ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಬಂಟ್ವಾಳದ ಪಿಕಪ್ ಚಾಲಕ ಅಬ್ದುಲ್ ರಹೀಂ(34) ಹತ್ಯೆ ವಿರೋಧಿಸಿ ದ.ಕ.ಜಿಲ್ಲೆಯಾದ್ಯಂತ ಬುಧವಾರ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟು ಬಂದ್ ಮಾಡಿ ಹರತಾಳ ನಡೆಸಿದರು. ಹತ್ಯೆಗೀಡಾದ ಅಬ್ದುಲ್ ರಹೀಂ ಮೃತದೇಹದ ಮೆರವಣಿಗೆ ವೇಳೆ ಫರಂಗಿಪೇಟೆ ಹಾಗೂ ಬಿ.ಸಿ.ರೋಡ್ಗಳಲ್ಲಿ ಆಕ್ರೋಶಿತ ಗುಂಪು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತು. ಮೃತನ ಶವ ಇದ್ದ ಆ್ಯಂಬುಲೆನ್ಸ್ನ್ನು ತಡೆದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿತು. ಈ ವೇಳೆ ಮಾಧ್ಯಮ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಆರೋಪಿಗಳ ಬಂಧನ ಆಗ್ರಹಿಸಿ ಬೆಳಗ್ಗೆ ಕುತ್ತಾರಿನಲ್ಲಿ ಪೊಲೀಸರ ವಿರುದ್ಧವೂ ಗುಂಪೊಂದು ಆಕ್ರೋಶ ವ್ಯಕ್ತಪಡಿಸಿದೆ. ಮಂಗಳೂರಿನ ಸುರತ್ಕಲ್ನಲ್ಲಿ ಖಾಸಗಿ ಬಸ್ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ನ ಮುಂಭಾಗದ ಗ್ಲಾಸು ಹಾನಿಗೀಡಾಗಿದೆ. ಬಿ.ಸಿ.ರೋಡ್ನಲ್ಲಿ ಶವಯಾತ್ರೆಗೆ ಮುನ್ನ ಬೈಕ್ ಶೋರೂಂ ಬಂದ್ ಮಾಡದ ಕಾರಣ ಕಲ್ಲು ತೂರಾಟ ನಡೆಸಿ ಗಾಜು ಹಾನಿಗೊಳಿಸಿದ್ದಾರೆ. ಖಾಸಗಿ ಬಸ್ನ್ನು ಆಟೋದಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ಘಟನೆಯೂ ನಡೆದಿದೆ. ಅಘೋಷಿತ ಬಂದ್:ಹತ್ಯೆಗೊಳಗಾದ ಅಬ್ದುಲ್ ರಹೀಂ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನತೆ ಭಾಗವಹಿಸಿದ್ದರು. ಅಂತಿಮ ಯಾತ್ರೆಯ ಸಾಗುವ ವೇಳೆ ಫರಂಗಿಪೇಟೆ ಹಾಗೂ ಬಿ.ಸಿ.ರೋಡ್ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಕುತ್ತಾರ್ ಮದನಿ ನಗರ ಮಸೀದಿಯಲ್ಲಿ ಅಬ್ದುಲ್ ರಹೀಂ ಪಾರ್ಥೀವ ಶರೀರಕ್ಕೆ ಮಯ್ಯತ್ ಸ್ನಾನ ಮಾಡಿಸಲಾಯಿತು. ನಂತರ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್ನಲ್ಲಿ ಮೃತ ಶರೀರವನ್ನು ಬಂಟ್ವಾಳಕ್ಕೆ ಕೊಂಡೊಯ್ಯಲಾಯಿತು.ಉಳ್ಳಾಲ ತಾಲೂಕಿನ ಕುತ್ತಾರಿನಿಂದ ಹೊರಟ ಅಂತಿಮ ಯಾತ್ರೆ ಮಂಗಳೂರಿನ ಹೊರವಲಯದ ನಂತೂರು, ಪಡೀಲ್ ಅಡ್ಯಾರ್ ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು.ಅಂಗಡಿಗಳು ಬಂದ್:ಅಬ್ದುಲ್ ರಹೀಂ ಅವರ ಪಾರ್ಥಿವ ಶರೀರವನ್ನು ಹೊತ್ತ ಅಂಬುಲೆನ್ಸ್ ಫರಂಗಿಪೇಟೆಯ ಬಳಿ ಸಾಗುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಅಂತಿಮ ನಮನ ಸಲ್ಲಿಸಿದರು. ಫರಂಗಿಪೇಟೆಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಿ.