ಮುಸುಕಿನಜೋಳದಲ್ಲಿ ಉಲ್ವಣಗೊಳ್ಳುತ್ತಿರುವ ಕೇದಿಗೆ, ಬೂಜು ರೋಗ

| Published : Jun 21 2025, 12:49 AM IST

ಮುಸುಕಿನಜೋಳದಲ್ಲಿ ಉಲ್ವಣಗೊಳ್ಳುತ್ತಿರುವ ಕೇದಿಗೆ, ಬೂಜು ರೋಗ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಗು ಮತ್ತು ಬಾಳೆ ಬೆಳೆಯ ಬೇಸಾಯ ಕ್ರಮಗಳು ಹಾಗೂ ಅಳವಡಿಸಬೇಕಾದ ತಾಂತ್ರಿಕತೆಗಳ ಬಗ್ಗೆ ಮಾಹಿತಿ

ಕನ್ನಡಪ್ರಭ ವಾರ್ತೆ ಮೈಸೂರುನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2025-26ನೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕಿನ ಹಂಪಾಪುರ ಹೋಬಳಿಯ ಚಿಕ್ಕಕೆರೆಯೂರು ಗ್ರಾಮದಲ್ಲಿ ತೆಂಗು ಮತ್ತು ಬಾಳೆ ಬೆಳೆಯಲ್ಲಿ ಸಮಗ್ರ ಬೇಸಾಯ ಕ್ರಮಗಳು ಹಾಗೂ ಮುಸುಕಿನಜೋಳದ ಬೆಳೆಯಲ್ಲಿ ಕೀಟ, ರೋಗಗಳ ಹತೋಟಿ ಕ್ರಮಗಳು ಕುರಿತು ಗುರುವಾರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು.ನಿವೃತ್ತ ಪ್ರಾಧ್ಯಾಪಕ ಡಾ.ಸಿ. ಗೋವಿಂದರಾಜು ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.ತರಬೇತಿ ಕೇಂದ್ರದಲ್ಲಿ ಆಯೋಜಿಸುತ್ತಿರುವ ವಿವಿಧ ಆನ್ ಲೈನ್ ಮತ್ತು ಸಾಂಸ್ಥಿಕ ತರಬೇತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಅದರ ಸದುಪಯೋಗ ಪಡೆಯುವಂತೆ ರೈತರಿಗೆ ತರಬೇತಿ ಸಂಯೋಜಕ ಎಚ್.ಆರ್. ರಾಜಶೇಖರ ಮನವಿ ಮಾಡಿದರು.ಚಂದ್ರಮೌಳೇಶ್ವರ ಮಹಿಳಾ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಉಪಾಧ್ಯಾಕ್ಷೆ ಸುಧಾಮಣಿ, ಸಿಇಓ ಲಾವಣ್ಯ ಹಾಗೂ ನಿರ್ದೇಶಕರು, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದಾಸೇಗೌಡ ಮತ್ತು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಂಜೇಗೌಡ ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನ ತೋಟಗಾರಿಕೆ ವಿಷಯ ತಜ್ಞ ಡಾ.ಜಿ.ಎಂ. ವಿನಯ್ ಅವರು ತೆಂಗು ಮತ್ತು ಬಾಳೆ ಬೆಳೆಯ ಬೇಸಾಯ ಕ್ರಮಗಳು ಹಾಗೂ ಅಳವಡಿಸಬೇಕಾದ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಿದರು.ತರಬೇತಿಯ ಅಂಗವಾಗಿ ಈ ಭಾಗದ ಪ್ರಮುಖ ಬೆಳೆಗಳಾದ ಹತ್ತಿ, ಶುಂಠಿ ಮತ್ತು ಮುಸಕಿನ ಜೋಳ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿಯ ನಿವೃತ್ತ ಪ್ರಾಧ್ಯಾಪಕ ಡಾ.