ಕಂಪ್ಲಿಯಲ್ಲಿ ಕೊಲೆ ಆರೋಪಿಗಳ ಬಂಧನ

| N/A | Published : Jun 21 2025, 12:49 AM IST / Updated: Jun 21 2025, 01:20 PM IST

ಸಾರಾಂಶ

ಕಂಪ್ಲಿ ಸೋಮಪ್ಪ ಕೆರೆಯ ಮೇಲೆ ಮೇ 15ರಂದು ದೊಡ್ಡ ಬಸವನಗೌಡ ಅವರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಕಂಪ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಂಪ್ಲಿ: ಇಲ್ಲಿನ ಸೋಮಪ್ಪ ಕೆರೆಯಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜೆಜ್ಜಿ ಕೊಲೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಜಶೇಖರ್ (19), ಸಂಘರ್ಷಕ್ಕೊಳಗಾದ 17 ವರ್ಷದ ಓರ್ವ ಬಾಲಕ ಬಂಧಿತರು.

ಇಲ್ಲಿನ ಸೋಮಪ್ಪ ಕೆರೆಯ ಮೇಲೆ ಮೇ 15ರ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಆಂಧ್ರಪ್ರದೇಶದ ನದಿಚಾಗಿ ಗ್ರಾಮದ ದೊಡ್ಡ ಬಸವನಗೌಡ ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಈ ಕುರಿತು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ತೋರಣಗಲ್ಲು ಉಪ ವಿಭಾಗದ ಡಿವೈಎಸ್‌ಪಿ ಪ್ರಸಾದ್ ಗೋಖಲೆ, ಕಂಪ್ಲಿ ಠಾಣೆಯ ಪಿಐ ಕೆ.ಬಿ. ವಾಸುಕುಮಾರ್, ಪಿಎಸ್‌ಐ ಅವಿನಾಶ್ ಕಾಂಬ್ಳೆ, ಎಎಸ್‌ಐ ಬಸವರಾಜ, ಸಿಬ್ಬಂದಿ ಬಸವರಾಜ ಹಿರೇಮಠ, ರಮೇಶ, ಮಲ್ಲೇಶ ರಾಥೋಡ, ಸತ್ಯನಾರಾಯಣ, ಸುರೇಶ, ಮುತ್ತುರಾಜ, ಗಾದಿಲಿಂಗಪ್ಪ, ವಿಶ್ವನಾಥ, ಪ್ರಭಾಕರ, ತಿಮ್ಮಯ್ಯ ಅವರನ್ನು ಸೇರಿ ಒಂದು ತಂಡ ರಚಿಸಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಘಟನೆಯ ವಿವರ: ಸೋಮಪ್ಪ ಕೆರೆಯ ಮೇಲಿನ ಯಲ್ಲಮ್ಮ ಗುಡಿಯ ಪಕ್ಕದಲ್ಲಿ ಮೇ 15ರ ಮಧ್ಯರಾತ್ರಿ ವೇಳೆಯಲ್ಲಿ ಆರೋಪಿತರಾದ ರಾಜಶೇಖರ (19) ಹಾಗೂ 17 ವರ್ಷದ ಬಾಲಕ ಇಬ್ಬರು ಮಧ್ಯ ಸೇವಿಸುತ್ತ ಕುಳಿತುಕೊಂಡಿರುವಾಗ ಸಮೀಪದಲ್ಲೇ ಪಾನಮತ್ತನಾಗಿದ್ದ ದೊಡ್ಡ ಬಸವರಾಜ್ ಕುಳಿತಿದ್ದರು. ಈ ವೇಳೆ ಆರೋಪಿಗಳು ಹಾಗೂ ಮೃತ ವ್ಯಕ್ತಿಯ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದ್ದು, ಆರೋಪಿತರು ಸ್ಥಳದಲ್ಲೇ ಇದ್ದ ಕರಿ ಬಂಡೆಯನ್ನು ತೆಗೆದುಕೊಂಡು ದೊಡ್ಡ ಬಸವನಗೌಡ ಅವರ ತಲೆಗೆ ಹೊಡೆದು ಓಡಿಹೋಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ದೊಡ್ಡ ಬಸವನಗೌಡನ ಮೃತಪಟ್ಟಿದ್ದರು.

ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಖಚಿತ ಮಾಹಿತಿಯೊಂದಿಗೆ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ರಾಜಶೇಖರನ್ನು, ಸಂಘರ್ಷಕ್ಕೊಳಗಾದ 17 ವರ್ಷದ ಬಾಲ ಆರೋಪಿಯನ್ನು ಪಟ್ಟಣದಲ್ಲಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ ತಿಳಿಸಿದ್ದಾರೆ. ಅಲ್ಲದೇ ಕೊಲೆಗೈದ ಆರೋಪಿಗಳನ್ನು ಸೆರೆ ಹಿಡಿದ ಪೊಲೀಸ್ ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Read more Articles on