ಜೂ.28ರಂದು ಭಾನುವಾರ ಕೇಂದ್ರಗಳ ಬೂತ್‌ಗಳಲ್ಲಿ ಹನಿ ಹಾಕಲಾಗುವುದು. 29ರಿಂದ ಜು.1ರವರೆಗೆ ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಎಲ್ಲಾ ಪ್ರತಿಯೊಂದು ಮಗುವಿಗೂ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಹನಿಯನ್ನು ಕಡ್ಡಾಯವಾಗಿ ಹಾಕಿಸಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ನಡೆದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನವನ್ನು ಶೇ.100ರಷ್ಟು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜೂ.28ರಂದು ಭಾನುವಾರ ಕೇಂದ್ರಗಳ ಬೂತ್‌ಗಳಲ್ಲಿ ಹನಿ ಹಾಕಲಾಗುವುದು. 29ರಿಂದ ಜು.1ರವರೆಗೆ ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಎಲ್ಲಾ ಪ್ರತಿಯೊಂದು ಮಗುವಿಗೂ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿ ಹನಿ ಅವಶ್ಯ, ಪ್ರತಿ ಮಗು ಅಮೂಲ್ಯ ಎಂಬ ಧ್ಯೇಯದೊಂದಿಗೆ ಹೆಚ್ಚಿನ ಅಪಾಯದ ಪ್ರದೇಶಗಳು ಹಾಗೂ ಸಂಚಾರ ಕೇಂದ್ರಗಳಲ್ಲಿ 4 ದಿನಗಳ ವಿಶೇಷ ಅಭಿಯಾನ ನಡೆಯಲಿದೆ. ಪೋಲಿಯೋ ಮುಕ್ತ ಸಮಾಜವನ್ನು ಉಳಿಸಿಕೊಳ್ಳಲು 5 ವರ್ಷದೊಳಗಿನ ಯಾವುದೇ ಒಂದು ಮಗುವೂ ಕೂಡ ವಂಚಿತರಾಗಬಾರದು. ಅಭಿಯಾನದ ಸಮರ್ಪಕ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

2026ನೇ ಸಾಲಿನ ರಾಷ್ಟ್ರೀಯ ಲಸಿಕಾ ದಿನದ ಅಂಗವಾಗಿ ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 2,19,521 ಮಕ್ಕಳಿಗೆ ಹನಿ ಹಾಕುವ ಮಹತ್ತರ ಗುರಿ ಹೊಂದಲಾಗಿದೆ. ಜಿಲ್ಲೆಯ ಒಟ್ಟು 7,78,059 ಮನೆಗಳನ್ನು ತಲುಪಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದರು.

ನಗರಸಭೆ, ಪುರಸಭೆ ಹಾಗೂ ಮುನ್ಸಿಪಲ್ ಇಲಾಖೆ:

ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಮೈಸೂರು ನಗರದಲ್ಲಿ ಹನಿ ಪ್ರಮಾಣ ಕುಂಠಿತವಾಗದಂತೆ ತಡೆಯಲು ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕ್ರಿಯಾಯೋಜನೆ ರೂಪಿಸಬೇಕು. ಸೆಸ್ಕ್‌ ವತಿಯಿಂದ ಪೋಲಿಯೋ ಹನಿಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಐಸ್ ಪ್ಯಾಕ್‌ ಗಳನ್ನು ಕಾಯ್ದುಕೊಳ್ಳಲು ಜೂ. 26 ರಿಂದ ಜು. 2 ರವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸೂಚಿಸಿದರು.

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲಾದ್ಯಂತ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿ ಮತ್ತು ಕೇಂದ್ರಗಳನ್ನು ನಿಯೋಜಿಸಲಾಗಿದೆ. ಒಟ್ಟು 1,641 ಬೂತ್ ಗಳಲ್ಲಿ, 1396 ಎಚ್.ಆರ್.ಎ ಸೈಟ್‌ಗಳು. 51 ಮೊಬೈಲ್ ಮತ್ತು ಟ್ರಾನ್ಸಿಟ್ ತಂಡಗಳು 328, ಮೇಲ್ವಿಚಾರಕರು, 6772 ಹನಿ ನೀಡುವ ಸಿಬ್ಬಂದಿ ನೇಮಿಸಲಾಗಿದೆ ಎಂದರು.

ಜೂ. 26 ಮತ್ತು 27 ರಂದು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಲಿಯೋ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಬೇಕು. ಪ್ರತಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ರಾಯಭಾರಿ ಆಗಿ ಪ್ರೇರೇಪಿಸಬೇಕು. ಜೂ. 28 ರಂದು ಭಾನುವಾರ ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮಕ್ಕಾಗಿ ಶಾಲಾ ಕೊಠಡಿ ಸಜ್ಜುಗೊಳಿಸಬೇಕು. ಪ್ರೌಢಶಾಲೆ ಮತ್ತು ಕಾಲೇಜುಗಳ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ. ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನಿಯೋಜಿಸಬೇಕು.

ಪ್ರೀಸ್ಕೂಲ್, ಎಲ್.ಕೆ.ಜಿ, ಯು.ಕೆ.ಜಿ ಮಕ್ಕಳ ಪೋಷಕರಿಗೂ ಪೋಲಿಯೋ ಹನಿ ಹಾಕಿಸಲು ಪ್ರೇರೇಪಿಸುವಂತೆ ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಇ.ಒ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ರಚಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಕರಪತ್ರಗಳ ವಿತರಣೆ ಹಾಗೂ ಟಾಂ ಟಾಂ ಮೂಲಕ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು.

ಸಾಂಪ್ರದಾಯಿಕವಾಗಿ ತಲುಪಲು ಕಷ್ಟವಾಗುವ ಹಳ್ಳಿಗಳ ಪಟ್ಟಿ ಸಿದ್ಧಪಡಿಸಿ, ಕೇಂದ್ರದ ಸಿಬ್ಬಂದಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಂಚಾಯಿತಿ ಜನಪ್ರತಿನಿಧಿಗಳು ಉಸ್ತುವಾರಿ ವಹಿಸಿಕೊಳ್ಳಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:

ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಕಡ್ಡಾಯವಾಗಿ ತೆರೆದು , ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು ಸಕ್ರಿಯವಾಗಿ ಭಾಗವಹಿಸಬೇಕು.

ಸ್ತ್ರೀಶಕ್ತಿ ಸಂಘಗಳು ಹಾಗೂ ಬಾಲ ವಿಕಾಸ ಸಮಿತಿಗಳ ಮೂಲಕ ತಾಯಂದಿರ ಸಭೆ ನಡೆಸಿ ಪೊಲೀಯೋ ಹನಿಯ ಮಹತ್ವ ತಿಳಿಸಬೇಕು. ಸಿಡಿಪಿಒಗಳು ತಾಲೂಕು ಮಟ್ಟದ ಉಸ್ತುವಾರಿ ನೋಡಿಕೊಳ್ಳಲಿದ್ದು, ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೂ ಲಸಿಕೆ ತಲುಪಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪಲ್ಸ್ ಪೋಲಿಯೋ ಅನುಷ್ಠಾನ ಅಧಿಕಾರಿ ಡಾ. ಸಿರಾಜ್ ಅಹಮದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.