ಇಪಿಎಸ್ ಕಾರ್ಮಿಕರ ಬೇಡಿಕೆ ಹೋರಾಟಕ್ಕೆ ಎನ್‌ಎಸಿ ಜಿಲ್ಲಾ ಘಟಕ ಆರಂಭ

| Published : Jun 14 2025, 12:36 AM IST

ಸಾರಾಂಶ

ಚಿಕ್ಕಮಗಳೂರುಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿವೃತ್ತ ಎಲ್ಲಾ ಇಪಿಎಸ್ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ₹೭೫೦೦ ಪಿಂಚಣಿ ಹಾಗೂ ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ಸೌಲಭ್ಯ ನೀಡಬೇಕೆಂದು ಎನ್‌ಎಸಿ ರಾಜ್ಯಾಧ್ಯಕ್ಷ ಜಿಎಸ್‌ಎಂ ಸ್ವಾಮಿ ಆಗ್ರಹಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ನೂತನ ಎನ್‌ಎಸಿ ಘಟಕ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿವೃತ್ತ ಎಲ್ಲಾ ಇಪಿಎಸ್ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ₹೭೫೦೦ ಪಿಂಚಣಿ ಹಾಗೂ ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ಸೌಲಭ್ಯ ನೀಡಬೇಕೆಂದು ಎನ್‌ಎಸಿ ರಾಜ್ಯಾಧ್ಯಕ್ಷ ಜಿಎಸ್‌ಎಂ ಸ್ವಾಮಿ ಆಗ್ರಹಿಸಿದರು.ಶುಕ್ರವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ನೂತನ ಎನ್‌ಎಸಿ ಘಟಕ ಉದ್ಘಾಟಿಸಿ ಮಾತನಾಡಿ, ನಿವೃತ್ತ ನೌಕರರಿಗೆ ಡಿಎ, ವಿಧವೆಯರಿಗೆ ಶೇ.10 ರಷ್ಟು ಪಿಂಚಣಿ ಕೊಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ಹೇಳಿದರು.ಇಪಿಎಸ್ ಕಾರ್ಮಿಕರು ಭವಿಷ್ಯ ನಿಧಿಯಲ್ಲಿ ಹಣ ತೊಡಗಿಸಿದ್ದು, ಈ ಹಣದಿಂದಲೇ ಪಿಂಚಣಿ ಕೊಡಬಹುದು. 90 ಸಾವಿರ ಕೋಟಿ ಬಡ್ಡಿ ಬರುತ್ತಿದೆ ಎಂದು ಮಾಹಿತಿ ನೀಡಿದರು. 68 ಸಾವಿರ ಪಿಂಚಣಿದಾರರಿಗೆ ₹7500 ಮಾಸಿಕ ಪಿಂಚಣಿ ಕೊಡಬಹುದು. ಈ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮುಂದಿಟ್ಟು ರಾಷ್ಟ್ರಾದ್ಯಂತ ಪ್ರವಾಸ ಕೈಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎನ್‌ಎಸಿ ಘಟಕಗಳನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.ಭಾರತದ ೫೪೩ ಸಂಸದರನ್ನು ಈಗಾಗಲೇ ಭೇಟಿಮಾಡಿ, ಸಂಸತ್‌ನಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದರನ್ನು ಆಯ್ಕೆಮಾಡುವ ಚುನಾವಣೆ ಪ್ರಕ್ರಿಯೆಯಲ್ಲಿ ಇಪಿಎಸ್ ನೌಕರರ ಪಾತ್ರ ಅತೀ ಮುಖ್ಯ ಎಂದರು.ಇದೂವರೆಗೆ ರಾಜ್ಯದ 28 ಸಂಸದರು ನಮ್ಮ ಪರವಾಗಿ ಧ್ವನಿ ಎತ್ತಿಲ್ಲ ಎಂದು ದೂರಿದ ಅವರು ಕನಿಷ್ಠ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ನಮ್ಮ ಪರವಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಇದೇ ಜೂ.17 ರಂದು ರಾಜ್ಯದ ಎನ್‌ಎಸಿ ಕಾರ್ಯಕಾರಿ ಸಭೆ ಕರೆಯಲಾಗಿದ್ದು, ಸಂಘಟನೆ ಸರ್ವ ಸದಸ್ಯರು ಭಾಗವಹಿಸುವ ಮೂಲಕ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.