ಸಾರಾಂಶ
ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ವೀರ ಯೋಧ ಪ್ರವೀಣ್ ಸುಭಾಸ್ ಖಾನಗೌಡ್ರ ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಲೆಗೆ ಆಕಸ್ಮಿಕ ಗುಂಡು ಬಿದ್ದು ಅಸುನೀಗಿದ್ದಾರೆ.
ಬೆಳಗಾವಿ : ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ವೀರ ಯೋಧ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಲೆಗೆ ಆಕಸ್ಮಿಕ ಗುಂಡು ಬಿದ್ದು ಅಸುನೀಗಿದ್ದಾರೆ.
ಅಗಲಿದ ವೀರಯೋಧನಿಗೆ ತಂದೆ, ತಾಯಿ, ಸಹೋದರ ಹಾಗೂ ಅಪಾರ ಬಂಧು-ಬಳಗವಿದೆ. ಸಾಯುವುದಕ್ಕೂ ಮೊದಲೇ ಅವರು ತಮ್ಮ ಕುಟುಂಬದೊಂದಿಗೆ ಮಾತನಾಡಿದ್ದರು. ಮಿಸ್ ಫೈರ್ ಎಂದು ಸೇನಾಧಿಕಾರಿಗಳು ಹೇಳಿದ್ದು, ತನಿಖೆ ನಡೆಯುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಲ್ಲೋಳಿ ಪಟ್ಟಣದಲ್ಲಿ 2000ನೇ ಇಸ್ವಿಯಲ್ಲಿ ಜನಿಸಿದ ಪ್ರವೀಣ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕಲ್ಲೋಳಿ, ಖನಗಾಂವ ಗ್ರಾಮದಲ್ಲಿ ಮುಗಿಸಿ, ಪಿಯುಸಿ, ಪದವಿ ಶಿಕ್ಷಣವನ್ನು ಗೋಕಾಕದಲ್ಲಿ ಮುಗಿಸಿದರು. ಫೆ.12,2020 ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾದ ಪ್ರವೀಣ ಕೇರಳದ ಕೊಚ್ಚಿಯಲ್ಲಿ 1 ವರ್ಷ ತರಬೇತಿ ಮುಗಿಸಿದರು. ನಂತರ ಅಂಡಮಾನದಲ್ಲಿ 3 ವರ್ಷ ಹಾಗೂ ಚೆನೈನಲ್ಲಿ 1 ವರ್ಷ ಸೇವೆ, ಭಾರತೀಯ ನೌಕಾಪಡೆಯಲ್ಲಿ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಕಲ್ಲೋಳಿ ಪಟ್ಟಣದ ಪಂಚಾಯತ ಆವರಣದ ಹತ್ತಿರ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಬೆಳಗ್ಗೆ 11ಕ್ಕೆ ಅಂತ್ಯಕ್ರಿಯೆ ನಡೆಯಲಿದ್ದು. ಇದಕ್ಕೂ ಮುನ್ನ ಸಂಗನಕೇರಿ ಗ್ರಾಮದಿಂದ ಕಲ್ಲೋಳಿ ಪಟ್ಟಣದವರೆಗೆ ಯೋಧನ ಗೌರವ ನಮನ ಯಾತ್ರೆ ನಡೆಯಲಿದೆ.ಸಂತಾಪ:ಅಗಲಿದ ವೀರ ಯೋಧ ಪ್ರವೀಣ ಖಾನಗೌಡ್ರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಈರಣ್ಣ ಕಡಾಡಿ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ,ಸಹಕಾರಿಯ ಧುರೀಣ ಬಿ.ಬಿ.ಬೆಳಕೂಡ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.