ಆ.15ರಿಂದ ಮುಜರಾಯಿ ದೇಗುಲ ಪ್ಲಾಸ್ಟಿಕ್‌ ಮುಕ್ತ

| N/A | Published : Jun 10 2025, 04:14 AM IST / Updated: Jun 10 2025, 09:30 AM IST

Ramalinga Reddy bite

ಸಾರಾಂಶ

ರಾಜ್ಯದ ಮುಜರಾಯಿ ದೇವಾಲಯಗಳನ್ನು ಬರುವ ಆಗಸ್ಟ್ 15ರಿಂದ ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ದೇವಸ್ಥಾನಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

 ಬೆಂಗಳೂರು : ರಾಜ್ಯದ ಮುಜರಾಯಿ ದೇವಾಲಯಗಳನ್ನು ಬರುವ ಆಗಸ್ಟ್ 15ರಿಂದ ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ದೇವಸ್ಥಾನಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ(ಮುಜರಾಯಿ) ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ 34,565 ಅಧಿಸೂಚಿತ ಮುಜರಾಯಿ ದೇವಾಲಯಗಳಿವೆ. ಈ ಪೈಕಿ 31,095 ದೇವಾಲಯಗಳ ಮಾಹಿತಿ ಲಭ್ಯವಿದೆ. ಉಳಿದ 3,470 ದೇವಾಲಯಗಳ ಮಾಹಿತಿ ಲಭ್ಯವಿಲ್ಲ. ಈ ಪೈಕಿ ಕಳೆದ ಮೂರು ತಿಂಗಳಲ್ಲಿ 1,253 ದೇವಾಲಯಗಳನ್ನು ಗುರುತಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಮಾಹಿತಿ ಲಭ್ಯವಿಲ್ಲದ ದೇವಾಲಯಗಳ ಮಾಹಿತಿ ಸಂಗ್ರಹಿಸಿ ಅಂತಿಮಪಟ್ಟಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 45,915 ಅಧಿಸೂಚಿತ ದೇವಾಲಯಗಳು ಮತ್ತು ಆಸ್ತಿಗಳಿವೆ. ಕಳೆದ ಮೂರು ತಿಂಗಳಲ್ಲಿ 11,332 ಆಸ್ತಿಗಳನ್ನು ಗುರುತಿಸಲಾಗಿದೆ. ಈ ಪೈಕಿ 9,883 ಆಸ್ತಿಗಳ ಸರ್ವೆ ಮಾಡಲಾಗಿದೆ. ಉಳಿದ ಆಸ್ತಿಗಳನ್ನು ಮೂರು ತಿಂಗಳೊಳಗೆ ಸ್ವಾಯಿತ್ವ ಯೋಜನೆಯಡಿ ಸರ್ವೆ ಮಾಡಿ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ ಎಂದರು.

ದೇಗುಲಗಳ ಆಸ್ತಿಗಳ ಗೆಜೆಟ್‌ ನೋಟಿಫಿಕೇಶನ್‌:

ಮುಜರಾಯಿ ದೇವಸ್ಥಾನಗಳ ಆಸ್ತಿಯನ್ನು ನಗರ, ಗ್ರಾಮಾಂತರ ಮತ್ತು ವ್ಯವಸಾಯ ಜಮೀನು ಎಂದು ವಿಂಗಡಿಸಿ ಸರ್ವೆ ಮಾಡಿಸಬೇಕು. ಏಕೆಂದರೆ, ರಾಜ್ಯದಲ್ಲಿ ಮುಜರಾಯಿ ದೇವಸ್ಥಾನಗಳನ್ನು ಗೆಜೆಟ್‌ ಅಧಿಸೂಚನೆ ಮಾಡಲಾಗಿದೆ. ಆದರೆ, ಅದರ ಆಸ್ತಿಗಳನ್ನು ಗೆಜೆಟ್‌ ಅಧಿಸೂಚನೆ ಮಾಡಿಲ್ಲ. ಹೀಗಾಗಿ ಸರ್ವೆ ಮಾಡಿದ ಆಸ್ತಿಗಳನ್ನು ಸೆಕ್ಷನ್‌ 31ರ ಅಡಿ ಗೆಜೆಟ್‌ ಅಧಿಸೂಚನೆ ಹೊರಡಿಸುವಂತೆ ಸೂಚಿಸಲಾಗಿದೆ. ಇದರಿಂದ ದೇವಸ್ಥಾನ ಆಸ್ತಿ ಉಳಿಸಲು ಅನುಕೂಲವಾಗಲಿದೆ ಎಂದರು.

ತಸ್ತಿಕ್‌ ಹಣ ಡಿಬಿಟಿಗೆ ಕ್ರಮ:

ಮುಜರಾಯಿ ದೇವಾಲಯಗಳ ಅರ್ಚಕರಿಗೆ ತಸ್ತಿಕ್‌ ಹಣವನ್ನು ಪ್ರತಿ ತಿಂಗಳು ನೇರ ಪಾವತಿ (ಡಿಬಿಟಿ) ಮಾಡುವ ಬಗ್ಗೆ ಪ್ರಗತಿ ಪರಿಶೀಲಿಸಲಾಯಿತು. ಈ ಬಗ್ಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಹತ್ತು ದಿನಗಳಲ್ಲಿ ಬಾಕಿ ಉಳಿದಿರುವ ಸಂಸ್ಥೆಗಳ ತಸ್ತಿಕ್‌ ಹಣ ನೇರವಾಗಿ ಅರ್ಚಕರ ಖಾತೆಗೆ ಜಮೆಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