ಸಿ.ರೋಡ್ನ ಮಿತ್ತಬೈಲ್ ಜುಮ್ಮಾ ಮಸೀದಿ ಬಳಿ ತಲುಪುವಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಿ.ಸಿ.ರೋಡ್ನಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲವು ಆಕ್ರೋಶಿತ ಯುವಕರು ಬಲವಂತದಿಂದ ಮುಚ್ಚಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿದರು. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು ಕಠಿಣ ಕ್ರಮಕ್ಕೆ ಸೂಚಿಸುತ್ತಿಲ್ಲ. ಇದರಿಂದಾಗಿಯೇ ಅಮಾಯಕ ಮುಸ್ಲಿಮರ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಆಕ್ರೋಶಿತ ಮಂದಿ ಘೋಷಣೆ ಕೂಗಿದರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿ ಮುಸ್ಲಿಮರಿಗೆ ಭದ್ರತೆ ಒದಗಿಸುವ ಬಗ್ಗೆ ವಾಗ್ದಾನ ನೀಡಬೇಕು ಎಂದು ಪಟ್ಟುಹಿಡಿದರು. ಫರಂಗಿಪೇಟೆ ಹಾಗೂ ಬಿ.ಸಿ.ರೋಡ್ನಲ್ಲಿ ಅಂತಿಮಯಾತ್ರೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಬಂಟ್ವಾಳ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ಅಬ್ದುಲ್ ರಹೀಂ ಮನೆಗೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಭಾರಿ ಮಳೆ ಸುರಿಯುತ್ತಿದ್ದರೂ ಸಾವಿರಾರು ಮಂದಿ ಸೇರಿದ್ದು, ಅಲ್ಲಿನ ಮಸೀದಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಅಂತ್ಯಕ್ರಿಯೆ ನೆರವೇರಿತು.
ಸುರತ್ಕಲ್ನಲ್ಲಿ ಬಸ್ಗಳಿಗೆ ಕಲ್ಲು:ಸುರತ್ಕಲ್ ಮಂಗಳೂರು- ಸುರತ್ಕಲ್, ಮುಕ್ಕ ಹಳೆಯಂಗಡಿ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಬಸ್ಗೆ ಹಾಗೂ ಮಂಗಳೂರು-ಕುಂದಾಪುರ ನಡುವೆ ಸಂಚರಿಸುವ ದುರ್ಗಾಂಬ ಬಸ್ಗೆ ಸುರತ್ಕಲ್ನಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಬಸ್ನ ಗಾಜು ಹಾನಿಗೀಡಾಗಿದೆ. ಈ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಬೇರೆ ಬಸ್ನಲ್ಲಿ ತೆರಳಿದರು. ಹೀಗಾಗಿ ಮಂಗಳೂರಿನಲ್ಲಿ ಕೆಲವು ಸಿಟಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿವೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿ.ಸಿ.ರೋಡ್ ಬಳಿ ಆಟೋದಲ್ಲಿ ಖಾಸಗಿ ಬಸ್ನ್ನು ಹಿಂಬಾಲಿಸಿದ ಯುವಕರ ತಂಡ ಬಸ್ನ್ನು ಅಡ್ಡಗಟ್ಟಿ ಹಿಂದಕ್ಕೆ ಕಳುಹಿಸಿದ ವಿದ್ಯಮಾನ ನಡೆದಿದೆ. ಬಂದ್ ಮಾಡದ ಕಾರಣಕ್ಕೆ ಗುಂಪೊಂದು ಬಿ.ಸಿ.ರೋಡ್ನಲ್ಲಿ ದ್ವಿಚಕ್ರ ವಾಹನದ ಮಳಿಗೆಗೆ ಕಲ್ಲು ತೂರಾಟ ನಡೆಸಿದೆ.ಸರ್ಕಾರದ ನಡೆಗೆ ಆಕ್ರೋಶ:
ಬಜಪೆಯ ಸುಹಾಸ್ ಶೆಟ್ಟಿ ಹತ್ಯೆ ಘಟನೆ ಬಳಿಕ ನಡೆದ ಸಮಾವೇಶದಲ್ಲಿ ಹಿಂದು ಮುಖಂಡರು ಕೋಮು ದ್ವೇಷದ ಭಾಷಣ ಮಾಡಿದ್ದು, ಅವರ ವಿರುದ್ಧ ಕೇಸು ಕೂಡ ದಾಖಲಾಗಿದೆ. ಆದರೂ ಅವರನ್ನು ಬಂಧಿಸಲು ಪೊಲೀಸ್ ಇಲಾಖೆ ಮುಂದಾಗಿಲ್ಲ. ಇದುವೇ ಅಬ್ದುಲ್ ರಹೀಂ ಹತ್ಯೆಗೆ ಪ್ರೇರಣೆಯಾಗಿದೆ ಎಂದು ಶವದ ಮೆರವಣಿಗೆಯಲ್ಲಿದ್ದ ಮಂದಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಕೂಡ ರಾಜ್ಯ ಸರ್ಕಾರದ ಮೃದು ಧೋರಣೆ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.ಸದ್ಯ ದ.ಕ. ಜಿಲ್ಲೆ ಬೂದಿಮುಚ್ಚಿದ ಕೆಂಡದಂತಿದೆ. ಜಿಲ್ಲೆಯಾದ್ಯಂತ ಮೇ 30ರ ವರೆಗೆ ಸೆಕ್ಷನ್ ಜಾರಿಯಲ್ಲಿದ್ದು, ಎಲ್ಲೆಡೆ ಪೊಲೀಸ್ ಪಹರೆ ಮುಂದುವರಿದಿದೆ. ದೀಪಕ್, ಸುಮಿತ್ ಸಹಿತ 15 ಮಂದಿ ಮೇಲೆ ಕೇಸ್
ಬಂಟ್ವಾಳದ ಕೊಳ್ತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ, ಪಿಕಪ್ ವಾಹನ ಚಾಲಕ ಅಬ್ದುಲ್ ರಹೀಂ (34) ಅವರ ಹತ್ಯೆ ಮತ್ತು ಖಲಂದರ್ ಶಫಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದೀಪಕ್ ಮತ್ತು ಸುಮಿತ್ ಆಚಾರ್ಯ ಸೇರಿದಂತೆ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.ದೂರಿನ ಪ್ರಕಾರ, ಅಬ್ದುಲ್ ರಹೀಂ ಮತ್ತು ಕಲಂದರ್ ಶಫಿ ಇಬ್ಬರಿಗೂ ಪರಿಚಯವಿದ್ದ ದೀಪಕ್ ಮತ್ತು ಸುಮಿತ್ ಆರೋಪಿಗಳಲ್ಲಿ ಸೇರಿದ್ದಾರೆ. ಘಟನೆ ನಡೆದ ದಿನ, ರಹೀಂ ಮತ್ತು ಶಫಿ ಅವರು ಹೊಳೆಯಿಂದ ಮರಳನ್ನು ಪಿಕಪ್ಗೆ ತುಂಬಿಕೊಂಡು ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆಗೆ ತಲುಪಿಸುತ್ತಿದ್ದರು. ಈ ವೇಳೆ ದೀಪಕ್, ಸುಮಿತ್ ಮತ್ತು 15 ಜನರ ಗುಂಪೊಂದು ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ.ಸಾವಿಗೀಡಾದ ಅಬ್ದುಲ್ ರಹೀಂ ಅವರು ಕೊಳ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿ ಹೆಸರುವಾಸಿಯಾಗಿದ್ದರು ಮತ್ತು ಸಮುದಾಯದಲ್ಲಿ ಉತ್ತಮ ಗೌರವವನ್ನು ಹೊಂದಿದ್ದರು ಎನ್ನಲಾಗಿದೆ. ದಿನಗೂಲಿ ಕಾರ್ಮಿಕರಾದ ಖಲಂದರ್ ಶಫಿ ಕೂಡ ಸ್ಥಳೀಯ ನಿವಾಸಿಗಳಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದರು.