ಎನ್‌ಎಸಿ ಸಂಘಟನೆ ಮೂಲ ಉದ್ದೇಶ ಇಪಿಎಸ್ ನೌಕರರಿಗೆ ಹಲವು ಬೇಡಿಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘಟನೆ ರಾಷ್ಟ್ರಾಧ್ಯಕ್ಷ ರಮಾಕಾಂತ್ ನರಗುಂದ, ಅಶೋಕ್ ರಾವತ್, ಸಿಂಗ್ ಇವರುಗಳ ನೇತೃತ್ವದಲ್ಲಿ ೩೪ ರಾಜ್ಯಗಳಲ್ಲಿ ಸಂಘಟನೆ ಸ್ಥಾಪಿಸಿ ಹೋರಾಟ ಮಾಡುತ್ತಿದ್ದೇವೆಂದು ಹೇಳಿದರು.ಎನ್‌ಎಸಿ ಕಾರ್ಯಾಧ್ಯಕ್ಷ ಹಾಗೂ ಉಪಾಧ್ಯಕ್ಷ ವಿ.ಕೆ. ಗಡಾದ ಮಾತನಾಡಿ, 1952 ರಲ್ಲಿ ಭವಿಷ್ಯ ನಿಧಿ ಜಾರಿಮಾಡಿದರು, 1979 ರಲ್ಲಿ ಕುಟುಂಬ ಪಿಂಚಣಿ ಯೋಜನೆ ಜಾರಿಮಾಡಿದರು. 1995 ರಲ್ಲಿ ಇಪಿಎಸ್-೯೫ ಪಿಂಚಣಿ ಯೋಜನೆ ಜಾರಿಗೆ ತಂದರು. ಇದರ ಜಾರಿ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರಸರ್ಕಾರ ಹೆಚ್ಚಿನ ಪಿಂಚಣಿ ನೀಡುತ್ತದೆ ಎಂದು ಹೇಳಿದ್ದರು ಎಂದರು.ಆದರೆ, ಟ್ರೇಡ್ ಯೂನಿಯನ್ ಮುಖಂಡರು ಈ ಹೇಳಿಕೆ ಬಗ್ಗೆ ಕ್ರಮವಹಿಸದೆ ಉದಾಸೀನ ತಾಳಿದ ಹಿನ್ನೆಲೆಯಲ್ಲಿ ಇಂದು ನಾವು ಗಳೆಲ್ಲರೂ ನಮ್ಮ ಬೇಡಿಕೆಗಳಿಗಾಗಿ ಸಂಘಟಿತರಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಎನ್‌ಎಸಿ ರಾಜ್ಯ ಸಂಯೋಜಕ ಸುಬ್ಬಣ್ಣ ಮಾತನಾಡಿ, ಎನ್‌ಎಸಿ ಎಂಬುದೇ ರಾಷ್ಟ್ರೀಯ ಸಂಘರ್ಷ ಸಮಿತಿ. ಇದರಲ್ಲಿ ಹೋರಾಟದ ಬಲವಿದೆ, ದೇಶಾದ್ಯಂತ 78 ಲಕ್ಷ ಭವಿಷ್ಯ ನಿಧಿ ಪಿಂಚಣಿದಾರರ ಅತೀ ದೊಡ್ಡ ಸಂಘಟನೆಯಾಗಿ ಹೊರ ಹೊಮ್ಮಿದೆ. ಪ್ರಸ್ತುತ ರಾಜ್ಯದಲ್ಲಿ ಮಾದರಿ ಎನ್‌ಎಸಿ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದು, ಬುದ್ದಿವಂತರ, ವಿಚಾರವಂತರ ನಾಡು ಚಿಕ್ಕಮಗಳೂರಿನಲ್ಲಿ ಇಂದು ಎನ್‌ಎಸಿ ಘಟಕ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಮಂಜುನಾಥ್, ಕಾನೂನು ಸಲಹೆಗಾರ ನಂಜುಂಡೇಗೌಡ, ಐಟಿ ಸಂಯೋಜಕ ಅನಿಲ್‌ಇಮಾನದಾರ, ಖಜಾಂಚಿ ಎಸ್.ಎನ್.ಕುಲ್ಕರ್ಣಿ, ಹುಚ್ಚಪ್ಪ, ಚಿಕ್ಕಮಗಳೂರು ಎನ್‌ಎಸಿ ಅಧ್ಯಕ್ಷ ಶಿವಕುಮಾರ್ ಯಗಟಿಪುರ, ಉಪಾಧ್ಯಕ್ಷ ಜೆ.ಎಸ್.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಕುಮಾರ್ ಸಂಘಟನಾ ಕಾರ್ಯದರ್ಶಿ ಕೆ.ಬಿ.ಓಂಕಾರಸ್ವಾಮಿ, ಸಹಕಾರ್ಯದರ್ಶಿ ಟಿ.ಎಂ.ರಾಮಚಂದ್ರಯ್ಯ, ನಾಗರಾಜನಾಯ್ಕ, ಖಜಾಂಚಿ ಎಲ್.ಇ.ಕೃಷ್ಣಶೆಟ್ಟಿ, ಗೋವಿಂದರಾಜೇ ಅರಸ್, ಸದಸ್ಯರಾದ ರಿಯಾಜ್‌ ಉಲ್ಲಾಖಾನ್, ಎಚ್.ಎಂ.ಶಿವಲಿಂಗಮೂರ್ತಿ. ಕೆ.ನಟರಾಜ್, ಕೆ.ಕೆ.ಧರ್ಮಯ್ಯ, ರುದ್ರಯ್ಯ, ಎನ್.ಶಿವಪ್ಪ, ಜಯವಿಭವ, ಧರ್ಮಪಾಲ್, ಶಿವರಾಜ್, ಜೆ.ರಾಜಶೇಖರ ಉಪಸ್ಥಿತರಿದ್ದರು.