ಕೆಂಗಲ್‌ನಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ ಶಿವಕುಮಾರ್‌

| Published : Jun 20 2024, 01:04 AM IST / Updated: Jun 20 2024, 06:43 AM IST

DK Shivakumar
ಕೆಂಗಲ್‌ನಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಿಂದ ನನ್ನ ರಾಜಕೀಯದ ಹೊಸ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

 ಚನ್ನಪಟ್ಟಣ : ನಾನು ರಾಜಕೀಯ ಆರಂಭಿಸಿದ್ದು ಇದೇ ಚನ್ನಪಟ್ಟಣದ ಭಾಗವಾಗಿದ್ದ ಸಾತನೂರಿನಿಂದ. ಇಲ್ಲಿನ ಜನ ನನ್ನನ್ನು ಬಹಳ ಪ್ರೀತಿಯಿಂದ ಹರಸಿ, ಹೆಚ್ಚು ಮತ ಕೊಟ್ಟಿದ್ದರು. ನಾಲ್ಕು ಬಾರಿ ಸತತವಾಗಿ ಸಾತನೂರಿನಿಂದ ಗೆಲುವು ಸಾಧಿಸಲು ನೆರವಾಗಿದ್ದರು. ಇಂದು ಇಲ್ಲಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಿಂದ ನನ್ನ ರಾಜಕೀಯದ ಹೊಸ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಪೂಜೆ ಸಲ್ಲಿಸಿ, ಬಳಿಕ ಜನರನ್ನುದ್ದೇಶಿಸಿ ಅವರು ಮಾತನಾಡಿದರು. ರಾಮನ ಭಂಟ ಆಂಜನೇಯನ ದೇವಾಲಯಕ್ಕೆ ಬಂದಿದ್ದೇನೆ. ಆಂಜನೇಯ ಸಮಾಜ ಸೇವೆಯ ಪ್ರತೀಕ. ಎಲ್ಲೆಡೆ ಆಂಜನೇಯಸ್ವಾಮಿಯ ದೇಗುಲಗಳಿವೆ. ಅಂತೆಯೇ ಕೆಂಗಲ್‌ನಲ್ಲೂ ಆಂಜನೇಯನ ದೇವಾಲಯವಿದೆ. ನಾನು ದೇಗುಲದ ಸನ್ನಿಧಿಯಲ್ಲಿಯೇ ನನ್ನ ರಾಜಕೀಯದ ಹೊಸ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ನನ್ನ ತಮ್ಮನ ಸೋಲಿನ ಕುರಿತು ಬೇಸರವಿಲ್ಲ. ನಮ್ಮ ತಪ್ಪಿನಿಂದಲೇ ಸೋಲಾಗಿದ್ದು, ತಪ್ಪನ್ನು ತಿದ್ದಿಕೊಳ್ಳುವ ಕೆಲಸ ಮಾಡುತ್ತೇನೆ. ನಾನು ರಾಜಕೀಯ ಆರಂಭಿಸಿದ್ದು ಇದೇ ಚನ್ನಪಟ್ಟಣದ ಭಾಗವಾಗಿದ್ದ ನನ್ನ ಸಾತನೂರಿನಿಂದ. ಚನ್ನಪಟ್ಟಣದ ಒಂದು ಹೋಬಳಿ ಸಾತನೂರು ಕ್ಷೇತ್ರಕ್ಕೆ ಸೇರಿತ್ತು. ಇಲ್ಲಿನ ಜನ ನನ್ನನ್ನು ಬಹಳ ಪ್ರೀತಿಯಿಂದ ಹರಸಿದರು. ನಾಲ್ಕು ಬಾರಿ ಸತತವಾಗಿ ಸಾತನೂರಿನಿಂದ ಗೆಲುವು ಸಾಧಿಸಲು ನೆರವಾಗಿದ್ದರು. ಕ್ಷೇತ್ರ ಮರುವಿಂಗಡನೆಯಾಗಿ ಕ್ಷೇತ್ರ ಬಿಟ್ಟಾಗ ನನಗೆ ಬಹಳ ನೋವಾಗಿತ್ತು. ಆಗ ನಾನು ಬೆಳೆಸಿದ ಶಕ್ತಿಯಿಂದ ಆ ಭಾಗದಲ್ಲಿ ಹೆಚ್ಚು ಮತಗಳು ಪಡೆದು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು ಎಂದರು.

ಕನಕಪುರವನ್ನು ನೀವು ನೋಡಿದ್ದೀರಿ, ಅಲ್ಲಿಯ ಬದಲಾವಣೆ ಗಮನಿಸಿದ್ದೀರಿ. ಹಾಗಾಗಿ, ನಿಮ್ಮ ಖುಣ ತೀರಿಸಬೇಕು. ಚನ್ನಪಟ್ಟಣದಲ್ಲಿ ಬದಲಾವಣೆ ತರಬೇಕು ಅಂತ ಬಂದಿದ್ದೇನೆ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಇಲ್ಲಿ ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿ ಆಗಬೇಕು ಎಂದು ಅವರು ಹೇಳಿದರು.

ಇಂದು ಕ್ಷೇತ್ರದ ಎಲ್ಲಾ ದೇವಾಲಯಕ್ಕೂ ಭೇಟಿ ನೀಡಿ ದೇವರ ಅನುಗ್ರಹ ಪಡೆಯುತ್ತಿದ್ದೇನೆ. ನಾನು ಧೈರ್ಯ ಕಳೆದುಕೊಳ್ಳುವವನಲ್ಲ. ಹೋರಾಟ ಮಾಡುವವನು. ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರವಾಸ ಮಾಡುತ್ತೇನೆ. ಇಲ್ಲಿನ ಅಭಿವೃದ್ಧಿಗೆ ಹೊಸ ರೂಪ ಕೊಡಬೇಕು. ಚನ್ನಪಟ್ಟಣವನ್ನು ಚಿನ್ನದ ನಾಡನ್ನಾಗಿ ಪರಿವರ್ತನೆ ಮಾಡಬೇಕು. ನಾನು ಈಗಾಗಲೇ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ ಎಂದು ತಿಳಿಸಿದರು.

ನನ್ನ ರಾಜಕೀಯ ಜೀವನದ ಬದಲಾವಣೆ ಆಗಿದ್ದೇ ಚನ್ನಪಟ್ಟಣದಿಂದ. ಈ ಭೂಮಿಯ ಋಣ, ಅನ್ನದ ಋಣ, ತಾಯಿಯ ಋಣ ತೀರಿಸುವ ಕೆಲಸ ಮಾಡಬೇಕು. ಹಾಗಾಗಿ, ಚನ್ನಪಟ್ಟಣದ ಋಣ ತೀರಿಸುವ ಸಮಯ ಬಂದಿದೆ. ಈಗ ಇಲ್ಲಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿದೆ. ಇಲ್ಲಿ ನಮ್ಮ ಪಕ್ಷದಿಂದ ಯಾರೇ ನಿಂತರೂ ನನ್ನ ಮುಖ ನೋಡಿ ಗೆಲ್ಲಿಸಿ. ನನ್ನ ಮೇಲೆ ಈ ಕ್ಷೇತ್ರದ ಜವಾಬ್ದಾರಿ ಇದೆ ಎನ್ನುವ ಮೂಲಕ ಚನ್ನಪಟ್ಟಣ ಕ್ಷೇತ್ರದ ಸ್ಪರ್ಧೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ಅವರ ಈ ಹೇಳಿಕೆ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಪರೋಕ್ಷ ಹೇಳಿಕೆ ಎಂದೇ ಬಿಂಬಿತವಾಗಿದೆ.