ಕೋಮು ದ್ವೇಷ ಅಥವಾ ಇತರ ಕಾರಣಗಳಿಂದಾಗಿ ದಾಳಿಕೋರರು ಈ ಕೃತ್ಯ ಎಸಗಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ದೀಪಕ್, ಸುಮಿತ್ ಮತ್ತು ಇತರರು, ಎಲ್ಲರೂ ಸಂತ್ರಸ್ತರಿಗೆ ಪರಿಚಿತರಾಗಿದ್ದು, ದಾಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.5 ತನಿಖಾ ತಂಡ ರಚನೆ:
ಅಬ್ದುಲ್ ರಹೀಂ ಹತ್ಯೆ ಘಟನೆಯಲ್ಲಿ ದುಷ್ಕರ್ಮಿಗಳ ಪತ್ತೆಗೆ ಮಂಗಳೂರು ಜಿಲ್ಲಾ ಪೊಲೀಸರು ಐದು ತನಿಖಾ ತಂಡ ರಚಿಸಿದ್ದಾರೆ.ಬಂಟ್ವಾಳ ಡಿವೈಎಸ್ಪಿ ವಿಜಯ ಶಂಕರ್ ನೇತೃತ್ವದಲ್ಲಿ ಐದು ತನಿಖಾ ತಂಡ ತನಿಖೆ ನಡೆಸಲಾರಂಭಿಸಿದೆ. ಈಗಾಗಲೇ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದು, ಅಗತ್ಯ ಫುಟೇಜ್ಗಳನ್ನು ಸಂಗ್ರಹಿಸಿದೆ ಎಂದು ತಿಳಿಯಲಾಗಿದೆ. ಕೃತ್ಯದ ಬಳಿಕ ದುಷ್ಕರ್ಮಿಗಳು ಎಲ್ಲೆಲ್ಲಿಗೆ ಪಲಾಯನ ಮಾಡಿರಬಹುದು ಎಂಬ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಎಸ್ಪಿ ಯತೀಶ್ ತಿಳಿಸಿದ್ದಾರೆ. ಈಗಾಗಲೇ ಶಂಕಿತ ನಾಲ್ಕೈದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.ಇಂದು ಮುಸ್ಲಿಂ ಮುಖಂಡರು ಸಾಮೂಹಿಕ ರಾಜಿನಾಮೆ?
