಂಗಲ ಉಪವಿಭಾಗದ ಡಿಎಸ್ಪಿ ನೇತೃತ್ವದಲ್ಲಿ ಕಿತ್ತೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ್ದಾರೆ. ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಪ್ರಶಂಸಿಸಿದ್ದಾರೆ.