ಕುಂದಗೋಳ: ಗೋಮಾಂಸ ರಫ್ತು ವ್ಯವಹಾರದಲ್ಲಿ ಬ್ರಾಹ್ಮಣ ಸಮಾಜದವರು ತೊಡಗಿಸಿಕೊಂಡಿದ್ದಾರೆ ಎಂದು ಈಚೆಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಆರೋಪಿಸಿರುವ ಮುಸ್ಲಿಂ ಮುಖಂಡ ಹಜರತ್ ಅಲಿ ಜೋಡಮನಿ ವಿರುದ್ಧ ತಕ್ಷಣವೇ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕುಂದಗೋಳ ತಾಲೂಕು ಬ್ರಾಹ್ಮಣ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈಚೆಗೆ ಪಟ್ಟಣದಲ್ಲಿ ಅಂಜುಮನ್ ಎ ಇಸ್ಲಾಂ ಸಮಿತಿಯ ಸದಸ್ಯರು ಹಾಗೂ ತಾಲೂಕಿನ ಮುಸ್ಲಿಂ ಬಾಂಧವರು ಸೇರಿ ಗೋಹತ್ಯೆ ನಿಷೇಧಿಸುವುದು ಮತ್ತು ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಮುಸ್ಲಿಂ ಬಾಂಧವರ ಈ ಬೇಡಿಕೆ ಮತ್ತು ಪ್ರತಿಭಟನೆಯು ಸ್ವಾಗತಾರ್ಹವಾಗಿದೆ. ಆದರೆ, ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಸ್ಲಿಂ ಮುಖಂಡ ಹಜರತ್‌ ಅಲಿ ಜೋಡಮನಿ ಇಡೀ ಹಿಂದೂ ಸಮಾಜದ ಮೇಲೆ ಅದರಲ್ಲೂ ವಿಶೇಷವಾಗಿ ಬ್ರಾಹ್ಮಣ ಸಮುದಾಯದ ಮೇಲೆ ಇಲ್ಲಸಲ್ಲದ ಮತ್ತು ಆಧಾರ ರಹಿತವಾದ ಗಂಭೀರ ಆರೋಪಗಳನ್ನು ಮಾಡಿ ಸಮಾಜದ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ಬ್ರಾಹ್ಮಣ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯಾವುದೇ ವಾಸ್ತವ ಅರಿಯದೆ, ಕೇವಲ ಸಮಾಜದ ತೇಜೋವಧೆ ಮಾಡುವ ಉದ್ದೇಶದಿಂದ ಮಾಡಿರುವ ಈ ಕೃತ್ಯವು ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ದಂಡನೀಯ ಅಪರಾಧವಾಗಿದೆ. ಈ ಕೂಡಲೇ ಹಜರತ್‌ ಅಲಿಯನ್ನು ಬಂಧಿಸಬೇಕು. ಇಲ್ಲದಿದ್ದರೆ ಅವರು ಹೇಳಿದ ಹೇಳಿಕೆಯನ್ನು ಹಿಂಪಡೆದು ಬೇಷರತ್‌ ಕ್ಷಮಾಪಣೆ ಕೋರುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ, ಹಿರಿಯರಾಗಿರುವ ರಮೇಶ್ ಕುಲಕರ್ಣಿ, ಮೋಹನ್ ನಾಡಿಗೇರ, ಹರ್ಷ ಭಟ್ ಜೋಶಿ, ಟಿ.ಕೆ. ಕುಲಕರ್ಣಿ, ರಾಘವೇಂದ್ರ ಸಪ್ರೆ, ಶಾಮಸುಂದರ ದೇಸಾಯಿ, ಪ್ರಕಾಶ ನಾಡಗೀರ, ನರಸಿಂಹ ಭಟ್ಟ ಜೋಶಿ, ರಂಗನಗೌಡ ಪಾಟೀಲ, ಕೇದಾರ್ ದೇಸಾಯಿ, ಸುನಿಲ್ ಕರೋಗಲ್, ಕಿರಣ ಹೊರತಿ, ಸತೀಶ್ ದೇಸಾಯಿ ಸೇರಿ ಹಲವರಿದ್ದರು.