ಸಾರಾಂಶ
ಎನ್.ಆರ್.ಪುರ ರೋಟರಿ ಕ್ಲಬ್ ಆಶ್ರಯದಲ್ಲಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ನಾದ ನರ್ತನ - 2024
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರೋಟರಿ ಕ್ಲಬ್ ಸದಸ್ಯರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಪರಸ್ಪರ ಸ್ನೇಹ, ಬಾಂಧವ್ಯ ವೃದ್ಧಿಸಲಿದೆ ಎಂದು ರೋಟರಿ ಜಿಲ್ಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೈ.ಜಯಪ್ರಕಾಶ ಶೆಟ್ಟಿ ತಿಳಿಸಿದರು.
ಶನಿವಾರ ಸಿಂಸೆಯ ಕನ್ಯಾಕುಮಾರಿ ಕಂಪರ್ಟ್ ಹಾಲ್ ನಲ್ಲಿ ನರಸಿಂಹರಾಜಪುರ ರೋಟರಿ ಸಂಸ್ಥೆ ಆತಿಥ್ಯದಲ್ಲಿ ನಡೆದ ರೋಟರಿ ಜಿಲ್ಲೆ 3182 ರ ವಲಯ 6 ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ- ನಾದ- ನರ್ತನ 204 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ನಡೆಸು ತ್ತಿರುವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ 8 ವಿವಿಧ ಸ್ಪರ್ಧೆಗಳಿವೆ. ಪ್ರತಿಯೊಬ್ಬರೂ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸ ಬೇಕು. ಸ್ಪರ್ಧೆಗಳಲ್ಲಿ ಗೆಲ್ಲುವುದೇ ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗಿದೆ. ತೀರ್ಪುಗಾರರು ನೀಡುವ ತೀರ್ಪೇ ಅಂತಿಮವಾಗಿರುತ್ತದೆ. ಗೆದ್ದವರು ನವೆಂಬರ್ 10 ರಂದು ಕುಂದಾಪುರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅಲ್ಲಿ 8 ವಿವಿಧ ಸ್ಪರ್ಧೆಗಳಿವೆ. 500 ರೋಟರಿ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.ರೋಟರಿ ಕ್ಲಬ್ ನ ಸದಸ್ಯ ಕಣಿವೆ ವಿನಯ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯರ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಂಗೀತ, ನೃತ್ಯಗಳಿಂದ ನಮ್ಮ ವ್ಯಕ್ತಿತ್ವ ಬೆಳೆಯಲಿದೆ. ಜೊತೆಗೆ ಸಂಸ್ಕಾರ ವಂತ ರಾಗಬಹುದು. ನಟ ಪುನೀತ್ ರಾಜಕುಮಾರ್ ಅವರಿಗೆ ಮನೆಯಲ್ಲೇ ಸಂಸ್ಕಾರ ಸಿಕ್ಕಿದ್ದರಿಂದ ಅವರು ಸುಸಂಸ್ಕೃತರಾಗಿ ಬದುಕಿದ್ದರು. ರೋಟರಿ ಸದಸ್ಯರಿಗೆ ಸಂಸ್ಕಾರ ಸಿಗಬೇಕು ಎಂಬ ಉದ್ದೇಶದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಪ್ರತಿಭೆಗಳು ಇರುವ ಕಲಾವಿದರಿಗೆ ಸಮಾಜದಲ್ಲಿ ಯಾವಾಗಲೂ ದೊಡ್ಡ ಗೌರವ ಇರುತ್ತದೆ. ಪ್ರತಿಯೊಬ್ಬರೂ ತಮ್ಮಲ್ಲಿರುವ ಕಲೆಯ ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ರೋಟರಿ ವಲಯ 6 ರ ಅಸಿಸ್ಟಂಟ್ ಗೌರ್ನರ್ ಎಚ್.ಎಸ್. ನಟೇಶ್ ಮಾತನಾಡಿ, ಬೇರೆ, ಬೇರೆ ರೋಟರಿ ಕ್ಲಬ್ ನಿಂದ ಬಂದ ಸದಸ್ಯರು ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಮನಸ್ಸು ಉಲ್ಲಾಸಭರಿತವಾಗುತ್ತದೆ. ರೋಟರಿ ಸಂಸ್ಥೆ ಕ್ರೀಡಾ ಕೂಟ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತದೆ. ಇಲ್ಲಿ ವಲಯ 6 ರ 7 ರೋಟರಿ ಕ್ಲಬ್ ಸದಸ್ಯರು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೀಡೆಗಳು ನಡೆಯಲಿದ್ದು ಅದಕ್ಕೂ ರೋಟರಿ ಕ್ಲಬ್ ಸದಸ್ಯರು ಭಾಗವಹಿಸಬೇಕು ಎಂದರು.ನರಸಿಂಹರಾಜಪುರ ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಚ್.ಟಿ.ಧನಂಜಯ, ರೋಟರಿ ಕ್ಲಬ್ ಕಾರ್ಯದರ್ಶಿ ಮಧು ವೆಂಕಟೇಶ್, ರೋಟರಿ ಜೋನಲ್ ಲೆಫ್ಟಿನೆಂಟ್ ಕೆ.ಟಿ.ವೆಂಕಟೇಶ್, ಎಚ್.ವಿ. ಮಂಜುನಾಥ್, ರೋಟರಿ ವಲಯ ಸೇನಾನಿ ರೇಖಾ ಉದಯಶಂಕರ್, ವಲಯ ಸಾಂಸ್ಕೃತಿಕ ಸಂಯೋಜಕರಾದ ಎಲ್.ಡಿ.ನವೀನ್, ಎಚ್.ಡಿ.ವಿನಯ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವೈ.ಜಯಪ್ರಕಾಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಟಗಳಲೆ ಲೋಕೇಶ್ ಅತಿಥಿಯನ್ನು ಪರಿಚಯಿಸಿದರು. ಚೇತನ , ಜಿ.ಆರ್.ದಿವಾಕರ, ಬಿ.ಟಿ.ವಿಜಯಕುಮಾರ್ ,ಮಧು ವೆಂಕಟೇಶ್ ಇದ್ದರು.-- ಬಾಕ್ಸ್ --
ರೋಟರಿ ಸದಸ್ಯರಿಗೆ ಸ್ಫರ್ಧೆರೋಟರಿ ಕ್ಲಬ್ ಸದಸ್ಯರಿಗಾಗಿ 8 ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾವಗೀತೆ, ಚಲನ ಚಿತ್ರಗೀತೆ,ಯುಗಳ ಗೀತೆ, ಏಕಪಾತ್ರಾಭಿನಯ, ಗುಂಪು ನೃತ್ಯ,ಗುಂಪು ಗಾಯನ,ಏಕವ್ಯಕ್ತಿ ನೃತ್ಯ, ಕಿರು ಪ್ರಹಸನಗಳಲ್ಲಿ ರೋಟರಿ ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು. ಗೆದ್ದವರಿಗೆ ಬಹುಮಾನ ನೀಡಲಾಯಿತು.