ಬರದಿಂದ ರೈತರು ತತ್ತರಿಸಿದ್ದು ಎಕರೆಗೆ ₹ 50 ಸಾವಿರ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಸರ್ಕಾರಕ್ಕೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಒತ್ತಾಯಿಸಿದರು.
ನವಲಗುಂದ:
ತಮ್ಮ ಉಸಿರುವ ವರೆಗೂ ರೈತ ಸಮುದಾಯದ ಪರವಾಗಿ ಹೋರಾಡುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.ಪಟ್ಟಣದಲ್ಲಿ ರೈತ ಹುತಾತ್ಮ ದಿನದ ಅಂಗವಾಗಿ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಈ ವೇಳೆ ರೈತರು ನೀಡಿದ ಮನವಿ ಸ್ವೀಕರಿಸಿದ ಅವರು, ಬರದಿಂದ ರೈತರು ತತ್ತರಿಸಿದ್ದು ಎಕರೆಗೆ ₹ 50 ಸಾವಿರ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಬೆಳೆವಿಮೆ ಹಣ ಪ್ರತಿಯೊಬ್ಬ ರೈತರಿಗೆ ಕೈಸೇರಬೇಕೆಂದ ಮುನೇನಕೊಪ್ಪ, ಕಂದಾಯ, ಕೃಷಿ, ಸಂಖ್ಯಾಶಾಸ್ತ್ರ ಹಾಗೂ ತೋಟಗಾರಿಕೆ ಇಲಾಖೆಗಳು ಯಾವುದೇ ಲೋಪವೆಸಗದೆ ನಿಖರ ವರದಿ ಸಲ್ಲಿಸಬೇಕು. ಈ 4 ಇಲಾಖೆಗಳು ತಪ್ಪು ಮಾಡದಂತೆ ಕಾಂಗ್ರೆಸ್ ಸರ್ಕಾರ ಜಾಗ್ರತೆ ವಹಿಸಬೇಕು. ರೈತರ ಹೊಟ್ಟೆಗೆ ಹೊಡೆಯುವ ಕೆಲಸವಾದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಕಳಸಾ-ಬಂಡೂರಿ ಯೋಜನೆಗೆ ಎದುರಾಗಿರುವ ವನ್ಯಜೀವಿ ಮಂಡಳಿಯ ತೊಡಕುಗಳನ್ನು ನಿವಾರಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜವಾಬ್ದಾರಿ ವಹಿಸಿಕೊಂಡು ಶ್ರಮಿಸುತ್ತಿದ್ದಾರೆ. ನಾವು ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದು, ತಾಂತ್ರಿಕ ಮತ್ತು ಕಾನೂನು ತೊಡಕು ನಿವಾರಿಸಲು ಶ್ರಮಿಸುತ್ತಿದ್ದೇವೆ. ಕಳಸಾ-ಬಂಡೂರಿ ನೀರು ರೈತರ ಜಮೀನಿಗೆ ಹರಿಯುವ ವರೆಗೆ, ನಾನು ನಿಮ್ಮ ಬೆನ್ನಲುಬಾಗಿ ನಿಲ್ಲುತ್ತೇನೆ ಎಂದರು.
ರೈತ ಶಕ್ತಿಯ ಮಹಾಸಂಗಮ:ಕಾರ್ಯಕ್ರಮದಲ್ಲಿ ನೂರಾರು ರೈತರು ಹಾಗೂ ಸ್ಥಳೀಯ ಮುಖಂಡರು ಒಂದಾಗಿ ರೈತ ಒಕ್ಕೂಟದ ಶಕ್ತಿಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ, ಬಸವರಾಜ ಕುಂದಗೋಳಮಠ, ಶಂಕರಗೌಡ ಬಾಳಗೌಡ್ರ, ಷಣ್ಮುಖ ಗುರಿಕಾರ, ಗಂಗಣ್ಣ ಮನಮಿ, ಬಸಣ್ಣ ಬೆಳವಣಕಿ, ಮಲ್ಲನಗೌಡ ರಾಟಿಮನಿ, ಸಿದ್ದಣ್ಣ ಕಿಟಗೇರಿ ಸೇರಿದಂತೆ ರೈತಬಾಂಧವರು ಭಾಗವಹಿಸಿದ್ದರು.