ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ನಡೆಯುವ ಸಂಗೀತ, ನೃತ್ಯ ತಾಳವಾದ್ಯ ಪರೀಕ್ಷೆಗಳು ಭಾನುವಾರ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆದವು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ನಡೆಯುವ ಸಂಗೀತ, ನೃತ್ಯ ತಾಳವಾದ್ಯ ಪರೀಕ್ಷೆಗಳು ಭಾನುವಾರ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆದವು. ವಾಣಿಜ್ಯ ಕಾಲೇಜಿನ ಈ ಪರೀಕ್ಷಾ ಕೇಂದ್ರದಲ್ಲಿ ಸುಮಾರು 850 ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳ ಬರೆದರು. ಪರೀಕ್ಷೆಗಳು ಸಂಗೀತ, ನೃತ್ಯ, ತಾಳವಾದ್ಯ ಪ್ರಕಾರಗಳಲ್ಲಿ ಜೂನಿಯರ್, ಸೀನಿಯರ್, ವಿದ್ವತ್, ವಿದ್ವತ್ ಪೂರ್ವ, ವಿದ್ವತ್ ಅಂತಿಮ ವಿಭಾಗಗಳಲ್ಲಿ ನಡೆದವು.ಅವುಗಳಲ್ಲಿ ಮುಖ್ಯವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ಕೂಚುಪುಡಿ, ಕಥಕ್, ಮೃದಂಗ, ತಬಲಾ, ಇತ್ಯಾದಿ ಪರೀಕ್ಷೆಗಳು ಒಳಗೊಂಡಿದ್ದವು.
ಸುಮಾರು 850ಕ್ಕೂ ಹೆಚ್ಚು ಮಕ್ಕಳ ಜೊತೆಗೆ ಅವರ ಪೋಷಕರು ಕೂಡ ಬಂದಿದ್ದರಿಂದ ಕಾಲೇಜಿನ ಕ್ಯಾಂಪಸ್ ಜನರಿಂದ ತುಂಬಿ ಹೋಗಿತ್ತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಅವಿನಾಶ್ ಗದ್ದಲ ಆಗದಂತೆ ತಮ್ಮ ಸಿಬ್ಬಂದಿಗಳ ಸಹಕಾರದಲ್ಲಿ ಶಾಂತಿಯುತವಾಗಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಗಂಗೂಬಾಯಿ ಹಾನಗಲ್ ಮೈಸೂರು ವಿವಿಯ ಶಿವಮೊಗ್ಗ ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಸಂಯೋಜಕ ಡಾ. ಎಂ. ಚಂದ್ರಪ್ಪ, ಈ ಪರೀಕ್ಷೆಗಳು ಇತ್ತೀಚೆಗೆ ಅತ್ಯಂತ ಮಹತ್ವ ಪಡೆದಿವೆ. ಪ್ರತಿ ವರ್ಷ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಈ ವರ್ಷ ರಾಜ್ಯದಲ್ಲಿ 18500ಕ್ಕೂ ಹೆಚ್ಚು ಮಕ್ಕಳು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ 835ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆದಿದ್ದು, ಸುಮಾರು 30 ಕೊಠಡಿಗಳಲ್ಲಿ ಪರೀಕ್ಷೆ ನಡೆದಿದೆ. 20ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ ಎಂದರು.
ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ಕುಲಪತಿ ಪ್ರೊ.ಕೆ. ರಾಮಕೃಷ್ಣಯ್ಯ, ಕುಲಸಚಿವ ಪ್ರೊ. ಎಂ.ಜೆ. ಮಂಜುನಾಥ್, ಪರಿವೀಕ್ಷಕರಾದ ದೀಪಿಕಾ, ಹಾಗೂ ಸ್ಥಳೀಯ ಪರೀಕ್ಷಾ ಸಂಚಾಲಕ ಗಣೇಶ್ ಕೆಂಚನಾಲ್, ಕಾಲೇಜಿನ ಪ್ರಾಂಶುಪಾಲ ಟಿ. ಅವಿನಾಶ್ ಅವರ ಸಹಕಾರದಲ್ಲಿ ಅತ್ಯಂತ ಸುಗಮವಾಗಿ ಪರೀಕ್ಷೆಗಳು ನಡೆದಿವೆ ಎಂದರು.ಪ್ರಾಂಶುಪಾಲ ಟಿ. ಅವಿನಾಶ್ ಮಾತನಾಡಿ, ಮೇ 11ರಿಂದ 13ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ಕೂಡ ನಮ್ಮ ಕಾಲೇಜಿನಲ್ಲಿಯೇ ನಡೆಯಲಿವೆ. ಕಾಲೇಜಿನ ಮೊದಲ ಮಹಡಿ ಮತ್ತು ಪಿಜಿ ಹಾಸ್ಟೆಲ್ ನಲ್ಲಿ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ, ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಪರೀಕ್ಷಾ ಸಂಚಾಲಕರಾದ ಗಣೇಶ್ ಕೆಂಚನಾಲ್ ಹಾಗೂ ಇನ್ನಿತರ ಸಿಬ್ಬಂದಿ ಹಾಜರಿದ್ದರು.