ಸಾರಾಂಶ
ಸಂಗೀತದಲ್ಲಿ ಬದುಕು ರೂಪಿಸುವ ಶಕ್ತಿ ಅಡಗಿದೆ. ಸಂಗೀತ ಆಲಿಕೆಯಿಂದ ಮನಸ್ಸಿನ ದುಗುಡ ದೂರವಾಗುತ್ತವೆ.
ಕುಕನೂರು: ಮನಸ್ಸು ಅರಳಿಸುವ ಶಕ್ತಿ ಸಂಗೀತಕ್ಕಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ ಎಂಟನೇ ವಾರ್ಡಿನ ದುರ್ಗಾದೇವಿ ದೇವಸ್ಥಾನದಲ್ಲಿ ಕನಕ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಸಂಗೀತದಲ್ಲಿ ಬದುಕು ರೂಪಿಸುವ ಶಕ್ತಿ ಅಡಗಿದೆ. ಸಂಗೀತ ಆಲಿಕೆಯಿಂದ ಮನಸ್ಸಿನ ದುಗುಡ ದೂರವಾಗುತ್ತವೆ. ಕಲಾವಿದರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ಜತೆಗೆ ಸಹಕಾರ ಸಹಾಯ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು. ಕಲಾವಿದರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದರು.ಹಿರಿಯ ಸಾಹಿತಿ ವೀರಣ್ಣ ವಾಲಿ ಮಾತನಾಡಿ, ಕುಕನೂರು ಭಾಗದಲ್ಲಿ ದೊಡ್ಡ ದೊಡ್ಡ ವಿದ್ವಾಂಸರಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ದಿವಂಗತ ತಬಲಾ ಪಂಡಿತ ಶಿವಕುಮಾರ ಕುಕನೂರು ಸಂಗೀತ ಸಾಧನೆ ಬಹಳ ದೊಡ್ಡದು. ಅವರ ಸಂಗೀತ ಪರಂಪರೆಯಲ್ಲಿ ಅವರ ಕುಟುಂಬದವರು ನಡೆಸಿಕೊಂಡು ಬರುತ್ತಿರುವುದು ಸಂತಸ ತಂದಿದೆ ಎಂದರು.
ಕಲಾವಿದ ಮುರಾರಿ ಎಸ್.ಭಜಂತ್ರಿಯವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.ಭಾವಗೀತೆ, ಭಕ್ತಿ ಗೀತೆ, ವಚನ ಗೀತೆಗಳು ಕೇಳುಗರಿಗೆ ಮುದ ನೀಡಿದವು. ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯಕ್ಷೆ ಲಲಿತಮ್ಮ ಯಡೆಯಾಪೂರ, ಸಾಹಿತಿ ಅಲ್ಲಾವುದ್ದೀನ್ ಎಮ್ಮಿ, ಪತ್ರಕರ್ತ ರುದ್ರಪ್ಪ ಭಂಡಾರಿ, ಬಸವರಾಜ ಕೊನಾರಿ, ಬಸವರಾಜ ಕೊಡ್ಲಿ, ಕಾಸಿಮಸಾಬ್ ಚೊಕಾಲಿ, ಶರಣಪ್ಪ ಬಿನ್ನಾಳ, ಬಸವರಾಜ ಭಜಂತ್ರಿ, ಪ್ರಕಾಶ ಕೊನಾಫೂರ, ಪರಶುರಾಮ ಭಜಂತ್ರಿ, ಶಂಕ್ರಪ್ಪ ಬಡಿಗೇರ, ಕಲಾವಿದ ಮುಕುಂದ ಭಜಂತ್ರಿ, ಖಾದಿರಸಾಬ್ ಸಿದ್ನೆಕೊಪ್ಪ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಇತರರಿದ್ದರು.