ಅಬ್ದುಲ್ ರಹೀಂ ಹತ್ಯೆ ಘಟನೆಗೆ ರಾಜ್ಯ ಸರ್ಕಾರದ ಉದಾಸೀನ ಧೋರಣೆ ಕಾರಣ ಎಂದು ಆರೋಪಿಸಿ ದ.ಕ. ಜಿಲ್ಲೆಯಲ್ಲಿ ಮುಸ್ಲಿಂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ ನೀಡಲು ಮುಂದಾಗಿದ್ದಾರೆ.ಮೇ 29 ರಂದು ಮಂಗಳೂರಿನ ಬೋಳಾರ ಶಾದಿಮಾಲ್ನಲ್ಲಿ ಮಧ್ಯಾಹ್ನ ಸಭೆ ಸೇರಲಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಈ ಸಭೆ ನಡೆಯಲಿದ್ದು, ಸಭೆಯಲ್ಲಿ ಕೋಮು ದ್ವೇಷ ಭಾಷಣ ಮಾಡುವ ಹಿಂದು ಮುಖಂಡರ ವಿರುದ್ಧ ಕೇಸು ದಾಖಲಾದರೂ ಕ್ರಮ ಕೈಗೊಳ್ಳದ ಸರ್ಕಾರ ಹಾಗೂ ಜಿಲ್ಲೆಗೆ ಅತಿಥಿಯಾಗಿರುವ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಸಾಮೂಹಿಕ ರಾಜಿನಾಮೆಗೆ ಮುಸ್ಲಿಂ ಮುಖಂಡರು ಮುಂದಾಗಿರುವುದಾಗಿ ಘಟಕದ ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಸರ್ಕಾರದ ನಿರ್ಲಕ್ಷ ಎಂದು ಆರೋಪಿಸಿ ಉಳ್ಳಾಲ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಮೀರ್ ರಾಜಿನಾಮೆ ಪ್ರಕಟಿಸಿದ್ದಾರೆ. ಪುತ್ತೂರಿನಲ್ಲಿ ಮುಸ್ಲಿಂ ಮುಖಂಡ ಅಶ್ರಫ್ ಕಲ್ಲೇಗ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗೃಹ ಸಚಿವರ ರಾಜಿನಾಮೆಗೂ ಕೆಲವು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ. ಮತ್ತೆ ಪ್ರತೀಕಾರ ಬೆದರಿಕೆಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಅಬ್ದುಲ್ ರಹೀಂ ಹತ್ಯೆಗೆ ಪ್ರತಿಕಾರವಾಗಿ ಹಿಂದು ಸಂಘಟನೆ ಮುಖಂಡ ಭರತ್ ಕುಮ್ಡೇಲು ಹತ್ಯೆ ನಡೆಸುವುದಾಗಿ ಟಾರ್ಗೆಟ್ ಬಾಯ್ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬೆದರಿಕೆ ಹಾಕಲಾಗಿದೆ.
ಸೇಡಿಗೆ ಪ್ರತಿ ಸೇಡಿನಂತೆ ಟಾರ್ಗೆಟ್ ಬಾಯ್ ಪೇಜ್ ಮೂಲಕ ಮತ್ತೆ ಟಾರ್ಗೆಟ್ ಮಾಡಲಾಗಿದೆ. ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಫೋಟೋ ಹಾಕಿ ಪ್ರತೀಕಾರದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಭರತ್ ಕುಮ್ಡೇಲು ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಭರತ್ ಕುಮ್ಡೇಲು ಮೇಲೆ ನಿರಂತರ ಬೆದರಿಕೆ ಕರೆ ಬರುತ್ತಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಕೇಸ್ ದಾಖಲಿಸಲಾಗಿದೆ. ಬಳಿಕ ಪ್ರತೀಕಾರದ ಪೋಸ್ಟ್ ತಣ್ಣಗಾಗಿದ್ದು ಈಗ ರಹೀಂ ಹತ್ಯೆಯಾಗುತ್ತಲೇ ಮತ್ತೆ ರಿವೇಂಜ್ ಮಾಡುವ ಪೋಸ್ಟ್ ವಾರ್ ಶುರುವಾಗಿದೆ.