ಕನ್ನಡಪ್ರಭ ವಾರ್ತೆ ಮೈಸೂರುಭಾರತದ ಮೇಲೆ ನಡೆದ ಪರಕೀಯರ ಆಕ್ರಮಣಗಳ ಪರಿಣಾಮವಾಗಿ ಆಯುರ್ವೇದ ಮತ್ತು ಯೋಗವು ಒಂದು ಕಾಲದಲ್ಲಿ ಜನಸಾಮಾನ್ಯರಿಂದ ದೂರವಾದರೂ, ಇಂದು ಅವು ವಿಶ್ವದಾದ್ಯಂತ ಅಪಾರ ಮಹತ್ವ ಪಡೆದುಕೊಂಡಿದೆ. ಯೋಗ, ಉತ್ತಮ ಆಚರಣೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯವಂತ ಹಾಗೂ ನಿರೋಗಿ ಬದುಕನ್ನು ನಡೆಸಲು ಸಾಧ್ಯ ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿರೇಖಾ ತಿಳಿಸಿದರು.ಹರಿ ವಿದ್ಯಾಲಯದಲ್ಲಿ ಆಯೋಜಿಸಿದ್ದ 4ನೇ ಆವೃತ್ತಿಯ ಯೋಗಾಸನ ಚಾಂಪಿಯನ್‌ ಷಿಪ್– 2026ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಮಾನವೀಯತೆ ಮತ್ತು ಬಾಂಧವ್ಯ ಕಡಿಮೆ ಆಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಪರಸ್ಪರ ಪ್ರೀತಿ, ಗೌರವ ಹಾಗೂ ಸಹಬಾಳ್ವೆಯ ಮನೋಭಾವ ಬೆಳೆಸುವುದು ಇಂದಿನ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.ಚಿಂತೆ ಮತ್ತು ಮಾನಸಿಕ ಒತ್ತಡದಿಂದ ಮನಸ್ಸನ್ನು ದೂರವಿಡಲು ಯೋಗಾಸನಗಳ ನಿಯಮಿತ ಅಭ್ಯಾಸ ಅತ್ಯಂತ ಅಗತ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸಂಸ್ಥೆ ಕಾರ್ಯದರ್ಶಿ ಎಚ್.ಆರ್. ಭಗವಾನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಡೀನ್ ಬ್ರಿಜೇಶ್ ಪಟೇಲ್, ಪ್ರಾಂಶುಪಾಲ ವಿ. ಗಣೇಶ್ ಹಾಗೂ ಡಿ.ಎನ್. ಶ್ರೀಕಾಂತ ಇದ್ದರು.

ಸ್ಪರ್ಧೆಯಲ್ಲಿ ಮೈಸೂರಿನ ಸುಮಾರು 25 ಶಾಲೆಗಳ 400ಕ್ಕೂ ಹೆಚ್ಚು ಯೋಗಪಟುಗಳು ವಿವಿಧ ವಿಭಾಗಗಳಲ್ಲಿ ಉತ್ಸಾಹದಿಂದ ಯೋಗಾಸನ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮೈಸೂರಿನ ವಿಜಯ ವಿಠಲ ಶಾಲೆಯು ಚಾಂಪಿಯನ್ ತಂಡವಾಗಿ ಹೊರಹೊಮ್ಮಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗಾಸನ ಚಾಂಪಿಯನ್‌ ಷಿಪ್ ಯಶಸ್ವಿಗೊಳಿಸಿದರು.