ಮಣಿಪಾಲದಲ್ಲಿ ನಾದ ಮಣಿನಾಲ್ಕೂರು ಹಾಡು

| Published : Feb 06 2024, 01:32 AM IST

ಸಾರಾಂಶ

ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಸೌಹಾರ್ದ ಗೀತೆಗಳ ಗಾಯನ ಮತ್ತು ಮಾತುಕತೆಯನ್ನು ನಡೆಸಿಕೊಟ್ಟ ನಾದ ಮಣಿನಾಲ್ಕೂರು ಅವರು, ಕವಿ ಮೂಡ್ನಾಕೋಡು ಚಿನ್ನಾಸ್ವಾಮಿ ಅವರ ಕವಿತೆಯನ್ನು ಹಾಡುತ್ತಾ, ವಿದ್ಯಾರ್ಥಿಗಳಿಗೆ ಕನಸುಗಾರರಾಗಿ, ಕನಸು ನನಸು ಮಾಡುವಂತ ಹುಡುಗ ಹುಡುಗಿಯರಾಗಿ ಎಂದು ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ನಮ್ಮ ಎಲುಬಿನ ಹಂದರದಲ್ಲಿಯೇ ಮಂದಿರವಿದೆ, ಅಲ್ಲಿ ನಾವು ಆರಾಧಿಸುವ ದೇವರಿದ್ದಾನೆ. ಅವನನ್ನು ಹೊರಗೆಲ್ಲೋ ಹುಡುಕುವ ವ್ಯರ್ಥ ಪ್ರಯತ್ನ ಮಾಡುವ ಬದಲು ನಮ್ಮೊಳಗೇ ಇರುವ ರಾಮನನ್ನು, ಅಲ್ಲಾನನ್ನು ಮತ್ತು ಯೇಸುವನ್ನು ಕಂಡುಕೊಂಡು ಸೌಹಾರ್ದತೆಯಿಂದ ಬದುಕಬೇಕು ಎಂದು ಏಕತಾರಿ ಗಾಯಕರಾದ ನಾದ ಮಣಿನಾಲ್ಕೂರ್ ನುಡಿದರು.

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಸೌಹಾರ್ದ ಗೀತೆಗಳ ಗಾಯನ ಮತ್ತು ಮಾತುಕತೆಯನ್ನು ನಡೆಸಿಕೊಟ್ಟ ಅವರು, ಕವಿ ಮೂಡ್ನಾಕೋಡು ಚಿನ್ನಾಸ್ವಾಮಿ ಅವರ ಕವಿತೆಯನ್ನು ಹಾಡುತ್ತಾ, ವಿದ್ಯಾರ್ಥಿಗಳಿಗೆ ಕನಸುಗಾರರಾಗಿ, ಕನಸು ನನಸು ಮಾಡುವಂತ ಹುಡುಗ ಹುಡುಗಿಯರಾಗಿ ಎಂದು ಸಲಹೆ ಮಾಡಿದರು.

ನಾಡಿನ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅನೇಕ ಗೀತೆಗಳನ್ನು ಪ್ರಸ್ತುತ ಪಡಿಸಿದ ಅವರು ಸಂಗೀತದ ಮೂಲಕ ಮನಸ್ಸನ್ನು ಪರಿವರ್ತಿಸಿ ಉತ್ತಮ ಸಮಾಜವನ್ನು ನಿರ್ಮಿಸುವ ಸಣ್ಣ ಪ್ರಯತ್ನ ತನ್ನದು ಎಂದರು.

2018ರಿಂದ ಕರ್ನಾಟಕದಾದ್ಯಂತ ಸಂಚರಿಸುತ್ತಾ ತಮ್ಮ ಭಾವೈಕ್ಯ ಹಾಡುಗಳ ಮೂಲಕ ಮನೆ ಮಾತಾಗಿರುವ ನಾದ ಮಣಿನಾಲ್ಕೂರು ಅವರು ಒಂಬತ್ತು ವರ್ಷಗಳಿಂದ ಕತ್ತಲ ಹಾಡು, ಏಳು ವರ್ಷಗಳಿಂದ ತತ್ವ ಮತ್ತು ಅನುಭಾವಿ ಹಾಡುಗಳೊಂದಿಗೆ ಪ್ರಯಾಣವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ತೋರು ಸದ್ಗುರುವೇ, ಮಣ್ಣಿಗೆ ವಂದನೆ ಮುಗಿಲಿಗೆ ವಂದನೆ, ಕನಸುಗಾರರು ನಾವು ಕನಸುಗಾರರು, ಏಕಾಂಗಿಯಾಗಿ ಹೊರಡು ಮತ್ತು ಅನೇಕ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಡಾ. ಐಡಾ, ಅಧ್ಯಾಪಕಿ ಲಕ್ಷ್ಮೀ, ಸುಬ್ರಮಣ್ಯ ಬಾಸ್ರಿ, ಅಕಾಡೆಮಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.