ಪೊಲೀಸ್ ಇಲಾಖೆಯ ನಂಬಿ: ಎಡಿಜಿಪಿಉಡುಪಿ, ಚಿಕ್ಕಮಗಳೂರು, ಮೈಸೂರು ಹಾಗೂ ಕಾರವಾರದಿಂದ ಪೊಲೀಸರನ್ನು ಕರೆಸಿದ್ದೇವೆ. ಜನರು ಶಾಂತಿ ಕಾಪಾಡಬೇಕು, ಗಾಳಿ ಸುದ್ದಿ ಕಿವಿ ಕೊಡಬೇಡಿ ಎಂದು ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆರ್.ಹಿತೇಂದ್ರ ಹೇಳಿದರು. ಸಾಮಾಜಿಕ ತಾಣಗಳ ರಿವೇಂಜ್ ಪೋಸ್ಟ್ ಮೇಲೆ ಕ್ರಮ ಆಗಲಿದೆ. ಆದರೆ ಕೆಲವು ನಕಲಿ ಅಕೌಂಟ್ ಇದೆ, ವಿದೇಶದಲ್ಲೂ ಕೂತು ಮಾಡುತ್ತಾರೆ. ಅದೆಲ್ಲ ನಿಜ ಎಂದು ನಂಬಬೇಡಿ, ಪೊಲೀಸ್ ಇಲಾಖೆಯನ್ನ ನಂಬಿ. ಪ್ರಚೋದನಕಾರಿ ಹೇಳಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅಂಥವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದೆ ನುರಿತ ವಕೀಲರ ಮೂಲಕ ಶಿಕ್ಷೆಯಾಗುವಂತೆ ಮಾಡುತ್ತೇವೆ. ಹತ್ಯೆಯಾದ ವ್ಯಕ್ತಿ ಮರಳು ಕೆಲಸ ಮಾಡುತ್ತಿದ್ದ. ಸದ್ಯ ಐದು ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಉತ್ತರ ನಿಮಗೆ ಗೊತ್ತಿದೆ!:ಇದು ಪ್ರತಿಕಾರದ ಕೊಲೆಯಾ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ ಎಡಿಜಿಪಿ ಹಿತೇಂದ್ರ, ದ.ಕ. ಜಿಲ್ಲೆಗೆ ನಾವು ಹೊಸಬರು, ನೀವ್ಯಾರು ಹೊಸಬರು ಅಲ್ಲ. ಜಿಲ್ಲೆಯ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ. ಪ್ರಶ್ನೆಯ ಜೊತೆಗೆ ಉತ್ತರವೂ ನಿಮಗೆ ಗೊತ್ತಿದೆ. ಈ ಪ್ರಶ್ನೆಗೆ ಉತ್ತರ ಎಲ್ಲರಿಗೆ ಗೊತ್ತಿದೆ ಎಂದು ಹೇಳಿದರು.
ಘಟನಾ ಸ್ಥಳದ ಸುತ್ತಮುತ್ತ ಹತ್ಯೆಗೂ ಮುನ್ನ ಕೆಲವು ಅನುಮಾನಸ್ಪದ ವಾಹನಗಳ ಓಡಾಟ, ಮರಳು ಅನ್ ಲೋಡ್ಗೆ ಅಬ್ದುಲ್ ರಹೀಂ ಅವರು ಪಿಕಪ್ನಲ್ಲಿ ಬರುವ ಮಾಹಿತಿಯನ್ನು ತಂಡ ಮೊದಲೇ ಪಡೆದಿತ್ತು. ಹೀಗಾಗಿ ಸುಹಾಸ್ ಹತ್ಯೆಗೆ ಪ್ರತೀಕಾರವಾಗಿ ಇಬ್ಬರ ಹತ್ಯೆಗೆ ಸಂಚು ನಡೆದಿತ್ತೇ ಎಂಬ ಮಗ್ಗುಲಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ದುಷ್ಕರ್ಮಿಗಳ ದಾಳಿಯಲ್ಲಿ ಅಬ್ದುಲ್ ರಹೀಂ ಕೊಲೆಯಾದರೆ, ಜೊತೆಗಿದ್ದ ಖಲಂದರ್ ಶಫಿ ತಲವಾರು ದಾಳಿಯಿಂದ ಬದುಕಿ ಉಳಿದಿದ್ದಾರೆ. ಪೊಲೀಸ್ ತಂಡ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಎರಡೇ ತಿಂಗಳಲ್ಲಿ ಮೂರು ಕೊಲೆದ.