ಸಿ. ಗೋವಿಂದರಾಜು ಮಾಹಿತಿ ನೀಡಿದರು.ಇತ್ತೀಚಿಗೆ ಬಿದ್ದ ಹೆಚ್ಚು ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಮುಸುಕಿನಜೋಳದಲ್ಲಿ ಬೂಜು, ಕೇದಿಗೆ ರೋಗ ಉಲ್ವಣಗೊಳ್ಳುತ್ತಿದ್ದು, ಇದರಿಂದ ಇಳುವರಿ ನಷ್ಟ ಸಾಧ್ಯತೆ ಇರುವುದರಿಂದ ರೈತರು ರೋಗ ಲಕ್ಷಣ ಕಂಡ ಕೂಡಲೆ ಮೆಟಲಾಕ್ಸಿಲ್ 8 ಡಬ್ಲುಪಿ + ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತೀ ಒಂದು ಲೀಟರ್ ನೀರಿಗೆ ಎರಡು ಗ್ರಾಂನಂತೆ (ಎಕರೆಗೆ 600 ಗ್ರಾಂ) ಮಿಶ್ರಣಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸಬೇಕು ಎಂದು ತಿಳಿಸಿದರು. ಮುಸುಕಿನ ಜೋಳ ಬಿತ್ತನೆಗೆ ಮೊದಲು ಪ್ರತಿ ಒಂದು ಕೆಜಿ ಬಿತ್ತನೆ ಬೀಜಕ್ಕೆ ಮೂರು ಗ್ರಾಂ ಮೆಟಲಾಕ್ಸಿಲ್ 8 ಡಬ್ಲುಪಿ + ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶೇಕಡ 30 ರಿಂದ 40 ರಷ್ಟು ರೋಗ ನಿಯಂತ್ರಣವಾಗುತ್ತದೆ. ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ಬೂಜು, ಕೇದಿಗೆ ರೋಗ ನಿರೋಧಕ ತಳಿಗಳಾದ ಎಂಎಎಚ್‌-14-5, ಎಂಎಎಚ್‌ 1137 (ಹೇಮ), ಎಂಎಎಚ್‌ -2049(ನಿತ್ಯಶ್ರೀ), ಎಂಎಎಚ್‌-14-138, ಎಂಎಎಚ್‌ -15-84 ತಳಿಗಳನ್ನು ಬೆಳೆಯುವುದು ಸೂಕ್ತ.ಕೃಷಿ ಇಲಾಖೆಯಲ್ಲಿ ಅನುಷ್ಟಾನಗೊಳಿಸುವ ವಿವಿಧ ಯೋಜನೆಗಳಡಿ ದೊರೆಯುವ ಸಹಾಯಧನ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಹಂಪಾಪುರ ಹೋಬಳಿಯ ಕೃಷಿ ಅಧಿಕಾರಿ ಜಿ. ಸಿದ್ದಪ್ಪಸ್ವಾಮಿ ಮಾಹಿತಿ ನೀಡಿದರು.ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಸರ್ಕಾರ ಆಧಿ ಸೂಚಿಸಿರುವ ವಿವಿಧ ಬೆಳೆಗಳಿಗೆ ರೈತರು ಪಾವತಿಸಬೇಕಾದ ವಿಮಾ ಕಂತು ಹಾಗೂ ಮಾನದಂಡಗಳ ಕುರಿತು ಟಾಟಾ ಎ ಐ ಜಿ ಜನರಲ್ ಇನ್ಶುರೆನ್ಸ್ ಕಂಪನಿ ನಿಯಮಿತದಲ್ಲಿ ಎಚ್.ಡಿ. ಕೋಟೆ ತಾಲೂಕು ಸಂಯೋಜಕ ಮುರಳೀಧರ್ ಮಾಹಿತಿ ನೀಡಿದರು.ಕೃಷಿ ಅಧಿಕಾರಿ ಜಿ. ಸಿದ್ದಪ್ಪಸ್ವಾಮಿ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಕಿ ರಕ್ಷಿತ, ವಿನಯ್ ಅಸೋಡೆ ಇದ್ದರು.60ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿದ್ದರು. ತರಬೇತಿ ಸಂಯೋಜಕ ಹಾಗೂ ಕೃಷಿ ಅಧಿಕಾರಿ ಎಚ್.ಆರ್. ರಾಜಶೇಖರ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.