145.20 ಎಕರೆ ಒತ್ತವರಿ ತೆರವು:

ಮುಜರಾಯಿ ಸಂಸ್ಥೆಗಳ ಆಸ್ತಿ ಒತ್ತುವರಿ ತೆರವು ಕಾರ್ಯ ಮೂರು ತಿಂಗಳೊಳಗೆ ಪೂರ್ಣಗೊಳಿಸಿ, ಸೂಕ್ತ ಬೇಲಿ ನಿರ್ಮಿಸಲು ಸೂಚಿಸಲಾಗಿದೆ. ಇದಕ್ಕೆ ಭೂ ವರಾಹ ಯೋಜನೆಯಡಿ ಅನುದಾನ ಬಳಸಿಕೊಳ್ಳಲು ಹಾಗೂ ನಾಮಫಲಕ ಅಳವಡಿಸಲು ಸೂಚಿಸಲಾಗಿದೆ. ರಾಜ್ಯದಲ್ಲಿ ಸದ್ಯ 982 ಎಕರೆ 48 ಗುಂಟೆ ಒತ್ತುವರಿ ಜಮೀನು ಗುರುತಿಸಿದ್ದು, 145 ಎಕರೆ 20 ಗಂಟೆ ಜಮೀನು ತೆರವುಗೊಳಿಸಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ 11 ಎಕರೆ ಜಮೀನು ಒತ್ತವರಿ ತೆರವುಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

₹110.33 ಕೋಟಿ ಬಳಕೆಯಾಗಿಲ್ಲ:

ರಾಜ್ಯದ 31 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಲ್ಲಿ ಮಾತ್ರ ಜಿಲ್ಲಾ ಧಾರ್ಮಿಕ ಪರಿಷತ್‌ ರಚಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ರಚಿಸಲು ಈ ತಿಂಗಳೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಸರ್ಕಾರದಿಂದ ಮಂಜೂರಾದ ಅನುದಾನದ ಹಣದ ಪೈಕಿ ಬಳಕೆಯಾಗದೆ ತಹಸೀಲ್ದಾರ್‌/ಜಿಲ್ಲಾಧಿಕಾರಿಗಳ ಖಾತೆ ಸೇರಿ ವಿವಿಧ ಖಾತೆಗಳಲ್ಲಿ ಒಟ್ಟು ₹110.33 ಕೋಟಿ ಇದೆ. ಈ ಹಣವನ್ನು ನಿಯಮಾನುಸಾರ ಬದಲಿ ಸಂಸ್ಥೆಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಆನ್‌ಲೈನ್‌ ಬುಕಿಂಗ್‌ಗೆ ವೆಬ್‌ಸೈಟ್:

ತಿರುಪತಿ, ಕುಕ್ಕೆ ಸುಬ್ರಮಣ್ಯ ಸೇರಿದ 400 ದೇವಾಲಯ ಹಾಗೂ ಹೊರರಾಜ್ಯಗಳ ರಾಜ್ಯದ ಛತ್ರಗಳಲ್ಲಿ ಸುಮಾರು 3,500 ಕೊಠಡಿಗಳಿವೆ. ಯಾತ್ರಾಥಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಮತ್ತು ಕೊಠಡಿಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಕರ್ನಾಟಕ ದೇವಾಲಯಗಳ ವಸತಿ ಕೋಶ (ವೆಬ್‌ಸೈಟ್‌) ಅಭಿವೃದ್ಧಿಪಡಿಸಲು ತೀರ್ಮಾನಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.-ಬಾಕ್ಸ್‌-

ತಿರುಪತಿಯಲ್ಲಿ 400

ವಸತಿಗಳು ತ್ರಿಸ್ಟಾರ್‌ತಿರುಪತಿಯಲ್ಲಿ ಮುಂದಿನ ಸೆಪ್ಟೆಂಬರ್‌ ಅಂತ್ಯಕ್ಕೆ 400 ವಿಐಪಿ ವಸತಿ ಗೃಹಗಳು ಬಳಕೆಗೆ ಲಭ್ಯವಾಗಲಿದ್ದು, ಈ ವಸತಿ ಗೃಹಗಳಿಗೆ ತ್ರಿಸ್ಟಾರ್‌ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮಹಾರಾಷ್ಟ್ರದ ತುಳಜಾಪುದಲ್ಲಿ ₹3 ಕೋಟಿ ವೆಚ್ಚದಲ್ಲಿ ಡಾರ್ಮೆಟರಿ, ಸ್ನಾನಗೃಹ, ಶೌಚಾಲಯ, ಸ್ಟೋರ್‌, ಕಚೇರಿ ಕೊಠಡಿ ದುರಸ್ತಿಗೆ ತೀರ್ಮಾನಿಸಿ, ಅನುದಾನ ಬಿಡುಗಡೆ ಹಾಗೂ ಆಡಳಿತಾತ್ಮಕ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಂಡರಾಪುರದಲ್ಲಿ ಯಾತ್ರಿ ನಿವಾಸಿ ನಿರ್ಮಾಣ ಸಂಬಂಧ ಸ್ಥಳ ಪರಿಶೀಲಿಸಿ, ಸ್ಥಳೀಯ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

Read more Articles on