ಕ. ಜಿಲ್ಲೆಯಲ್ಲಿ ಕೇವಲ ಎರಡೇ ತಿಂಗಳ ಅಂತರದಲ್ಲಿ ಮೂರು ಕೊಲೆ ಪ್ರಕರಣ ನಡೆದಿದೆ. ಎರಡು ಪ್ರಕರಣ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದರೆ, ಇನ್ನೊಂದು ಪ್ರಕರಣ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಸಂಭವಿಸಿದೆ. -ಏಪ್ರಿಲ್ 20 ರಂದು ಸಂಜೆ ಕುಡುಪು ಕಟ್ಟೆ ಬಳಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟ ವೇಳೆ ಕೇರಳ ವಯನಾಡ್ನ ಅಶ್ರಫ್ ಎಂಬಾತನನ್ನು ದುಷ್ಕರ್ಮಿಗಳು ಗುಂಪು ನಡೆಸಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಒಟ್ಟು 21 ಮಂದಿಯನ್ನು ಬಂಧಿಸಲಾಗಿದೆ. -2022ರಲ್ಲಿ ಸುರತ್ಕಲ್ನಲ್ಲಿ ನಡೆದ ಫಾಝೀಲ್ ಹತ್ಯೆಗೆ ಪ್ರತೀಕಾರವಾಗಿ ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮೇ 1 ರಂದು ದುಷ್ಕರ್ಮಿಗಳ ತಂಡ ಬಜಪೆಯ ಕಿನ್ನಿಪದವಿನಲ್ಲಿ ಬೆನ್ನಟ್ಟಿ ಕೊಲೆ ಮಾಡಿತ್ತು. ಈ ಘಟನೆಯಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ. -ಬಂಟ್ವಾಳದ ಕಾಂಬೋಡಿಯಲ್ಲಿ ಪಿಕಪ್ ಚಾಲಕ ಅಬ್ದುಲ್ ರಹೀಂ ಎಂಬಾತನನ್ನು ಮೇ 27 ರಂದು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇನ್ನೂ ರಚನೆಯಾಗದ ಕೋಮು ನಿಗ್ರಹದಳಕೋಮುಸೂಕ್ಷ್ಮ ಪ್ರದೇಶ ಮಂಗಳೂರಿನಲ್ಲಿ ಪದೇ ಪದೇ ಸಂಭವಿಸುತ್ತಿರುವ ಅಹಿತಕರ ಘಟನೆ ನಿಗ್ರಹಕ್ಕೆ ಆ್ಯಂಟಿ ಕಮ್ಯುನಲ್ ಸ್ಕ್ವಾಡ್(ಕೋಮು ನಿಗ್ರಹದಳ) ರಚನೆ ಬಗ್ಗೆ ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಮಂಗಳೂರು ಭೇಟಿ ವೇಳೆ ಎರಡು ತಿಂಗಳ ಹಿಂದೆ ಹೇಳಿದ್ದರು. ಸುಹಾಸ್ ಶೆಟ್ಟಿ ಹತ್ಯೆ ಸಂದರ್ಭವೂ ಈ ಮಾತನ್ನು ಡಾ.ಪರಮೇಶ್ವರ್ ಪುನರುಚ್ಚರಿಸಿದ್ದರು. ಆದರೆ ಇದುವರೆಗೂ ಕೋಮು ನಿಗ್ರಹ ದಳ ರಚನೆ ಕೈಗೂಡಲೇ ಇಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಇದೇ ರೀತಿ ಮಂಗಳೂರಲ್ಲಿ ಕೋಮು ನಿಗ್ರಹದಳ ರಚನೆಯ ಹೇಳಿಕೆಯಲ್ಲೇ ಉಳಿದಿತ್ತು.