ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ದೇಶದಲ್ಲೇ 3ನೇ ಸ್ವಚ್ಛನಗರಿ ಎಂಬ ಕೀರ್ತಿ ಪಾತ್ರವಾಗಲು ಶ್ರಮಿಸಿದ ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಶಿಫ್ ಹಾಗೂ ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಭಾರತದ ತಂಡಕ್ಕೆ ಆಯ್ಕೆಯಾಗಿರುವ ಶ್ರಾವಣಿ ಶಿವಣ್ಣ ಅವರನ್ನು ಜೆ.ಪಿ. ನಗರದ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದಿಸಲಾಯಿತು.ನಗರ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಜೆ.ಪಿ. ನಗರದ ಎಚ್.ವಿ. ರಾಜೀವ್ ಸ್ನೇಹ ಬಳಗ, ಲಯನ್ಸ ಕ್ಲಬ್ ಜೆ.ಪಿ. ನಗರ, ಅಭ್ಯುದಯ ಮಹಿಳಾ ಸಮಾಜ, ಅರಿವಿನ ಮನೆ ಮಹಿಳಾ ಬಳಗ ಸೇರಿದಂತೆ 16 ಸಂಘ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರನ್ನು ಸನ್ಮಾನಿಸಲಾಯಿತು.
ಈ ವೇಳೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮಾತನಾಡಿ, ನಗರವನ್ನು ಸ್ವಚ್ಛವಾಗಿರಿಸಲು ಪೌರಕಾರ್ಮಿಕರು ಮೂಲಕ ಕಾರಣ. ಅವರನ್ನು ಮಾರ್ಗದರ್ಶನ ಮಾಡಿ ಮುನ್ನಡಿಸಿ, ನಗರವನ್ನು ಸ್ವಚ್ಛಗೊಳಿಸಲು ಪಾಲಿಕೆ ಆಯುಕ್ತರು ಶೇಖ್ ತನ್ವೀರ್ ಆಶೀಫ್ ಅವರು ಹೆಚ್ಚು ಕಾರ್ಯ ನಿರ್ವಹಿಸಿದ್ದಾರೆ. ಈ ದೃಷ್ಟಿಯಲ್ಲಿ ಅವರನ್ನು ಅಭಿನಂದಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದರು.ಕ್ರೀಡಾಪಟು ಶ್ರಾವಣಿ ಶಿವಣ್ಣ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ವಿಶ್ವ ಮಹಿಳಾ ಏಷ್ಯನ್ ಕಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಮೈಸೂರಿನ ಹಿರಿಮೆ ಹೆಚ್ಚಿದ್ದಾರೆ. ಇದರ ಫಲವಾಗಿ ಭಾರತದ ಮಹಿಳಾ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಾಧನೆ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಅವರು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಶೀಫ್ ಮಾತನಾಡಿ, ಪ್ರತಿಯೊಬ್ಬ ನಾಗರೀಕರ ಜವಬ್ದಾರಿ ಹೆಚ್ಚಿದೆ. ಸಾರ್ವಜನಿಕರು ಪಾಲಿಕೆಗೆ ಸಹಕಾರ ನೀಡಬೇಕಿದ್ದು, ಕಸವನ್ನು ಮನೆಗಳಲ್ಲಿಯೇ ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಬೇಕು. ಇಲ್ಲವೇ ನಾವು ಯಾವುದೇ ಹೊಸ ತಂತ್ರಜ್ಞಾನ, ಯಾಂತ್ರೀಕರಣ, ಹೆಚ್ಚು ಕಾರ್ಮಿಕರನ್ನು ಅಳವಡಿಸಿಕೊಂಡರು ಪ್ರಯೋಜನವಿಲ್ಲದಂತಾಗಿದೆ. ಪೌರಕಾರ್ಮಿಕರಿಗೆ ಹೆಚ್ಚಿನ ಒತ್ತಡದ ಕೆಲಸ ನೀಡದಂತಾಗುತ್ತದೆ ಎಂದರು.ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
----ಕೋಟ್...
ಸ್ವಚ್ಛ ನಗರದ ಕೀರ್ತಿಗೆ ಪಾಲಿಕೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಶ್ರಮವಿದೆ. ನಾಗರೀಕರು ಮನೆಗಳಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಣೆ ಮಾಡುವ ಕೆಲಸ ಆಗಬೇಕಿದೆ. ಪೌರಕಾರ್ಮಿಕರು ಒಂದು ದಿನ ಸಂಗ್ರಹಣೆಗೆ ಬಾರದಿದ್ದರೆ ಸಿಕ್ಕ ಸಿಕ್ಕಲ್ಲಿ ಕಸ ಬಿಸಾಡುವ ಮನಸ್ಥಿತಿ ದೂರವಾಗಬೇಕಿದೆ.- ಶೇಖ್ ತನ್ವೀರ್ ಆಶೀಫ್, ಆಯುಕ್ತ, ನಗರ ಪಾಲಿಕೆ