ಸಾರಾಂಶ
ಮುಳಗುಂದ: ಹಲವು ಶತಮಾನಗಳ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯುಳ್ಳ ನಾಗಾವಿಯ ಶ್ರೀಯಲ್ಲಮ್ಮದೇವಿ ದೇವಸ್ಥಾನಕ್ಕೆ ಲಕ್ಷೋಪಲಕ್ಷ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ಭಕ್ತರ ಪಾಲಿನ ಭಾಗ್ಯದೇವತೆಯಾಗಿರುವ ಈ ತಾಯಿಯ ಮಹಿಮೆ ಅಪಾರ.ಇಲ್ಲಿಗೆ ಆಗಮಿಸುವ ಭಕ್ತರ ಹರಕೆಗಳು ಈಡೇರುವುದು ಶತಸಿದ್ಧ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಇಂತಹ ಯಲ್ಲಮ್ಮದೇವಿಯ ಪುಣ್ಯಕ್ಷೇತ್ರದ ಮಹಿಮೆ ಎಷ್ಟು ಕೊಂಡಾಡಿದರೂ ಕಡಿಮೆ ಅನಿಸುವುದಿಲ್ಲ ಎಂದು ದೇವಿ ಆರಾಧಕ ಶಂಭುಲಿಂಗಯ್ಯ ಕಲ್ಮಠ ಹೇಳಿದರು.
ಸಮೀಪದ ನಾಗಾವಿ ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ನಾಗಾವಿ ಗ್ರಾಮದ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಗಾವಿ ನಾನಾ ಎಂಬ ಯುಟ್ಯೂಬ್ ಹಾಗೂ ಯಲ್ಲಮ್ಮದೇವಿಯ ಭಕ್ತಿಗೀತೆ ಲೋಕಾರ್ಪಣೆ ಮಾಡಿ ಮಾತನಾಡಿದರು.ಕೆ.ಬಿ. ಮರಡ್ಡಿ ಮಾತನಾಡಿ, ಭಕ್ತರ ಸಹಕಾರ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ.ಇನ್ನಷ್ಟು ಭಕ್ತರನ್ನು ಆಕರ್ಷಣೆಗೊಳಿಸಲು ನಮ್ಮೂರಿನ ಸೋಮೇಶ ಹಿರೇಮಠ ಪ್ರತಿಷ್ಠಾನದವರು ಭಕ್ತಿ ಗೀತೆ ಹೊರ ತರುತ್ತಿರುವುದು ಸಂತೋಷದ ವಿಷಯ. ನಾಗಾವಿ ನಾನಾ ಯೂಟ್ಯೂಬ್ ಬಿಡುಗಡೆಗೊಳಿಸಿದ ಭಕ್ತಿಗೀತೆ ಲಕ್ಷಾಂತರ ಜನ ವೀಕ್ಷಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರು.
ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷ ಶಿಶುವಿನಹಳ್ಳಿಯ ಬಸವಣ್ಣೆಯ್ಯಸ್ವಾಮಿ ಹಿರೇಮಠ ಮಾತನಾಡಿದರು.ಗವಿಯಪ್ಪಗೌಡ ಪಾಟೀಲ, ತುಳಸಿಗಿರಿ ಮರಡ್ಡಿ, ಕೃಷ್ಣಗೌಡ ರಂಗನಗೌಡ್ರ, ಷಣ್ಮುಖಗೌಡ ಪಾಟೀಲ, ಮೈಲಾರಪ್ಪ ತಾಮ್ರಗುಂಡಿ, ಯಮನೂರಸಾಬ್ ನದಾಫ, ಚಂದ್ರಶೇಖರಯ್ಯ, ರಾಮಚಂದ್ರಸಾ ಶಿದ್ಲಿಂಗ್, ಕರಿಯಪ್ಪ ಹವಳೆಪ್ಪನವರ, ರಾಘವೇಂದ್ರ ಹಬೀಬ ಮುಂತಾದವರು ಉಪಸ್ಥಿತರಿದ್ದರು. ಬಸವಣ್ಣೆಯ್ಯಸ್ವಾಮಿ ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.