ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವದ ಮೂಲೆ ಮೂಲೆಗಳಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ತಕ್ಷಣ ಕಾಣುವುದು ಬೃಹದಾಕಾರದ ನಾಡಪ್ರಭು ಕೆಂಪೇಗೌಡರ ಚಿತ್ರ. ಇದರಿಂದ ನಮ್ಮ ಕರ್ನಾಟಕಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅಭಿಪ್ರಾಯಪಟ್ಟರು.ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲಿಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿ ವತಿಯಿಂದ ಶಿವರಾಂ ಪೇಟೆಯ ಸಂಘದ ಕಚೇರಿಯಲ್ಲಿ ಕೆಂಪೇಗೌಡರ 516ನೇ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರಿನಿಂದ ಬೃಹದಾಕಾರವಾಗಿ ಬೆಳೆದಿದೆ. ಎಲ್ಲ ಜನಾಂಗದವರಿಗೆ ಆಗಿನ ಕಾಲದಲ್ಲಿ ಸರಿ ಸಮಾನರಾಗಿ ಬಾಳುವಂತೆ ಸುಮಾರು ಬೆಂಗಳೂರಿನಲ್ಲಿ 64 ಪೇಟೆಗಳನ್ನು ನಿರ್ಮಿಸಿ ಎಲ್ಲರ ಬಾಳಿನ ಬದುಕಿಗೆ ಹಸನಾದರೂ ಎಂದು ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಾಗರಾಜ್ ವಿ. ಬೈರಿ ಮಾತನಾಡಿ, ಬೆಂಗಳೂರನ್ನು ಪರಿಸರಸ್ನೇಹಿ ನಗರವಾಗಿ ರೈತರನ್ನು ಒಳಗೊಂಡಂತೆ ಕೃಷಿ ಮತ್ತು ಆರೋಗ್ಯಕರ ಬದುಕಿಗೆ ನೆರವಾಗುವ ನೆಲೆಯಲ್ಲಿ ನಗರದ ಸುತ್ತಮುತ್ತ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ ಕೆಂಪೇಗೌಡರು. ಒಕ್ಕಲುತನ ಕೃಷಿ ಇಲ್ಲದೆ ಬದುಕಿಗೆ ಅರ್ಥವಿಲ್ಲ ಎಂದು ಅಂಶವನ್ನು ಕೆಂಪೇಗೌಡರು ಮನ ಕಂಡಿದ್ದರು ಎಂದರು.ಮನೋವೈದ್ಯ ಡಾ. ಬಿ. ಎನ್.ರವೀಶ್ ಮಾತನಾಡಿ, ವಿಜಯನಗರ ಸಾಮಂತರಾಗಿದ್ದ ಕೆಂಪೇಗೌಡರಿಗೆ ಹಂಪೆಯ ವೈಭವ ಕಣ್ಣು ಮುಂದೆ ಇತ್ತು ಆ ಹಿನ್ನೆಲೆಯಲ್ಲಿ ಬೆಂಗಳೂರಿನ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟರು. ಸುಂದರ ಬೆಂಗಳೂರು ನಗರದ ನಿರ್ಮಾಣಕ್ಕೆ ಕಾರಣೀಭೂತರಾದರು ನಗರದಲ್ಲಿ ಎಲ್ಲಾ ರೀತಿಯ ವಾಣಿಜ್ಯ ವ್ಯವಹಾರಗಳು ಸುಲಲಿತವಾಗಿ ನಡೆಯುವಂತಹ ವಾತಾವರಣ ಸೃಷ್ಟಿಸಿ ನೆರವಾದರು. ಇಂದು ಬೆಂಗಳೂರು ವಿಶ್ವದಲ್ಲಿ ಶ್ರೇಷ್ಠ ವಾಣಿಜ್ಯ ನಗರವಾಗಿದ್ದರೆ ಅವರ ಹಿಂದಿನ ವ್ಯಕ್ತಿ -ಶಕ್ತಿ ನಾಡಪ್ರಭು ಕೆಂಪೇಗೌಡರು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಮಾತನಾಡಿ ಬೆಂಗಳೂರಿನ ನಗರದಲ್ಲಿ ಎಲ್ಲ ಜಾತಿ ಧರ್ಮಗಳ ಬದುಕು ಕಟ್ಟಿಕೊಳ್ಳಲು ನೆರವಾಗುವಂತೆ ಎಲ್ಲಾ ವರ್ಗದ ಜನರಿಗೆ ಪೇಟೆಗಳನ್ನು ನಿರ್ಮಾಣ ಮಾಡಿದರು. ವ್ಯಾಪಾರ ವಹಿವಾಟಿನ ಮೂಲಕ ಸಾಮರಸ್ಯ ಸಹಬಾಳ್ವೆ ಬದುಕು ಅವರ ದೂರ ದೃಷ್ಟಿಯಾಗಿತ್ತು ಎಂದು ಹೇಳಿದರು.ಮತ್ತೋರ್ವ ಮಾಜಿ ಅಧ್ಯಕ್ಷ ಎಂ ಚಂದ್ರಶೇಖರ್ ಮಾತನಾಡಿ ಹತ್ತು ಹಲವು ಸಮಾಜಗಳಿಗೆ ಅವರ ಬದುಕಿಗೆ ಶಕ್ತಿ ತುಂಬುವ ಮೂಲಕ ಇಂದು ನಾವು ಮಾತನಾಡುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು 500 ವರ್ಷಗಳ ಹಿಂದೆಯೇ ತಮ್ಮ ಆಳ್ವಿಕೆಯಲ್ಲಿ ಅಳವಡಿಸಿಕೊಂಡಿದ್ದರು ಹಾಗೂ ಹತ್ತು ಹಲವು ಪ್ರಭುಗಳ ನಡುವೆ ಮಾದರಿ ಪ್ರಭುಗಳಾಗಿ ನಮ್ಮ ಕಣ್ಣೆದುರು ಕೆಂಪೇಗೌಡರು ಇದ್ದಾರೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಒಕ್ಕಲಿಗ ಮಹಾಸಭದ ಅಅಧ್ಯಕ್ಷರು ಹಾಗೂ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಎನ್.ಬೆಟ್ಟೇಗೌಡ ಮಾತನಾಡಿ ನಾಡಪ್ರಭು ಕೆಂಪೇಗೌಡ ಆಗಿನ ಕಾಲದಲ್ಲಿ ಸಾವಿರಾರು ಕೆರೆಕಟ್ಟೆಗಳನ್ನು ನಿರ್ಮಿಸಿ ಎಲ್ಲರ ಬದುಕಿಗೆ ಬೆಳಕಾದರು. ಆಗಿನ ಕಾಲದಲ್ಲೇ ಕೆಂಪೇಗೌಡರು ಕಟ್ಟಿಸಿದ ಕೆರೆಗಳನ್ನು ಈಗಿನ ರಾಜಕಾರಣಿಗಳು ಉಳಿಸಿಕೊಂಡು ಅದನ್ನು ಪುನಶ್ಚೇತನ ಗೊಳಿಸಿದರೆ ಸಾಕು, ಕೆಂಪೇಗೌಡರ ಜಯಂತಿಯನ್ನು ಮಾಡಿದಷ್ಟೇ ಸಂತೋಷವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಈ.ಸಿ. ನಿಂಗರಾಜೇಗೌಡ ಅಲಿಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಮೈಸೂರು ಜಿಲ್ಲಾ ರಾಜ್ಯಪಾಲ ಎಸ್. ವೆಂಕಟೇಶ, ದಂತ ವೈದ್ಯ ಡಾ. ಲೋಕೇಶ್, ಶಾಂತಲಾ ವಿದ್ಯಾಸಂಸ್ಥೆಯ ಸಂತೋಷ್ ಕುಮಾರ್, ಮಹಾಬಲೇಶ್ವರ ಭೈರಿ, ಕೃಷ್ಣ ಜಿ ರಾವ್, ಇಂದಿರಾ ವೆಂಕಟೇಶ್, ಸಮಾಜಸೇವಕ ವಿಕ್ರಂ ಅಯ್ಯಂಗಾರ್, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಪಡುವಾರಹಳ್ಳಿ ರಾಮಕೃಷ್ಣ, ಮಹಾಸಭದ ಅನಂತನಾರಾಯಣ ಇದ್ದರು