ಹೇಮಾವತಿ ಜಲಾಶಯದಿಂದ ನಾಲೆಯಲ್ಲಿ ಹರಿದುಬರುವ ನೀರನ್ನು ವಿದ್ಯುತ್ ಮೋಟಾರು ಪಂಪ್ ಮೂಲಕ ಲಿಫ್ಟ್ ಮಾಡಿ ದಡಗ ಗ್ರಾಮದ ಕೆರೆಯನ್ನು ತುಂಬಿಸಿ ಈ ಭಾಗದ ಜನ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕೆಂದು ಈ ಯೋಜನೆ ಮಂಜೂರು ಮಾಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ದಡಗ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ 4.85 ಕೋಟಿ ರು. ವೆಚ್ಚದ ಕಾಮಗಾರಿ ಪೂರ್ಣಗೊಂಡಿರುವ ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯ ಪಂಪ್‌ಹೌಸ್ ಅನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಜೊತೆಗೂಡಿ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ಉದ್ಘಾಟಿಸಿದರು.

ಹೇಮಾವತಿ ಜಲಾಶಯದಿಂದ ನಾಲೆಯಲ್ಲಿ ಹರಿದುಬರುವ ನೀರನ್ನು ವಿದ್ಯುತ್ ಮೋಟಾರು ಪಂಪ್ ಮೂಲಕ ಲಿಫ್ಟ್ ಮಾಡಿ ದಡಗ ಗ್ರಾಮದ ಕೆರೆಯನ್ನು ತುಂಬಿಸಿ ಈ ಭಾಗದ ಜನ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕೆಂದು ಈ ಯೋಜನೆ ಮಂಜೂರು ಮಾಡಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶ್ರೀಗಳ ಜೊತೆಗೂಡಿ ಉದ್ಘಾಟಿಸಲಾಗಿದೆ. ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಸಾರಿಗೆ ಸಚಿವ ಭೈರತಿ ಸುರೇಶ್, ಶಾಸಕ ಶರತ್‌ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ಮುಖಂಡರಾದ ಮೂಡ್ಲೀಗೌಡ, ವಜ್ರಕುಮಾರ್, ಸತೀಶ್ ಸೇರಿದಂತೆ ಹಲವರು ಇದ್ದರು.ಜಿಲ್ಲೆಗೆ 100 ಹೊಸ ಸಾರಿಗೆ ಬಸ್ ಶೀಘ್ರ ಸಂಚಾರ: ಭೈರತಿ ಸುರೇಶ್

ನಾಗಮಂಗಲ:ಜಿಲ್ಲೆಗೆ ಹೊಸದಾಗಿ 40 ಸಾರಿಗೆ ಬಸ್‌ಗಳನ್ನು ಮಂಜೂರು ಮಾಡುವಂತೆ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮನವಿ ಸಲ್ಲಿಸಿದ್ದಾರೆ. ಆದರೆ, ನಮ್ಮ ಸರ್ಕಾರ ಮಂಡ್ಯ ಜಿಲ್ಲೆಗೆ 100 ಬಸ್‌ಗಳನ್ನು ಕೊಟ್ಟು ಶೀಘ್ರದಲ್ಲಿ ಬಸ್‌ಗಳ ಸಂಚಾರ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಭರವಸೆ ನೀಡಿದರು.

ತಾಲೂಕಿನ ಕನ್ನಾಘಟ್ಟ ಗ್ರಾಮದಲ್ಲಿ ಶ್ರೀಮಹಾಗಣಪತಿ ದೇವಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸಾರಿಗೆ ಇಲಾಖೆಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರು.ಗಳ ಅನುದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಅಲ್ಲದೇ, 1 ಸಾವಿರ ಹೊಸ ಬಸ್‌ಗಳನ್ನು ಖರೀದಿಸಲು ಹಸಿರು ನಿಶಾನೆ ತೋರಿದ್ದಾರೆ. ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರು. ಪಡೆಯಲೂ ಸಮ್ಮತಿ ಸೂಚಿಸಿದ್ದಾರೆ ಎಂದರು.ಮಂಡ್ಯ ಜಿಲ್ಲೆಗೆ ಹೊಸದಾಗಿ 40 ಬಸ್‌ಗಳನ್ನು ಮಂಜೂರು ಮಾಡುವಂತೆ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಮನವಿ ಸಲ್ಲಿಸಿದ್ದಾರೆ. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರ ಈ ಜಿಲ್ಲೆಗೆ 100 ಹೊಸ ಬಸ್‌ಗಳನ್ನು ನೀಡಲಿದೆ ಎಂದರು.

ಶ್ರೀಮಠದಿಂದ ಸಮಪಾಲು ಸಮಬಾಳು:ಆದಿ ಚುಂಚನಗಿರಿ ಪುಣ್ಯಕ್ಷೇತ್ರವು ಕೇವಲ ಒಕ್ಕಲಿಗ ಸಮುದಾಯದ ಹಿತವನ್ನಷ್ಟೆ ಕಾಯುತ್ತಿಲ್ಲ. ಎಲ್ಲಾ ಸಮುದಾಯವನ್ನು ಒಂದೇ ರೀತಿಯಲ್ಲಿ ಪರಿಗಣಿಸುತ್ತಿದೆ. ಇದರಿಂದಾಗಿ ಎಲ್ಲ ವರ್ಗದ ಮಕ್ಕಳು ಶ್ರೀಮಠದಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಮೂಲಕ ಶ್ರೀಮಠವು ಕುವೆಂಪು ಅವರ ತತ್ವ ಆದರ್ಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.