ಮುದ್ದೇಬಿಹಾಳ : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ನಾಗರಬೆಟ್ಟ ಆಕ್ಸ್‌ಫರ್ಡ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸೌಜನ್ಯ ಕಂದಕೂರ 625ಕ್ಕೆ 625 ಅಂಕ ಗಳಿಸಿ, ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕಿನ ನಾಗರಬೆಟ್ಟ ಆಕ್ಸ್‌ಫರ್ಡ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸೌಜನ್ಯ ಕಂದಕೂರ 625ಕ್ಕೆ 625 ಅಂಕ ಗಳಿಸಿ, ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

ವಿದ್ಯಾರ್ಥಿನಿ ಸೌಜನ್ಯ ನೆರೆಯ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಶಿಕ್ಷಕ ದಂಪತಿ ಬಸವರಾಜ ಕಂದಕೂರ ಮತ್ತು ಸುಜಾತಾ ಕಂದಕೂರ ಅವರು ಪುತ್ರಿಯಾಗಿದ್ದಾರೆ. 1ರಿಂದ 5ನೇ ತರಗತಿಯನ್ನು ಕಡಪಟ್ಟಿ ಇಂಟರನ್ಯಾಷನಲ್ ಶಾಲೆ, 6-7ನೇ ತರಗತಿಯನ್ನು ಹುನಗುಂದದಲ್ಲಿ ಹಾಗೂ 8-10ನೇ ತರಗತಿಯನ್ನು ನಾಗರಬೆಟ್ಟ ಆಕ್ಸ್‌ಫರ್ಡ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಿದ್ದಾಳೆ. ಉತ್ತಮವಾಗಿ ಅಭ್ಯಾಸ ಮಾಡಿದ್ದ ಸೌಜನ್ಯ, ಉತ್ತಮ ಅಂಕಗಳನ್ನು ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದಳು. ಆದರೆ, ರಾಜ್ಯಕ್ಕೆ ಟಾಪರ್‌ ಆಗಿರುವುದು ಮತ್ತಷ್ಟು ಸಂತಸ ಹಂಚಿಕೊಂಡಿದ್ದಾಳೆ.

ಈ ಬಾರಿ ಎಸ್ಸೆಸ್ಸೆಲ್ಸಿನಲ್ಲಿ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲಿ ವಿಜಯಪುರ ಜಿಲ್ಲೆಯ ಸೌಜನ್ಯ ಒಬ್ಬರಾಗಿದ್ದು ಹೆಮ್ಮೆ ಸಂಗತಿ. ಈ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿಸಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಆಕ್ಸ್‌ಫಡ್ ಸಂಸ್ಥೆಯ ಚೇರ್ಮನ್ ಎಂ.ಎಸ್. ಪಾಟೀಲ, ಆಡಳಿತಾಧಿಕಾರಿ ಅಮಿತಗೌಡ ಪಾಟೀಲ, ದರ್ಶನಗೌಡ ಪಾಟೀಲ ಹಾಗೂ ಶಾಲೆಯ ಸಿಬ್ಬಂದಿ ವರ್ಗ, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ. ----

ಎಸ್ಸೆಸ್ಸೆಲ್ಸಿನಲ್ಲಿ 625ಕ್ಕೆ 625 ಅಂಕ ಪಡೆದುಕೊಂಡು, ರಾಜ್ಯಕ್ಕೆ ಟಾಪರ್‌ ಆಗಿರುವುದು ತೀವ್ರ ಸಂತಸ ತಂದಿದೆ. ಇದಕ್ಕೆ ತಂದೆ-ತಾಯಿ, ಶಿಕ್ಷಕರ ಮಾರ್ಗದರ್ಶನವೇ ಕಾರಣ. ಮುಂದೆ ಮೆಡಿಕಲ್ ಕ್ಷೇತ್ರದಲ್ಲಿ ಓದಬೇಕು ಎಂಬ ಆಸೆ ಇದೆ. ಅದಕ್ಕೆ ಈಗಿನಿಂದಲೇ ಅಗತ್ಯವಾಗಿರುವ ತಯಾರಿ ಮಾಡಿಕೊಳ್ಳುತ್ತೇನೆ.

- ಸೌಜನ್ಯ ಕಂದಕೂರ, ಎಸ್ಸೆಸ್ಸೆಲ್ಸಿ ಟಾಪರ್,

-------

ಎಸ್ಸೆಸ್ಸೆಲ್ಸಿಯಲ್ಲಿ ಮಗಳು ರಾಜ್ಯಕ್ಕೆ ಟಾಪರ್ ಆಗಿದ್ದು, ತುಂಬಾ ಸಂತೋಷವಾಗಿದೆ. ಇದಕ್ಕೆ ಶಾಲೆ ಶಿಕ್ಷಕ ವರ್ಗವೇ ಕಾರಣ. ಸೂಕ್ತ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ.

- ಬಸವರಾಜ ಕಂದಕೂರ, ಸೌಜನ್ಯ ತಂದೆ

-----------

ನಾಗರಬೆಟ್ಟ ಆಕ್ಸ್‌ಫರ್ಡ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾಧನೆ ಕೇವಲ ನಮ್ಮ ಶಾಲೆಯ ಗೌರವ ಮಾತ್ರವಲ್ಲ, ತಾಲೂಕು ಮತ್ತು ಜಿಲ್ಲೆಯ ಗೌರವವನ್ನು ಕೂಡ ವಿದ್ಯಾರ್ಥಿನಿ ಎತ್ತಿ ಹಿಡಿದಿದ್ದಾಳೆ. ಆಕೆಯ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಶುಭವಾಗಲಿ. ನಮ್ಮ ಶಾಲೆಯ ಬೋಧಕ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ. ಜತೆಗೆ ವಿದ್ಯಾರ್ಥಿಗಳ ಪರಿಶ್ರಮವೂ ಇದೆ. ಜತೆಗೆ ಪೋಷಕರ ಪ್ರೋತ್ಸಾಹವನ್ನು ಸ್ಮರಿಸಬೇಕಿದೆ.

-ಎಂ.ಎಸ್. ಪಾಟೀಲ, ಆಕ್ಸ್‌ಫಡ್ ಸಂಸ್ಥೆಯ ಚೇರ್ಮನ್