ಚಾ.ನಗರದಲ್ಲಿ ಕ್ರಿಕೆಟಿಗ ಮುರಳೀಧರನ್‌ 1400 ಕೋಟಿ ರು.ಹೂಡಿಕೆ

| Published : Jun 19 2024, 01:10 AM IST

ಸಾರಾಂಶ

ಚಾಮರಾಜನಗರದ ಬದನಕುಪ್ಪೆಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್‌ ಆಟಗಾರ ಮುತ್ತಯ್ಯ ಮುರಳೀಧರನ್‌ ತಂಪು ಪಾನೀಯ ಮತ್ತು ಸಿಹಿ ತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು 1,400 ಕೋಟಿ ರು.ಹೂಡಿಕೆ ಮಾಡಲಿದ್ದಾರೆ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ತಂಪು ಪಾನೀಯ, ಸಿಹಿ ತಿಂಡಿಗಳ ಉದ್ಯಮ

ಕೈಗಾರಿಕಾ ಸಚಿವ ಎಂಬಿಪಾ ಜೊತೆ ಮುತ್ತಯ್ಯ ಚರ್ಚೆಕನ್ನಡಪ್ರಭ ವಾರ್ತೆ, ಬೆಂಗಳೂರುಚಾಮರಾಜನಗರದ ಬದನಕುಪ್ಪೆಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್‌ ಆಟಗಾರ ಮುತ್ತಯ್ಯ ಮುರಳೀಧರನ್‌ ತಂಪು ಪಾನೀಯ ಮತ್ತು ಸಿಹಿ ತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು 1,400 ಕೋಟಿ ರು.ಹೂಡಿಕೆ ಮಾಡಲಿದ್ದಾರೆ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಮಂಗಳವಾರ ತಮ್ಮನ್ನು ಭೇಟಿ ಮಾಡಿದ ಮುತ್ತಯ್ಯ ಮುರಳೀಧರ ಅವರೊಂದಿಗೆ ಹೂಡಿಕೆ ಕುರಿತು ಸಚಿವರು ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದನಕುಪ್ಪೆಯಲ್ಲಿ ಮುರಳೀಧರನ್ ಅವರು ‘ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್’ ಎನ್ನುವ ಬ್ರ್ಯಾಂಡ್ ನಲ್ಲಿ ಉದ್ದಿಮೆ ಆರಂಭಿಸುತ್ತಿದ್ದಾರೆ. ಆರಂಭದಲ್ಲಿ 230 ಕೋಟಿ ರು. ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ ಅದು ಈಗ ಸಾವಿರ ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಬದನಕುಪ್ಪೆಯಲ್ಲಿ ಉದ್ಯಮ ಆರಂಭಿಸಲು ಅವರಿಗೆ ಈಗಾಗಲೇ 46 ಎಕರೆ ಭೂಮಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದು ಅವುಗಳನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಧಾರವಾಡದಲ್ಲಿ ಕೂಡ ತಮ್ಮ ಉದ್ಯಮದ ಒಂದು ಘಟಕ ಸ್ಥಾಪಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಉಪಸ್ಥಿತರಿದ್ದರು.