ಸಿದ್ದು ಸರ್ಕಾರದಲ್ಲಿ ಮುಸ್ಲಿಮರು ಚಿಗುರುತ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ
2 Min read
KannadaprabhaNewsNetwork
Published : Oct 09 2023, 12:45 AM IST
Share this Article
FB
TW
Linkdin
Whatsapp
ಯಾದಗಿರಿಯಲ್ಲಿ ಮಾಧ್ಯಮಗಳೊಡನೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. | Kannada Prabha
Image Credit: KP
ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆಯಲ್ಲಿ ನಿಂತಿದೆ, ಯಾದಗಿರಿಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ
ಯಾದಗಿರಿ: ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಸ್ಲಿಮರು ಚಿಗುರುತ್ತಿದ್ದಾರೆ. ಈ ಸರ್ಕಾರದಲ್ಲಿ ಮುಸ್ಲಿಮರ ತುಷ್ಟೀಕರಣ ಹಾಗೂ ಓಲೈಕೆ ನಡೆದಿದೆ ಎಂದು ವಾಗ್ಮಿ, ಚಿಂತಕ ಚಕ್ರವತರ್ಘ ಸೂಲಿಬೆಲೆ ಟೀಕಿಸಿದ್ದಾರೆ. ನಮೋ ಬ್ರಿಗೇಡ್ 2.0, ಜನ ಗಣ ಮನ ಬೆಸೆಯೋಣ ಕಾರ್ಯಕ್ರಮ ಅಂಗವಾಗಿ ಭಾನುವಾರ ಯಾದಗಿರಿಗೆ ಆಗಮಿಸಿದ್ದ ಸೂಲಿಬೆಲೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಗುರಿಯಾಗಿಸುತ್ತಿದೆ ಎಂಬ ಆರೋಪಗಳ ಕುರಿತ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸುವುದು ಕಾಂಗ್ರೆಸ್ ಸರ್ಕಾರದಲ್ಲಿ ಇದಕ್ಕಿಂತ ಭಿನ್ನವಾದ ನಿರೀಕ್ಷೆಗಳೇನೂ ಇರಲಿಲ್ಲ. ಸಿದ್ದರಾಮಯ್ಯನವರ 1.0 ಸರ್ಕಾರ, ಅಂದರೆ ಹಿಂದಿನ ಸರ್ಕಾರದಲ್ಲಿ ಅನೇಕ ಹಿಂದೂಗಳ ಬರ್ಬರ ಹತ್ಯೆಗಳಾಗಿದ್ದನ್ನು ನೋಡಿದ್ದೇವೆ. ಹಿಂದೂ ಕಾರ್ಯಕರ್ತರ ಹತ್ಯೆ ಅಷ್ಟೇ ಅಲ್ಲ, ಸಿದ್ದರಾಮಯ್ಯ ಕಾಲದಲ್ಲಿ ಕೆಲವರು ಯಾರು ದನಗಳನ್ನು ಕಳ್ಳಸಾಗಾಟದ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡು ತೀರಿಕೊಂಡರೋ ಅಂತಹವರ ಮನೆಗಳಿಗೆ 10 ಲಕ್ಷ ರು. ಕೊಟ್ಟಿರುವುದೂ ನೆನಪಿದೆ ಎಂದರು. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮುಸಲ್ಮಾನರು ಚಿಗುರಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ದಂಗೆಯ ರೂಪದ ವ್ಯವಸ್ಥೆ ಮಾಡಲಿಕ್ಕೆ ಹೊರಟಿರುವುದನ್ನು ನೋಡಿದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಇದಕ್ಕಿಂತ ಹೆಚ್ಚು ಭಿನ್ನವಾದ ನಿರೀಕ್ಷೆ ಯಾರಿಗೂ ಇರಲಿಲ್ಲ ಎಂದು ಟೀಕಿಸಿದರು. ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ಮುಸ್ಲಿಮರ ತುಷ್ಟೀಕರಣ ಹಾಗೂ ಓಲೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇಡೀ ಸರ್ಕಾರವೇ ಹಾಗಿದೆ. ಈ ಸರ್ಕಾರದ ಗೃಹ ಸಚಿವರು ‘ಇದು ಅಲ್ಹಾಹುನ ಕೃಪೆಯಿಂದ ಬಂದಿರುವ ಸರ್ಕಾರ’ ಎಂದಿದ್ದಾರೆ. ಹೀಗಾಗಿ, ಅಲ್ಲಾಹುವಿನ ಕೃಪೆಯಿಂದ ಈ ಸರ್ಕಾರ ಬರಲಿಕ್ಕೆ ಯಾರು ಕಾರಣರಾಗಿದ್ದಾರೋ ಅವರಿಗೆ ಪೂರಕವಾಗಿರುವಂತಹ ಸರ್ಕಾರ ಅವರು ನಡೆಸುತ್ತಿರುವುದರಿಂದ ಇದು ಹಿಂದೂಗಳಿಗೆ ಮಾಡಿದ ದ್ರೋಹ ಎಂದು ಸೂಲಿಬೆಲೆ ವಾಗ್ದಾಳಿ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಇದು ಪ್ರಭಾವ ಬೀರುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡೀತವಾಗಿ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ಹಿಂದೂಗಳಿಗೆ ದ್ರೋಹ ಮಾಡುತ್ತಿದ್ದು, ಅದಕ್ಕೆ ಸರಿಯಾದ ಶಾಸ್ತಿ ಅನುಭವಿಸುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸಲಿದೆ ಎಂದರು. ಈಗ ಕಾಂಗ್ರೆಸ್ಸಿಗೆ ಇದರ ಬಿಸಿ ಮುಟ್ಟಿದೆ. ಸಮಾಜದಲ್ಲಿ ಅತೃಪ್ತಿ ಇದೆ. ಕೇವಲ ಹಿಂದೂ ಸಮಾಜವಷ್ಟೇ ಅಲ್ಲ, ಒಟ್ಟಾರೆ ಕರ್ನಾಟಕದ ವಿಚಾರದಲ್ಲಿ ಬಿಟ್ಟಿ ಭಾಗ್ಯಗಳನ್ನು ಕೊಡುವ ಧಾವಂತದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಈ ಸರ್ಕಾರ ನಿಲ್ಲಿಸಿದೆ. ಕಳೆದ ನಾಲ್ಕು ತಿಂಗಳುಗಳಿಂದ ಬಿಸಿಯೂಟಕ್ಕೆ ಬೇಕಿರುವ ಅನುದಾನ ಕೊಡಲು ಆಗುತ್ತಿಲ್ಲ, ಬಸ್ ಸಂಖ್ಯೆ ಕಡಮೆ ಮಾಡಿ, ರಸ್ತೆ ಸುಧಾರಿಸದ, ಹೊಸ ಶಾಲೆ ಅಥವಾ ವಿಶ್ವ ವಿದ್ಯಾಲಯಗಳನ್ನು ತೆರೆಯದೆ ಈ ಸರ್ಕಾರ ಅದೇನು ಯಾವ ಅಭಿವೃದ್ಧಿ ಮಾಡುತ್ತದೆ ಎಂದು ಅವರು ಪ್ರಶ್ನಿಸಿದರು. ಕರ್ನಾಟಕದಲ್ಲಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಐದೈದು ವರ್ಷಗಳ ಕಾಲ ಮುಂದಕ್ಕೆ ಒಯ್ಯುತ್ತವೆ. ಆದರೆ, ಈ ಸರ್ಕಾರದ ವಾತಾವರಣ ನೋಡಿದರೆ ಇದು ಮುಗಿಯುವಷ್ಟರಲ್ಲಿ ನಮ್ಮ ಕರ್ನಾಟಕ 25 ವರ್ಷಗಳ ಕಾಲ ಹಿಂದಕ್ಕೆ ಹೋಗಿರುತ್ತದೆ ಎಂದೆನಿಸುತ್ತದೆ. ಇದು ಜನರಿಗೆ ಅಸಮಾಧಾನಕ್ಕೆ ಕಾರಣವಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರುತ್ತದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.