ಮಂಗ್ಳೂರಲ್ಲಿ ಸುಹಾಸ್‌ ಬಳಿಕ ಇನ್ನೊಂದು ಹತ್ಯೆ

| Published : May 28 2025, 01:59 AM IST

ಮಂಗ್ಳೂರಲ್ಲಿ ಸುಹಾಸ್‌ ಬಳಿಕ ಇನ್ನೊಂದು ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಬೆನ್ನಲ್ಲೇ ಇದೀಗ ಪಿಕಪ್ ವಾಹನ ಚಾಲಕನಾಗಿದ್ದ ಹಾಗೂ ಮಸೀದಿ ಸಮಿತಿಯೊಂದರ ಕಾರ್ಯದರ್ಶಿ ಆಗಿದ್ದ ರಹೀಮ್ ಎಂಬುವರನ್ನು ಹಾಡಹಗಲೇ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

- ಬಂಟ್ವಾಳ ಬಳಿ ಮಸೀದಿ ಸದಸ್ಯ ಕೊಲೆ

- ದ.ಕ. ಉದ್ವಿಗ್ನ । ಜಿಲ್ಲೆಯಲ್ಲಿ ನಿಷೇಧಾಜ್ಞೆ----

- ಪಿಕಪ್‌ ವಾಹನ ಚಾಲಕನಾದ ಮಸೀದಿ ಸದಸ್ಯ ರಹೀಂ ಕೊಲೆ

- ಇರಾಕೋಡಿ ಎಂಬಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಕೃತ್ಯ

- ಶಾಫಿ ಎಂಬಾತಗೆ ಗಾಯ । ಈ ಸಂಬಂಧ ಮೂವರು ವಶಕ್ಕೆ

-- ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಬೆನ್ನಲ್ಲೇ ಇದೀಗ ಪಿಕಪ್ ವಾಹನ ಚಾಲಕನಾಗಿದ್ದ ಹಾಗೂ ಮಸೀದಿ ಸಮಿತಿಯೊಂದರ ಕಾರ್ಯದರ್ಶಿ ಆಗಿದ್ದ ರಹೀಮ್ ಎಂಬುವರನ್ನು ಹಾಡಹಗಲೇ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಈ ಹತ್ಯೆ ನಡೆದಿದೆ. ಕೊಳತ್ತಮಜಲು ಬೆಳ್ಳೂರು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ (34) ಕೊಲೆಯಾದ ಪಿಕಪ್‌ ವಾಹನ ಚಾಲಕ. ಈ ವೇಳೆ ರಹೀಂನ ಜೊತೆಗಿದ್ದ ಮತ್ತೋರ್ವ ಯುವಕ ಖಲಂದರ್ ಶಾಫಿ ಎಂಬುವರು ಗಾಯಗೊಂಡಿದ್ದು, ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೊತೆಗೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 30ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಮರಳು ಅನ್ ಲೋಡ್ ವೇಳೆ ದಾಳಿ:

ಪಿಕಪ್ ಚಾಲಕನಾಗಿದ್ದ ರಹೀಂಗೆ ಮರಳು ತಂದು ಕೊಡುವಂತೆ ಪೋನ್‌ನಲ್ಲಿ ಗ್ರಾಹಕನೊಬ್ಬ ಕೋರಿದ್ದ. ಫೋನ್‌ ಕರೆಯಂತೆ ಮರಳು ಸಾಗಿಸಿ, ನಿರ್ಮಾಣ ಹಂತದಲ್ಲಿರುವ ಮನೆಯ ಮುಂಭಾಗದಲ್ಲಿ ಮರಳನ್ನು ಅನ್ ಲೋಡ್ ಮಾಡುತ್ತಿದ್ದ. ಈ ವೇಳೆ ಬೈಕ್‌ನಲ್ಲಿ ಬಂದ‌ ಇಬ್ಬರು ಮಾರಕಾಯುಧಗಳಿಂದ‌ ರಹೀಂ ಮೇಲೆ ದಾಳಿ ನಡೆಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ರಹೀಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ, ರಹೀಂ ರಕ್ಷಣೆಗೆ ಮುಂದಾದ ಖಲಂದರ್ ಶಾಫಿ ಎಂಬುವರ ಮೇಲೂ ಹಲ್ಲೆ ನಡೆಸಲಾಗಿದ್ದು, ಅವರ ಕೈಗೆ ಗಾಯವಾಗಿದೆ. ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿರ್ಜನ ಪ್ರದೇಶದಲ್ಲಿ ಕೃತ್ಯ: ತಾಲೂಕಿನ ಕೂರಿಯಾಳ ಗ್ರಾಮದ ಕಾಂಬೋಡಿ ಇರಾಕೋಡಿ, ನಿರ್ಜನ ಪ್ರದೇಶವಾಗಿದೆ. ಜನಸಂಚಾರ ಇಲ್ಲದ ಈ ಪ್ರದೇಶದಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಖಲಂದರ್ ನೀಡಿದ ಮಾಹಿತಿಯಂತೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಮೃತ ರಹೀಂ ಬಂಟ್ವಾಳದ ಅಡ್ಡೂರಿನ ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿಯಾಗಿದ್ದು, ಸದಾ ಚಟುವಟಿಕೆಯಲ್ಲಿದ್ದವರು ಹಾಗೂ ಸ್ಥಳೀಯವಾಗಿ ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿಯಾಗಿದ್ದರು. ಈ ಪ್ರದೇಶದ ಎಲ್ಲಾ ಧರ್ಮದವರು ಹೊಯ್ಗೆ (ಮರಳು) ಅಗತ್ಯ ಬಿದ್ದಾಗ ಇವರಲ್ಲಿ ತರಿಸಿಕೊಳ್ಳುತ್ತಿದ್ದರು ಎಂದು ಸ್ಥಳೀಯರು ಮಾಹಿತಿ‌ ನೀಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.